ಮೇ 2ರಂದು ಸೇವೆಗೆ ಮರಳಿದ ತೋಳಹುಣಸೆ ಯೋಧ

| Published : May 13 2025, 01:38 AM IST

ಸಾರಾಂಶ

ಪಾಕಿಸ್ತಾನದ ವಿರುದ್ಧ ಯುದ್ಧದ ಕಾರ್ಮೋಡ ಆವರಿಸಿದೆ. ಸೈನಿಕರ ಊರೆಂದೇ ಖ್ಯಾತಿ ಪಡೆದ, ಎರಡು ಮನೆಗೊಬ್ಬ ಯೋಧರ ಗ್ರಾಮವೆಂದೇ ಹೆಸರಾದ ತಾಲೂಕಿನ ತೋಳಹುಣಸೆಗೆ ರಜೆ ಮೇಲೆ ಬಂದಿದ್ದ ಯೋಧನೊಬ್ಬ ದೇಶದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಕರ್ತವ್ಯದ ಕರೆಗೆ ಓಗೊಟ್ಟು, ಮೇ 2ರಂದು ದೇಶ ಸೇವೆಗೆ ಮರಳಿದ್ದಾರೆ.

- ಭಾರತ ಸೇನೆಗೆ ಬಲ ತುಂಬಿರುವ ತೋಳಹುಣಸೆ ಗ್ರಾಮ । ರಜೆಗೆ ಊರಿಗೆ ಬಂದಿದ್ದ ಯೋಧರೆಲ್ಲಾ ಕರ್ತವ್ಯಕ್ಕೆ ದೌಡು

- 250-300 ಯೋಧರಿರುವ ಕರ್ನಾಟಕದ ಯೋಧರ ಹಳ್ಳಿಯಿದು । ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಬಂತೆಂದರೆ ಕುಟುಂಬಗಳಲ್ಲಿ ಆತಂಕ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪಾಕಿಸ್ತಾನದ ವಿರುದ್ಧ ಯುದ್ಧದ ಕಾರ್ಮೋಡ ಆವರಿಸಿದೆ. ಸೈನಿಕರ ಊರೆಂದೇ ಖ್ಯಾತಿ ಪಡೆದ, ಎರಡು ಮನೆಗೊಬ್ಬ ಯೋಧರ ಗ್ರಾಮವೆಂದೇ ಹೆಸರಾದ ತಾಲೂಕಿನ ತೋಳಹುಣಸೆಗೆ ರಜೆ ಮೇಲೆ ಬಂದಿದ್ದ ಯೋಧನೊಬ್ಬ ದೇಶದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಕರ್ತವ್ಯದ ಕರೆಗೆ ಓಗೊಟ್ಟು, ಮೇ 2ರಂದು ದೇಶ ಸೇವೆಗೆ ಮರಳಿದ್ದಾರೆ.

ತೋಳಹುಣಸೆ ಗ್ರಾಮದ ಲಕ್ಷ್ಮಣ ನಾಯ್ಕ, ಶಕುಂತಲಾ ಬಾಯಿ ದಂಪತಿ ಪುತ್ರ ರವೀಂದ್ರಕುಮಾರ ಸಮರಕ್ಕೆ ಹೊರಟ ಯೋಧ. 15 ವರ್ಷಗಳಿಂದ ಸೇನೆಯಲ್ಲಿ ಯೋಧನಾಗಿದ್ದಾರೆ. ಗ್ರಾಮದ ಒಂದೊಂದು ಮನೆಯಲ್ಲಿ 2-3 ಜನ ಯೋಧರೂ ಇರುವುದು ವಿಶೇಷ. ಕುಟುಂಬದ ಜೊತೆಗೆ ಸಮಯ ಕಳೆಯಲೆಂದು ರಜೆ ಮೇಲೆ ಬಂದಿದ್ದ ಯೋಧ ರವೀಂದ್ರಕುಮಾರ ಸೇನೆಯ ಕರೆಯ ಮೇರೆಗೆ ತಕ್ಷಣವೇ ಹೊರಟಿದ್ದಾರೆ.

ರಜೆಗೆಂದು ಬಂದಿದ್ದ ಮಗ ಮನೆಯಲ್ಲಿರಲಿ, ಅವನು ಇಷ್ಟಪಡುವ ಅಡುಗೆಯನ್ನು ಮಾಡಿ ಬಡಿಸಿ, ಮಗನನ್ನು ಕಣ್ತುಂಬಿಕೊಳ್ಳುವ ಆಸೆಯಲ್ಲಿದ್ದ ತಾಯಿ ಹಾಗೂ ಕುಟುಂಬ ಸದಸ್ಯರು ಸಹ ರಜೆ ರದ್ಧಾಗಿ, ಸೇನೆಯ ಸೇವೆಗೆ ಹೊರಟು ನಿಂತ ಮನೆಯ ಮಗನನ್ನು ಕಣ್ಣೀರು ಹಾಕುತ್ತಲೇ ಮೇ 2ರಂದು ಬೀಳ್ಕೊಟ್ಟಿದ್ದಾರೆ. ಊರಿನ ಬಹುತೇಕ ಕುಟುಂಬಗಳಲ್ಲಿ ಸದ್ಯ ಇದೇ ಸ್ಥಿತಿ ಇದೆ.

