ಸಾರಾಂಶ
ಕೊಪ್ಪಳ:
ಶಾಂತಿ, ಸಮಾನತೆ, ಏಕತೆಗಾಗಿ ಹೋರಾಡಿದವರು ಭಗವಾನ್ ಬುದ್ಧರೆಂದು ಇತಿಹಾಸದ ಚರಿತ್ರೆಗಳಲ್ಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಅನೇಕ ಧರ್ಮ, ಪಂಥಗಳಿವೆ. ಅವುಗಳೆಲ್ಲವನ್ನು ಸುಧಾರಿಸಿ ಹಾಗೂ ಒಂದುಗೂಡಿಸುವ ಕಲ್ಪನೆ ಗೌತಮ್ ಬುದ್ಧರದಾಗಿತ್ತು. ಆಸೆಯೆ ದುಃಖಕ್ಕೆ ಮೂಲ ಎಂಬ ಮಾತಿನಂತೆ ಯಾವುದೇ ಆಸೆಯಿಲ್ಲದೇ ಧರ್ಮ ಕಟ್ಟುವಂತಹ ಕೆಲಸವನ್ನು ಬುದ್ಧ ಮಾಡಿದ್ದಾರೆ. ಅದಕ್ಕಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು ಎಂದ ಅವರು, ಮಹನಿಯರ ಜಯಂತಿ ಆಚರಿಸುವ ಮೂಲಕ ಅವರ ಚರಿತ್ರೆ ಮೆಲಕು ಹಾಕುವ ಅವಕಾಶ ದೊರೆತಿದೆ ಎಂದು ಹೇಳಿದರು.ಬಸವಣ್ಣನವರಿಂದ ಅಂಬೇಡ್ಕರ್ ವರೆಗೆ ಹಲವು ಮಹನೀಯರು ಸಮಾಜ ಸುಧಾರಣೆಗಾಗಿ ಹಾಗೂ ಸರ್ವರಿಗೂ ಸಮ ಬಾಳು, ಸಮ ಪಾಲು ನೀಡಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದ ಅವರು, ಗೃಹಲಕ್ಷ್ಮೀ ಯೋಜನೆಯಡಿ ಬಂದ ಹಣ ಕೂಡಿಟ್ಟ ಜಿಲ್ಲೆಯ ಮಹಿಳೆಯರು ಬೋರ್ವೆಲ್ ಕೊರೆಸಿರುವುದು, ಮಕ್ಕಳಿಗೆ ಪುಸ್ತಕ, ಲ್ಯಾಪ್ಟ್ಯಾಪ್ ಕೊಡಿಸುತ್ತಿದ್ದಾರೆ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸಿದ್ಧಾರ್ಥ ಬುದ್ಧನಾಗಬೇಕಾದರೆ ತನ್ನ ಸಾಮ್ರಾಜ್ಯದ ಜನರು ಕಷ್ಟದಲ್ಲಿರುವುದನ್ನು ಕಂಡು ತನ್ನ ರಾಜ್ಯವೈಭೋಗ ತೋರದು ತಡರಾತ್ರಿಯಲ್ಲಿ ಮನೆಬಿಟ್ಟು ಬಂದು ಜಗತ್ತಿಗೆ ಶಾಂತಿ ಬೋಧನೆ ಮಾಡಿದರು ಎಂದು ಹೇಳಿದರು.ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಈ ಭೂಮಿಗೆ ಅವತರಿಸಿ ಬಂದ ಮಹಾನ ಪುರುಷರಾಗಿದ್ದಾರೆ. ಜಗತ್ತಿಗೆ ಬುದ್ಧ ಅರಿವೆಂಬ ಬೆಳಕು, ಬಸವಣ್ಣ ಮಾನವೀಯತೆಯ ಭಾವನೆ ಹಾಗೂ ಅಂಬೇಡ್ಕರ್ ಸಮಾನತೆ ನೀಡಿದ್ದಾರೆ ಎಂದರು.
ಬುದ್ಧರ ಕುರಿತು ವಿಶೇಷ ಉಪನ್ಯಾಸ ನೀಡಿದ ಬಿಇಒ ಶಂಕರಯ್ಯ ಟಿ.ಎಸ್., ವೈಶಾಖ ಪೂರ್ಣಿಮೆ ದಿನ ಬುದ್ಧರ ಜನನವಾಯಿತು. ಮೇಲು-ಕೀಳು, ಬಡವ-ಬಲ್ಲಿಗ, ಬಂಡವಾಳ ಶಾಹಿ ಮತ್ತು ಕಾರ್ಮಿಕ ವರ್ಗ, ಹೀಗೆ ವಿವಿಧ ವರ್ಗಗಳಲ್ಲಿ ತಾರತಮ್ಯ, ಅಸಮಾನತೆ, ಅಸಹಿಷ್ಣುತೆ ತುಂಬಿರುವ ಕಾಲದಲ್ಲಿ ಎಲ್ಲರು ಒಂದೇ ಎಂದು ಬೋಧಿಸಿದವರು ಬುದ್ಧ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ನಗರಸಭೆ ಸದಸ್ಯರಾದ ಸಿದ್ದಣ್ಣ ಮ್ಯಾಗೇರಿ, ಮುತ್ತುರಾಜ ಕುಷ್ಟಗಿ, ರಾಜಶೇಖರ ಆಡೂರ, ಗುರುರಾಜ ಹಲಗೇರಿ, ಅಕ್ಬರಪಾಶಾ ಪಲ್ಟನ್, ಮುಖಂಡರಾದ ಯಲ್ಲಪ್ಪ ಬಳಗನೂರ, ಸಿದ್ರಾಮಪ್ಪ ಹೊಸಮನಿ, ರಾಮಣ್ಣ ಕಲ್ಲಣ್ಣವರ್, ಜಿ.ಎಂ. ಬೆಲ್ಲದ, ಪ್ರಸನ್ನ ಗಡಾದ, ಶಿವಣ್ಣ ಹಂದ್ರಾಳ, ಯಲ್ಲಮ್ಮ ಗಿಣಿಗೇರಿ, ಮಹಾಲಕ್ಷ್ಮೀ ಕಂದಾರಿ ಸೇರಿದಂತೆ ಇತರರು ಇದ್ದರು.