ಜ. 27ರಂದು ದೇವಿಯ ಹೇಳಿಕೆ ಜರುಗುವುದು. ಜ. 28ಕ್ಕೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಜ. 29ಕ್ಕೆ ರಥೋತ್ಸವ ನೆರವೇರಲಿದೆ.

ರೋಣ: ತಾಲೂಕಿನ ಬೊಮ್ಮಸಾಗರ ಗ್ರಾಮದ ದುರ್ಗಾದೇವಿ ಜಾತ್ರೆ ಜ. 27ರಿಂದ 29ರ ವರೆಗೆ ಜರುಗಲಿದ್ದು, ಗ್ರಾಮದ ದುರ್ಗಾದೇವಿ ದೇವಸ್ಥಾನ ಸಭಾಮಂಟಪದಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶಾಂತಗೇರಿ ಗ್ರಾಪಂ, ತಾಪಂ, ತಹಸೀಲ್ದಾರ್, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ಜರುಗಿತು.

ಜ. 27ರಂದು ದೇವಿಯ ಹೇಳಿಕೆ ಜರುಗುವುದು. ಜ. 28ಕ್ಕೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಜ. 29ಕ್ಕೆ ರಥೋತ್ಸವ ನೆರವೇರಲಿದೆ. ಜಾತ್ರೆಗೆ ಹೊರ ರಾಜ್ಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ಭಕ್ತರಿಗೆ ಕುಡಿಯುವ ನೀರು, ವಾಹನಗಳಿಗೆ ಪಾರ್ಕಿಂಗ್, ಸುಗಮ ಸಂಚಾರ, ನೈರ್ಮಲ್ಯತೆ, ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಅಲ್ಲಲ್ಲಿ ನಾಕಾಬಂದಿ ಹಾಗೂ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಕ್ರಮಗಳನ್ನು ಕೈಗೊಳ್ಳಲು ಗ್ರಾಮಸ್ಥರು ಮನವಿ ಮಾಡಿದರು.

ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಜ. 27ರಿಂದ 29ರ ವರೆಗೆ ನಡೆಯಲಿರುವ ದುರ್ಗಾದೇವಿ ಜಾತ್ರೆಯು ಯಶಸ್ವಿಯಾಗಿ ಜರುಗುವಲ್ಲಿ ಪ್ರತಿಯೊಂದು ಇಲಾಖೆ ಅಧಿಕಾರಿಗಳು, ಗ್ರಾಪಂ‌ ಅಧಿಕಾರಿ, ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರ ಅತಿಮುಖ್ಯವಾಗಿದೆ. ಜಾತ್ರೆಗೆ ಬರುವ ಅಪಾರ ಜನಸ್ತೋಮಕ್ಕೆ ಕುಡಿಯುವ ನೀರು, ಜಾನುವಾರುಗಳನ್ನು ಮೇವು, ನೀರು, ವಿದ್ಯುತ್ ವ್ಯವಸ್ಥೆ, ವಾಹನಗಳ ನಿಲುಗಡೆಗೆ ಸೂಕ್ತ ಜಾಗ ಸೇರಿದಂತೆ ಯಾವುದೇ ತೊಂದರೆಗಳಾಗದಂತೆ ಆಯಾ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಗಮನ ಹರಿಸಬೇಕು. ಗ್ರಾಮಸ್ಥರು ಹಾಗೂ ಭಕ್ತರು ಸರ್ಕಾರದ ಮಾರ್ಗಸೂಚಿ ಮತ್ತು ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಬೇಕು. ಜಾತ್ರಾ ಮಹೋತ್ಸವ ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಸಲು ತಾಲೂಕಾಡಳಿತೊಂದಿಗೆ ಸಹಕರಿಸಬೇಕು ಎಂದರು.

ಸಭೆಯಲ್ಲಿ ಶರಣಗೌಡ ಪಾಟೀಲ ಸರ್ಜಾಪೂರ, ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ರೋಣ ತಹಸೀಲ್ದಾರ್ ನಾಗರಾಜ ಕೆ., ತಾಪಂ ಇಒ ಚಂದ್ರಶೇಖರ ಕಂದಕೂರ, ಎಪಿಎಂಸಿ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಜಿಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಮೋಹನ ಹಲ್ಲಣ್ಣನವರ ನರಗುಂದ ಡಿವೈಎಸ್‌ಪಿ ಪ್ರಭುಗೌಡ ಕಿದರಳ್ಳಿ, ಸಿಪಿಐ ವಿಜಯಕುಮಾರ, ಪಿಎಸ್ಐ ಪ್ರಕಾಶ ಬಣಕಾರ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಾದರ, ಪಿಡಿಒ ಎಸ್.ಕೆ. ಕವಡೆಲಿ, ಪರಶುರಾಮ ಅಳಗವಾಡಿ, ಬಸವರಾಜ ನವಲಗುಂದ, ಹನುಮಂತಪ್ಪ ಹಟ್ಟಿಮನಿ ಬಾಲಪ್ಪ ಮಾದರ, ಶಾಂತಪ್ಪ‌ ಜಾಲಿಹಾಳ, ಶಂಕ್ರಪ್ಪ ಹಟ್ಟಿಮನಿ, ಹುತ್ತಪ್ಪ ಮಾದರ, ಯಲ್ಲಪ್ಪ ಮಾದರ, ಹನುಮರಡ್ಡಿ ಕಳಕಾಪೂರ, ಹನುಮಂತಪ್ಪ ಉಸಲಕೊಪ್ಪ, ಅಂದಪ್ಪ ನಾಗನೂರ, ಚಂದ್ರ ನಾಗನೂರ, ಪಡಿಯಪ್ಪ ಹುಲ್ಲಣ್ಣವರ ಇತರರು ಇದ್ದರು.