ಸಾರಾಂಶ
ಹೊಸಪೇಟೆ : ರಾಜ್ಯದ ತಾಂಡಾ, ಹಟ್ಟಿ, ಹಾಡಿ, ಮಜಿರೆ, ಕ್ಯಾಂಪ್ಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಒಂದು ಲಕ್ಷ ಕುಟುಂಬಗಳಿಗೆ ಅಧಿಕೃತವಾಗಿ ಮೇ 20ರಂದು ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ನಗರದ ಪುನೀತ್ ರಾಜ್ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಸರ್ಕಾರದ ಸಾಧನಾ ಸಮಾವೇಶದ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಆಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ತಾಂಡಾ, ಹಟ್ಟಿ, ಹಾಡಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದರು. ರಾಜ್ಯದ ಅನೇಕ ವಸತಿ ಪ್ರದೇಶಗಳು ದಶಕಗಳಿಂದ ದಾಖಲೆ ಇಲ್ಲದೆ ಉಳಿದಿದ್ದವು. ಈಗ ವಿಶೇಷ ಕಾನೂನು ಮಾಡಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ತ್ವರಿತವಾಗಿ ಕೆಲಸ ಆಗಿರಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯನವರ ಸರ್ಕಾರ ಬಂದ ಬಳಿಕ ಎರಡು ವರ್ಷದಲ್ಲಿ ವಿಶೇಷ ಒತ್ತು ನೀಡಲಾಗಿದೆ. ಈಗ ಒಂದು ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಅದರಲ್ಲೂ ವಿಜಯನಗರ ಜಿಲ್ಲೆಯ 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದರು.
ಸರ್ಕಾರದ ಕೆಲಸಗಳು ಬಡವರಿಗೆ ತಲುಪಿದಾಗ ಸಾರ್ಥಕತೆ ಪಡೆಯಲಿದೆ. ಹಾಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಂಚ ಗ್ಯಾರಂಟಿಗಳ ಮಧ್ಯೆ ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವಿಜಯನಗರ ಜಿಲ್ಲೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಜೊತೆಗೆ ರಾಜ್ಯದ ಎಲ್ಲ ಭಾಗಗಳಿಗೆ ಸಂಪರ್ಕ ಕೊಂಡಿಯಾಗಿದೆ. ಮಧ್ಯಭಾಗ ಆಗಿರುವ ಇಲ್ಲಿಯೇ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.ಭಾರತ- ಪಾಕಿಸ್ತಾನ ಮಧ್ಯೆ ಕದನ ವಿರಾಮ ಘೋಷಣೆ ಆಗಿದ್ದು ಒಳ್ಳೆಯದು, ಪಾಕಿಸ್ತಾನಕ್ಕೆ ಮರೆಯಲಾರದ ಪಾಠ ಕಲಿಸುವುದಾಗಿ ಹೇಳಿ ಯುದ್ಧ ಆರಂಭಿಸಲಾಗಿತ್ತು. ಈಗ ಆ ರೀತಿ ಪಾಠ ಕಲಿಸಿದ್ದಾರಾ?. ಈಗ ಕದನ ವಿರಾಮ ಸ್ವಯಂ ತೀರ್ಮಾನನಾ ಇಲ್ಲವೇ ದೊಡ್ಡಣ್ಣನ ಪಾಠವಾ? ಗೊತ್ತಾಗಿಲ್ಲ. ಆರಂಭ ಮಾಡಿದ ಮೇಲೆ ಗುರಿ ತಲುಪಬೇಕು. ನಮ್ಮ ಗುರಿ ಈಡೇರಿದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
1971 ರಲ್ಲಿ ಪಾಕಿಸ್ತಾನ ಕೀಟಲೆ ಮಾಡಿದಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿ ಯುದ್ಧ ಘೋಷಿಸಿ ಹಿಂದೆ ಸರಿಯಲಿಲ್ಲ. 71 ಸಾವಿರ ಪಾಕಿಸ್ತಾನ ಸೈನಿಕರು ಮಂಡಿಯೂರುವಂತೆ ಮಾಡಿದ್ದರು. ಆಗ ನಾವು ಯುದ್ಧ ಗೆಲ್ಲುವವರೆಗೆ ಬಿಟ್ಟಿರಲಿಲ್ಲ. ಸಿಮ್ಲಾ ಒಪ್ಪಂದದ ಬಳಿಕ ಕಾಶ್ಮೀರ ವಿಷಯದಲ್ಲಿ ಬೇರೊಂದು ರಾಷ್ಟ್ರ ಮೂಗು ತೂರಿಸದಂತೆ ನೋಡಿಕೊಂಡಿದ್ದೆವು. ಈಗ ಕಾಶ್ಮೀರ ವಿಷಯ ಅಂತಾರಾಷ್ಟ್ರೀಯ ಸಮಸ್ಯೆಯಾದರೆ ನಮ್ಮ ಸಾರ್ವಭೌಮತ್ವ ಏನು ಉಳಿಯಿತು. ಇದೊಂದು ದ್ವಿಪಕ್ಷೀಯ ವಿಷಯವಾಗಿದೆ. ಇದನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿಸಬಾರದು ಎಂದರು. ಸಂಸದ ತುಕಾರಾಂ, ಶಾಸಕರಾದ ಎಚ್.ಆರ್. ಗವಿಯಪ್ಪ, ಎಂ.ಪಿ. ಲತಾ, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಇದ್ದರು.