ಸಾರಾಂಶ
ಮಲ್ಲೇಶ್ವರದ ರಾಜಾಶಂಕರ್ ಆಟದ ಮೈದಾನದಲ್ಲಿ ಭಾನುವಾರ ಕಬ್ಬಿಣದ ಗೇಟ್ ಬಿದ್ದು ಮೃತಪಟ್ಟಿದ್ದ ಬಾಲಕ ನಿರಂಜನ್ ಕುಟುಂಬಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಮಲ್ಲೇಶ್ವರದ ರಾಜಾಶಂಕರ್ ಆಟದ ಮೈದಾನದಲ್ಲಿ ಭಾನುವಾರ ಕಬ್ಬಿಣದ ಗೇಟ್ ಬಿದ್ದು ಮೃತಪಟ್ಟಿದ್ದ ಬಾಲಕ ನಿರಂಜನ್ ಕುಟುಂಬಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.ಇದೇ ವೇಳೆ ನಿರ್ಲಕ್ಷ್ಯ ತೋರಿರುವ ಬಿಬಿಎಂಪಿಯ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ರಾಜು ಅಮಾನತಿಗೊಳಿಸಲಾಗಿದೆ. ಜತೆಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳಾದ ಕೆ.ಶಾಂತಲಾ, ದೇವರಾಜು, ಬೇಬಿ ಆಯೇಷಾ ಹುಸೇನ್ ಅವರನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಪಾಲಕ ಎಂಜಿನಿಯರ್ ಎಲ್.ವೆಂಕಟೇಶ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
2021ರ ಮೇ.21 ಮೈದಾನದ ಗೇಟ್ ನಿರ್ಮಾಣದ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿತ್ತು. ಘಟನೆಯ ನಂತರ ಸ್ಥಳ ಪರಿಶೀಲನೆ ವೇಳೆ ಕಳಪೆ ಕಾಮಗಾರಿ ಹಾಗೂ ಮೈದಾನ ನಿರ್ವಹಣೆಯಲ್ಲಿ ಕೊರತೆ ಉಂಟಾಗಿದೆ ಎಂದು ತಿಳಿದು ಬಂದಿದೆ. ಆಟದ ಮೈದಾನದ ಸಂಪೂರ್ಣ ಕಾಮಗಾರಿಯ ಕುರಿತು ವರದಿ ನೀಡಲು ರಚಿಸಿರುವ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಗೆ ಒಂದು ವಾರದೊಳಗೆ ಪರಿಶೀಲಿಸಿ ಸಂಪೂರ್ಣ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.