ಗಡಿ ಜಿಲ್ಲೆ ಬೆಳಗಾವಿಗೆ ಮೂವರಿಗೆ ರಾಜ್ಯೋತ್ಸವದ ಗರಿ

| Published : Oct 31 2025, 03:30 AM IST

ಸಾರಾಂಶ

2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಪ್ರಕಟಿಸಿದ್ದು, ಗಡಿ ಜಿಲ್ಲೆ ಬೆಳಗಾವಿಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಪ್ರಕಟಿಸಿದ್ದು, ಗಡಿ ಜಿಲ್ಲೆ ಬೆಳಗಾವಿಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ ಅವರ ಪತ್ನಿ, ಮರಾಠ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಕಳೆದ 20 ವರ್ಷಗಳಿಂದ 38 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತ ಬಂದಿದ್ದಾರೆ. ಕರ್ನಾಟಕ ಗಡಿಭಾಗದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಿಣಯೇ, ಹಾಲಭಾವಿ ಖಾದರವಾಡಿಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ದಂತ ವೈದ್ಯಕೀಯ ಕಾಲೇಜಿನಲ್ಲಿ ಕೇಂದ್ರೀಯ ಸಂಶೋಧನಾ ಪ್ರಯೋಗಾಲಯ, ಪಾಲಿಟೆಕ್ನಿಕ್‌ ಕಾಲೇಜಿನ ಆವರಣದಲ್ಲಿ ಕೇಂದ್ರೀಕೃತ ಗ್ರಂಥಾಲಯ ಸ್ಥಾಪಿಸಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ಎಂಎಂ ದಂತ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದಾರೆ. ಪೂರ್ವ ಆಫ್ರೀಕಾದಲ್ಲಿನ ಮಲಾವಿಯ ಸೆಂಟ್ರಲ್‌ ಕ್ರಿಶ್ಚಿಯನ್‌ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದಿದ್ದಾರೆ. ಇಂಗ್ಲಿಷ್‌, ಹಿಂದಿ, ಮರಾಠಿ, ಕನ್ನಡ, ಗುಜರಾತಿ ಮತ್ತು ಕೊಂಕಣಿ ಭಾಷೆಗಳನ್ನು ಬಲ್ಲವರಾಗಿದ್ದಾರೆ. ಬುದ್ದಿಮಾಂದ್ಯ ಮಕ್ಕಳಿಗಾಗಿ ಆರಾಧನಾ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬೆಳಗಾವಿಯಲ್ಲಿರುವ ಮಹಿಳಾ ಅನ್ಯಾಯ ನಿವಾರಣಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸ್ತ್ರೀಶಕ್ತಿ ಸಂಘದಲ್ಲಿ ತೊಡಗಿಸಿಕೊಂಡಿದ್ದಾರೆ. 1985ರಲ್ಲಿ ಕನ್ನಡ ಬಳಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಶ್ರೀ ಅವರ ಶೈಕ್ಷಣಿಕ ಹಾಗೂ ಸಮಾಜ ಸೇವೆಗಾಗಿ ಹಲವು ಪ್ರಶಸ್ತಿಗಳು ಲಭಿಸಿವೆ. 26-1-2016 ರಂದು ಮರಾಠ ಮಂಡಲ ಸಮೂಹ ಸಂಸ್ಥೆಗಳ 15800 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಒಳಗೊಂಡಂತೆ ಒಂದೇ ರೀತಿಯ ವೇಷಭೂಣಗಳೊಂದಿಗೆ ಏಕಕಾಲದಲ್ಲಿ 5 ದೇಶಭಕ್ತಿ ದೀತೆಗಳನ್ನು ನಿರಂತರವಾಗಿ ಹಾಡುವ ಮೂಲಕ ವಿಶ್ವ ದಾಖಲೆ ಮಾಡಿದ ಹೆಗ್ಗಳಿಕೆ ಇದೆ. ಈ ಕಾರ್ಯಕ್ರಮಕ್ಕೆ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌, ವರ್ಲ್ಡ ರೆಕಾರ್ಡ್ಸ್‌ ಇಂಡಿಯಾ, ಇಂಡಿಯನ್‌ ಅಚೀವರ್ಸ್‌ ಬುಕ್‌ ಆಫ್‌ ರೆಕಾರ್ಡ್ಸ್‌, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಆಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ಸರ್ಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನನಗೆ ನೀಡಿರುವುದು ತುಂಬಾ ಸಂತೋಷವಾಗಿದೆ.

