ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ತುಳಿತಕ್ಕೆ ಒಳಗಾದ ಸಮಾಜಗಳ ಜನರ ಏಳಿಗೆಗಾಗಿ, ಸಮ ಸಮಾಜದ ಕನಸು ಹೊತ್ತು ದುಡಿದ ಮಹನೀಯರಲ್ಲಿ ಬ್ರಹ್ಮರ್ಷಿ ನಾರಾಯಣಗುರುಗಳು ಅಗ್ರಗಣ್ಯರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್,ಜಿಲ್ಲಾ ಆರ್ಯ ಈಡಿಗರ ಸಂಘ ಹಾಗೂ ಬ್ರಹ್ಮರ್ಷಿ ನಾರಾಯಣಗುರು ಸಮಾಜ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣಗುರುಗಳ 171 ನೇ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಸಮಾಜದಲ್ಲಿನ ಮೇಳು, ಕೀಳು, ಜಾತಿ, ಧರ್ಮಗಳ ನಡುವಿನ ತಾರತಮ್ಯ ಹೋಗಿ, ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಬ್ರಹ್ಮಶ್ರೀ ನಾರಾಯಣಗುರುಗಳ ಕನಸಾಗಿತ್ತು ಎಂದರು.
ದೇವರನಾಡು ಎಂದು ಕರೆಯಿಸಿಕೊಳ್ಳುತ್ತಿದ್ದ ಕೇರಳದಲ್ಲಿ 1855 ರಲ್ಲಿ ಹುಟ್ಟಿದ ನಾರಾಯಣಗುರುಗಳು, ಸಮಾಜದಲ್ಲಿದ್ದ ಮೂಢನಂಬಿಕೆ, ಅಶಕ್ತರು, ದೀನ ದಲಿತರು, ಬಡವರ ಮೇಲಿನ ಮೇಲ್ವರ್ಗಗಳ ದಬ್ಬಾಳಿಕೆ, ದೇವಾಲಯ ಪ್ರವೇಶ ನಿರಾಕರಣೆ ಇವುಗಳ ವಿರುದ್ದ ರಕ್ತ ರಹಿತ ಕ್ರಾಂತಿ ಮಾಡಿದವರು. ದೇವರು, ಧರ್ಮ, ಸಮಾಜ ಈ ಮೂರು ವಿಚಾರಗಳು ಅವರ ಸಮಾಜ ಸುಧಾರಣೆಯ ಪ್ರಮುಖ ವಿಷಯಗಳಾಗಿದ್ದವು. ಏಕ ದೇವೋಪಾಸಕರಾಗಿ ಇರುವಂತೆ ಬೋಧನೆ ಮಾಡುತ್ತಿದ್ದ ಅವರು, ಯಾರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲವೋ ಅವರು, ತಾವೇ ಒಂದು ದೇವಾಲಯ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿ, ಸಮಾಜದಲ್ಲಿ ಶಾಂತಿ ನೆಲೆಸಲು ಕಾರಣರಾದರು. ಶ್ರೀಲಂಕಾದಲ್ಲಿ ಜನರು ಹಿಂದುಳಿಯಲು ಶಿಕ್ಷಣದ ಕೊರತೆ ಕಾರಣ ಎನ್ನುವುದನ್ನು ಅರಿತು ರಾತ್ರಿ ಶಾಲೆ ತೆರೆಯುವಂತೆ ಪ್ರೇರೆಪಿಸಿದ ಕೀರ್ತಿ ನಾರಾಯಣಗುರುಗಳಿಗೆ ಸಲ್ಲುತ್ತದೆ. ಅವರ ದಾರಿಯಲ್ಲಿ ನಾವೆಲ್ಲರೂ ನಡೆಯುವ ಮೂಲಕ ಅವರ ಕನಸನ್ನು ನನಸಾಗಿಸುವತ್ತ ಮುನ್ನೆಡೆಯೋಣ ಎಂಬ ಆಶಯವನ್ನು ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ವ್ಯಕ್ತಪಡಿಸಿದರು.ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೆ ಒಳಗಾದ, ದುರ್ಬಲ ಸಮುದಾಯಗಳಿಗೆ ತಮ್ಮ ಬೋಧನೆಗಳ ಮೂಲಕ ಬಲ ತುಂಬಿ, ಅವರಲ್ಲಿಯೂ ಸಮಾಜಿಕ ಪರಿವರ್ತನೆಗೆ ಕಾರಣರಾದವರು ಬ್ರಹ್ಮಶ್ರೀ ನಾರಾಯಣಗುರುಗಳು,ಶಿಕ್ಷಣದಿಂದ ