ಸಾರಾಂಶ
ಚಿಂತಾಮಣಿ: ಬೊಲೆರೋ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ದಂಡುಪಾಳ್ಯ ಗೇಟ್ ಬಳಿ ನಡೆದಿದೆ. ಆಂಧ್ರಪ್ರದೇಶದ ಕದರಿ ಮೂಲದ ಬೊಲೆರೋ ವಾಹನ ಮದನಪಲ್ಲಿ ಕಡೆಯಿಂದ ವಿಜಯಪುರ ಕಡೆಗೆ ಹೋಗುತ್ತಿದ್ದು, ದ್ವಿಚಕ್ರ ವಾಹನದಲ್ಲಿ ಮುರುಗಮಲ್ಲ ನಿವಾಸಿಗಳಾದ ಆಯಾಜ್ (೩೩) ಹಾಗೂ ಆತನ ಪತ್ನಿ ತರನ್ನುಂ (೨೨) ಇಬ್ಬರು ಬೇತಮಂಗಲ ಕಡೆ ಹೋಗುತ್ತಿದ್ದಾಗ ಬೊಲೆರೋ ವಾಹನ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತರನ್ನುಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಆಯಾಜ್ಗೆ ಗಂಭೀರ ಗಾಯಗಳಾಗಿದ್ದು ಬೊಲೆರೋ ವಾಹನದಲ್ಲಿ ಇದ್ದ ಕದರಿ ಮೂಲದ ಅದಲ್ಲಪ್ಪ ಬೀದಿಯ ಫಕ್ರುದ್ದೀನ್, ಆಜಾದ್, ಜಬೀನ, ಹಮೀದ್, ಶೋಯಿಬ್, ಸಲೀಮಾ, ಶಕೀರಾ, ಶಬ್ನಂ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲಾಗಿದೆ ಎಂದು ತಿಳಿದಿದೆ. ಗಂಭೀರ ಗಾಯಗೊಂಡಿರುವ ಆಯಾಜ್ ಗೆ ಕೋಲಾರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ವಿಷಯ ತಿಳಿದ ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.