-ರಾಜಶ್ರೀ ನಾಗರಾಜ್‌, ಅಧ್ಯಕ್ಷೆ, ಮರಾಠ ಮಂಡಲ ಬೆಳಗಾವಿ.

-------ಸಣ್ಣನಿಂಗಪ್ಪ ಸತ್ತೆಪ್ಪ ಮುಶನ್ನಗೋಳಜಾನಪದ ಕ್ಷೇತ್ರದಲ್ಲಿ ಗಣನೀಯವಾಗಿ ಸಲ್ಲಿಸಿದ ಸೇವೆಗಾಗಿ ಗೋಕಾಕ ತಾಲೂಕಿನ ತಳಗಿನಹಟ್ಟಿ ಗ್ರಾಮದ ಜಾನಪದ ಕಲಾವಿದ ಸಣ್ಣನಿಂಗಪ್ಪ ಸತ್ತೆಪ್ಪ ಮುಶನ್ನಗೋಳ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.ತಮ್ಮ 18ನೇ ವಯಸ್ಸಿನಿಂದ ಡೊಳ್ಳನ ಪದ ಹಾಡುತ್ತ ಬಂದಿದ್ದಾರೆ. ಕಲಾ ವಿಭಾಗದಲ್ಲಿ ಇವರಿಗೆ ಜಾನಪದ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಆಕಾಶವಾಣಿ ಮತ್ತು ದೂರದರ್ಶನ, ರಾಜ್ಯ ಮಟ್ಟ ಮತ್ತು ವಿಭಾಗ ಮಟ್ಟದಲ್ಲಿ ಭಾಗವಹಿಸಿದ್ದಾರೆ. 1-1-1948ರಲ್ಲಿ ಜನಿಸಿದ ಇವರು ಕಲಿತಿದ್ದು ಕೇವಲ 4ನೇ ತರಗತಿ. ಡೊಳ್ಳಿನ ಪದ ಹಾಡುವುದು ಹಾಗೂ ಯುವಕರಿಗೆ ಕಲಿಸುವುದು ಇವರ ಉದ್ಯೋಗವಾಗಿದೆ.ನನ್ನ ಜಾನಪದ ಸೇವೆಯನ್ನು ಪರಿಗಣಿಸಿ, ನನಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದು ತುಂಬಾ ಸಂತೋಷವಾಗುತ್ತಿದೆ.

-ಸಣ್ಣನಿಂಗಪ್ಪ ಮುಶನ್ನಗೋಳ, ಜಾನಪದ ಕಲಾವಿದ.

-------

ಪುಂಡಲೀಕ ಶಾಸ್ತಿವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿರುವ ಬೆಳಗಾವಿ ಜಿಲ್ಲೆಯ ಪುಂಡಲೀಕ ಶಾಸ್ತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರ ಪೂರ್ವರ ಕುಲಕಸಬು ಶಕುನ ಶಾಸ್ತ್ರ ಹಳುವುದು, ಹಕ್ಕಿ ಪಣ ಕಟ್ಟುವುದು, ಹಾಲಕ್ಕಿ ಶಕುನ ನುಡಿಸುವುದು. ಗೊಂದಳಿಗರ , ಕಥೆ ಹೇಳುವುದು, ದೇವಿಪದಗಳನ್ನು ಹಾಡುವುದು, ಅಲೆಮಾರಿ ಅರೆ ಅಲೆಮಾರಿ ಗೊಂದಳಿ, ಬುಡುಬುಡುಕಿ, ಜೋಶಿ ಸಮಾಜದ ಕಸಬನ್ನೆ ಇವರು ಜೀವನದ ಆಧಾರವಾಗಿ ಮಾಡಿಕೊಂಡಿದ್ದಾರೆ. ವಿಠ್ಠಲನ ಆರಾಧನೆ, ಕೀರ್ತನೆ ಹರಿನಾಮ ಸ್ಮರಣೆ ಮಾಡುತ್ತ ಪಂಡರಾಪುರದ ಪಾದಯಾತ್ರೆಯನ್ನೂ ಮಾಡುತ್ತ ಬಂದಿದ್ದಾರೆ.ನಮ್ಮ ಪೂರ್ವಜರ ಕುಲಸಕಬು ನನಗೆ ನನ್ನ ತಾತ, ತಂದೆಯವರಿಂದ ಬಳುವಳಿಯಾಗಗಿ ಬಂದಿದೆ. ನನಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ

-ಪುಂಡಲೀಕ ಶಾಸ್ತ್ರಿ,

ಸಂಕೀರ್ಣ ಕ್ಷೇತ್ರ.