ಮಿಲ್‌ ಬಂದಾಗಿದ್ದರಿಂದ ಸೇನೆ ಸೆಳೆತ:

ಸುಮಾರು 2500 ಜನಸಂಖ್ಯೆಯ ತೋಳಹುಣಸೆಯಲ್ಲಿ ಅನೇಕ ಊರುಗಳಿಂದಲೂ ಬಂದು ಜನರು ಬದುಕು ಕಟ್ಟಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಯಲ್ಲಮ್ಮ ಕಾಟನ್ ಮಿಲ್ ಇಲ್ಲಿನ ಜನರಿಗೆ ಆಸರೆಯಾಗಿತ್ತು. ಆದರೆ, 90 ದಶಕದಲ್ಲಿ ಎಲ್ಲ ಕಾರ್ಖಾನೆಗಳ ಮೇಲೆ ಕಾಲದ ಕರಿನೆರಳು ಬಿದ್ದು ಮಿಲ್ ಸಹ ಬಂದ್ ಆಯಿತು. ಆನಂತರವೇ ಗ್ರಾಮದಲ್ಲಿ ಸೇನೆ ಸೇರುವ ಯುವಕರ ಸಂಖ್ಯೆ ಹೆಚ್ಚುತ್ತಾಬಂದಿತು.

ತೋಳಹುಣಸೆಯಲ್ಲಿ 1994ರಲ್ಲಿ ನಾಲ್ವರು ಯುವಕರು ಕುಟುಂಬ ನಿರ್ವಹಣೆ ಜೊತೆಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಉತ್ಸಾಹದಿಂದ ಸೇನೆ ಸೇರಿದ್ದರು. ಅಂದಿನಿಂದ ಈ ಗ್ರಾಮದಿಂದ ಸೇನೆಗೆ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಬಂದಿತು. ಈಗಾಗಲೇ 50ಕ್ಕೂ ಹೆಚ್ಚು ಜನರು ಸೇನೆಯಿಂದ, ಸೇವೆಯಿಂದ ನಿವೃತ್ತರಾಗಿದ್ದಾರೆ. ಈವರೆಗೆ ಗ್ರಾಮದಲ್ಲಿ 250-300 ಮಂದಿ ಭಾರತದ ಸೇನೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಮಗ ದೇಶ ಸೇವೆ ಮಾಡುತ್ತಾನೆ ಎಂಬುದಾಗಿ ಕುಟುಂಬದವರು ಅಭಿಮಾನದಿಂದ ಹೇಳುತ್ತಾರೆ.

ಸೇನೆಯಿಂದ ನಿವೃತ್ತಿ ಹೊಂದಿ ಬಂದವರು ತಮ್ಮ ಊರಿನ ಮಕ್ಕಳು, ಯುವಜನರಿಗೆ ಸೇನೆ, ಕಾರ್ಯಾಚರಣೆ, ಶಿಸ್ತಿನ ಬಗ್ಗೆ ಹೇಳುತ್ತಾರೆ. ಸೇನೆಗೆ ಸೇರುವಂತಹ ಉತ್ಸಾಹ ನೂರ್ಮಡಿಗೊಳಿಸುತ್ತಲೇ ಇದ್ದಾರೆ. ಇಷ್ಟೆಲ್ಲಾ ಸಾಧನೆಗೆ ಗ್ರಾಮದ ಗರಡಿ ಮನೆ ಆಸರೆಯಾಗಿತ್ತು. ಈಗ ಆ ಗರಡಿ ಮನೆ ನಿರ್ವಹಣೆಯಾಗುತ್ತಿಲ್ಲ. ಗರಡಿ ಮನೆ ಕಸರತ್ತು, ಜಿಮ್‌ನ ತಾಲೀಮು ಇಲ್ಲಿನ ಯುವಕರ ಶಕ್ತಿ ಪೀಠವಾಗಿವೆ.

