ಸಾರಾಂಶ
ಧಾರ್ಮಿಕ ಸಂಘರ್ಷಗಳಿಗೆ ಅವಕಾಶ ನೀಡುವುದು ಬೇಡ. ಇನ್ನೊಬ್ಬರ ಧಾರ್ಮಿಕ ಭಾವನೆಗೆ ಯಾರಿಂದಲೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅನ್ಯಧರ್ಮೀಯರನ್ನೂ ಗೌರವಿಸುವಂತಹ ಮನೋಭಾವನೆ ಪ್ರತಿಯೊಬ್ಬರೂ ಬೆಳೆಸಿಕೊಳ್ಳುವಂತೆ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಬ್ಯಾಡಗಿ: ದೇವಾಲಯಗಳು ಧಾರ್ಮಿಕ ಪರಂಪರೆಗಳ ಪ್ರತೀಕವಾಗಿವೆ. ಅವುಗಳ ನಿರ್ಮಾಣಕ್ಕೆ ಗ್ರಾಮಗಳೇ ಪಣ ತೊಟ್ಟು ನಿಲ್ಲುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಇತ್ತೀಚೆಗೆ ಧಾರ್ಮಿಕ ಆಚರಣೆಯಲ್ಲಿ ಸ್ಪರ್ಧೆಗಿಳಿಯುತ್ತಿರುವುದು ಬಹಳಷ್ಟು ಅಪಾಯಕಾರಿ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.
ತಾಲೂಕಿನ ಅಂಗರಗಟ್ಟಿ ಗ್ರಾಮದ ಆಂಜನೇಯ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಜರುಗಿದ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡಿದರು.ಧಾರ್ಮಿಕ ಸಂಘರ್ಷಗಳಿಗೆ ಅವಕಾಶ ನೀಡುವುದು ಬೇಡ. ಇನ್ನೊಬ್ಬರ ಧಾರ್ಮಿಕ ಭಾವನೆಗೆ ಯಾರಿಂದಲೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅನ್ಯಧರ್ಮೀಯರನ್ನೂ ಗೌರವಿಸುವಂತಹ ಮನೋಭಾವನೆ ಪ್ರತಿಯೊಬ್ಬರೂ ಬೆಳೆಸಿಕೊಳ್ಳುವಂತೆ ತಿಳಿಸಿದರು.
ಮುಜರಾಯಿ ಇಲಾಖೆ ಸೇರಿದಂತೆ ವಿವಿಧ ಮೂಲಗಳಿಂದ ದೇವಸ್ಥಾನಗಳ ಅಭಿವೃದ್ದಿಗೆ ಅನುದಾನ ನೀಡಿದ್ದೇವೆ. ಹಿಂದಿನ ಅವಧಿಯಲ್ಲಿ ಗ್ರಾಮದ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ₹15 ಲಕ್ಷ ಗೋಪುರಕ್ಕೆ ಸೇರಿದಂತೆ ಒಟ್ಟು ₹25 ಲಕ್ಷ ಮಂಜೂರಾಗಿದೆ. ಗ್ರಾಮಸ್ಥರ ಮತ್ತು ದಾನಿಗಳ ಸಹಕಾರದಿಂದ ದೇವಸ್ಥಾನ ಪೂರ್ಣಗೊಂಡಿದ್ದು, ಶಿವಾಚಾರ್ಯರನ್ನು ಕರೆಸಿ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಧಾರ್ಮಿಕ ಸಂಸ್ಕೃತಿ: ಸಾನಿಧ್ಯ ವಹಿಸಿದ್ದ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶ್ರೀ ಮಾತನಾಡಿ, ಸಾವಿರಾರು ವರ್ಷಗಳಿಂದ ಗ್ರಾಮೀಣರು ಪ್ರದೇಶದಲ್ಲಿ ಹಬ್ಬ ಹರಿದಿನಗಳು, ಜಾತ್ರೆ, ಉತ್ಸವ ಇತ್ಯಾದಿಗಳಲ್ಲಿ ಸಾಮರಸ್ಯ, ಭಾವೈಕ್ಯತೆ, ಸಮಾನತೆಗಳಿಗೆ ಆದ್ಯತೆ ನೀಡಿದೆ. ಸಮೂಹದಲ್ಲಿ ಹಂಚಿಕೊಂಡು ತಿನ್ನುವ ಸ್ವಭಾವ ಬೆಳೆಸಿಕೊಂಡಿದ್ದೇವೆ. ಹೊಸ ಪೀಳಿಗೆ ಇದನ್ನು ಅನುಸರಿಸುವುದು ಮಹತ್ವವಾಗಿದೆ ಎಂದರು.ಧಾರ್ಮಿಕ ಸಂಘರ್ಷಕ್ಕೆ ಕಾರಣ: ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಯುದ್ಧದಿಂದ ಶಾಂತಿ ಸಾಧ್ಯವಿಲ್ಲ ಎಂಬುದನ್ನು ಅರಿತ ಬಸವೇಶ್ವರ, ಕನಕದಾಸ, ಅಶೋಕ ಗೌತಮಬುದ್ಧರು ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಧಾರ್ಮಿಕ ಬೋಧನೆಗಳಲ್ಲಿ ತೊಡಗುವ ಮೂಲಕ ದಾರ್ಶನಿಕರಾದರಲ್ಲದೇ ಇಡೀ ವಿಶ್ವಕ್ಕೆ ಅನ್ವಯಿಸುವಂತಹ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅಂಥದ್ದೊಂದು ವಿಶಿಷ್ಟ ಪರಂಪರೆ ಹೊಂದಿರುವ ಭಾರತ ಇದೀಗ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗುತ್ತಿರುವುದು ದುರಂತದ ಸಂಗತಿ ಎಂದರು.ಮಾಜಿ ಶಾಸಕ ಸುರೇಶಗೌಡ ಪಾಟೀಲ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಹಾವೆಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ, ನಾಗರಾಜ ಆನ್ವೇರಿ, ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಬಗಡಿ, ಉಪಾಧ್ಯಕ್ಷ ನಾಗರಾಜ ಹಾದಿಮನಿ, ಗ್ರಾಪಂ ಅಧ್ಯಕ್ಷ ರೇಣುಕಮ್ಮ ತಗಡಿನಮನಿ, ಉಪಾಧ್ಯಕ್ಷ ನೀಲಗಿರಿಯಪ್ಪ ಕಾಕೋಳ, ಯಶೋದಾ ಕಮತರ, ಶಿವಪುತ್ರಪ್ಪ ಅಗಡಿ ಇತರರಿದ್ದರು.