ಸಾರಾಂಶ
ಭದ್ರಾವತಿ: ನಗರದ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಪೋಟವಾಗಿದ್ದು, ಸುಮಾರು 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ರೈಸ್ಮಿಲ್ನಲ್ಲಿ ಸಂಜೆ ಏಕಾಏಕಿ ಬಾಯ್ಲರ್ ಸ್ಪೋಟಗೊಂಡ ಪರಿಣಾಮ ರೈಸ್ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ 7ಜನರು ತೀವ್ರ ಗಾಯಗೊಂಡಿದ್ದು, ಗಾಯಾಳುಗಳಿಗೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ರೈಸ್ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ರಘು ಎಂಬಾತ ನಾಪತ್ತೆಯಾಗಿದ್ದು, ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಬಾಯ್ಲರ್ ಸ್ಪೋಟದಿಂದ ರೈಸ್ ಮಿಲ್ ಕಟ್ಟಡ ಹಾಗೂ ಚಾವಣಿ ಬಹುತೇಕ ಜಖಂಗೊಂಡಿದ್ದು, ರೈಸ್ ಮಿಲ್ ಸಮೀಪದ ಅಣ್ಣಾನಗರ ಹಾಗೂ ಹೊಸಮನೆ ಭಾಗದ ಕೆಲವು ಮನೆಗಳಿಗೂ ಹಾನಿ ಉಂಟಾಗಿದೆ.
ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ, ಮೆಸ್ಕಾಂ ಮತ್ತು ನಗರಸಭೆ ಸಿಬ್ಬಂದಿ ಹಾಗೂ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿಯಾಗಿರುವ ಕುರಿತು ಮಾಹಿತಿ ತಿಳಿದು ಬಂದಿಲ್ಲ.
ಈ ಭಾಗದ ವಿದ್ಯುತ್ ಕಡಿತಗೊಳಿಸಲಾಗಿದ್ದು, ಘಟನಾ ಸ್ಥಳಕ್ಕೆ ಸುತ್ತಮುತ್ತಲಿನಿಂದ ಜನರು ಜಮಾಯಿಸುತ್ತಿದ್ದು, ಕಾರ್ಯಾಚರಣೆ ತೊಂದರೆಯಾಗುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಯಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.