ಗ್ರಾಮದ ವೆಂಕಟೇಶ ನಾಯ್ಕ ಮಾತನಾಡಿ, ತೋಳಹುಣಸೆ ಯೋಧರು ಜಮ್ಮು- ಕಾಶ್ಮೀರ ಸೇರಿದಂತೆ ದೇಶ, ವಿದೇಶಗಳಲ್ಲಿ, ಶಾಂತಿಪಾಲನಾ ಪಡೆಯಲ್ಲೂ ಸೇವೆ ಸಲ್ಲಿಸಿದ್ದಾರೆ. 250-300ಕ್ಕೂ ಹೆಚ್ಚು ಯೋಧರು ದೇಶ ಸೇವೆ ಮಾಡಿದ್ದಾರೆ. ದೇಶ ಸೇವೆಗೆ ಹೋದ ನಾಲ್ಕೈದು ಯೋಧರು ಹುತಾತ್ಮರೂ ಆಗಿದ್ದಾರೆ. ರಜೆಗಾಗಿ ನಾಲ್ಕೈದು ಜನ ನಮ್ಮೂರಿನ ಯೋಧರು ಬಂದಿದ್ದರು. ಆದರೆ, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ರಜೆ ರದ್ದಾಗಿ, ತುರ್ತಾಗಿ ಗಡಿಗಳಲ್ಲಿ ಕರ್ತವ್ಯಕ್ಕೆ ತೆರಳಿದ್ದಾರೆ. ದೇಶ ಸೇವೆಗೆ ಮಡಿಕೇರಿ ಬಿಟ್ಟರೆ ರಾಜ್ಯದಿಂದ ಅತಿ ಹೆಚ್ಚು ಯೋಧರ ನೀಡಿರುವ ಊರು ತೋಳಹುಣಸೆ ಎಂಬುದು ನಾವೆಲ್ಲಾ ಹೆಮ್ಮೆಪಡಲು ಕಾರಣ ಎನ್ನುತ್ತಾರೆ.

- - -

(ಬಾಕ್ಸ್‌) * ಯುದ್ಧವೆಂದರೆ ಹೆಮ್ಮೆ, ದುಃಖ ಎರಡೂ ಇದೆ: ಯೋಧನ ತಾಯಿ ರಜೆ ಪೂರ್ಣಗೊಳಿಸದೇ ಸೇನೆಗೆ ಮರಳಿದ ಯೋಧ ರವೀಂದ್ರಕುಮಾರ ತಾಯಿ ಶಕುಂತಲಾ ಬಾಯಿ ಮಾತನಾಡಿ, ನಮ್ಮ ಮಗ 15-20 ವರ್ಷದಿಂದ ಕಾರ್ಗಿಲ್, ಜಮ್ಮು-ಕಾಶ್ಮೀರ, ವಿಶಾಖಪಟ್ಟಣ, ಕೇರಳದಲ್ಲಿ ಸೇವೆ ಮಾಡಿದ್ದಾರೆ. ರಜೆಗೆ ಊರಿಗೆ ಬಂದವನಿಗೆ ಗಡಿಯಲ್ಲಿ ಪರಿಸ್ಥಿತಿ ಸರಿ ಇಲ್ಲವೆಂದು ಸೇನೆ ರಜೆ ರದ್ದುಪಡಿಸಿ, ಕರ್ತವ್ಯಕ್ಕೆ ಕರೆಸಿಕೊಂಡಿದೆ. ದೇಶ ಸೇವೆಗೆ ಮಗ ತೊಡಗಿರುವುದು ನಮಗೆ ಹೆಮ್ಮೆ ಇದೆ. ಯುದ್ಧವೆಂದರೆ ಹೆಮ್ಮೆ, ದುಃಖ ಎರಡೂ ಇದೆ ಎನ್ನುತ್ತಾರೆ. ಮಗನಿಗೆ ಕರೆ ಮಾಡಿದರೆ ಹೆದರಬೇಡಮ್ಮ, ಏನೂ ಆಗೊಲ್ಲ. ಧೈರ್ಯದಿಂದ ಇರಿ ಎನ್ನುತ್ತಾನೆ. ರಾತ್ರಿ ಕರೆ ಮಾಡಿದ್ದೆವು. 24 ಗಂಟೆ ಕರ್ತವ್ಯಕ್ಕೆ ಹಾಕಿದ್ದು, ಊಟಕ್ಕೂ ಸಮಯ ಸಿಕ್ಕಿಲ್ಲವೆಂದು ಹೇಳಿದ. ಪಾಕಿಸ್ತಾನದವರು ಸುಖಾಸುಮ್ಮನೆ ಕಿರಿಕಿರಿ ಮಾಡುತ್ತಿದ್ದಾರೆ. ಅಂತಹ ದೇಶ, ಅಂತಹ ದೇಶದವರನ್ನು ಇಲ್ಲದಂತೆ ಮಾಡಬೇಕೆಂಬ ನನ್ನ ಮಗ ಸೇರಿದಂತೆ ಭಾರತೀಯ ಯೋಧರ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ ಇದೆ. ಮೇ 2ರಂದೇ ಮಗ ಕರ್ತವ್ಯಕ್ಕೆ ಹೋಗಿದ್ದು, ನಮ್ಮೂರಿನ ಯಾವ ಯೋಧರೂ ಈಗ ಊರಿಗೆ ಬಂದಿಲ್ಲ. ಎಲ್ಲರೂ ಸೇನೆಯ ಸೇವೆಯಲ್ಲಿದ್ದಾರೆ ಎಂದು ಶಕುಂತಲ ಬಾಯಿ ಹೇಳುತ್ತಾರೆ.

- - -

-11ಕೆಡಿವಿಜಿ91: ದಾವಣಗೆರೆ ತಾಲೂಕು ತೋಳಹುಣಸೆ ಗ್ರಾಮದ ಯೋಧ ರವೀಂದ್ರಕುಮಾರ.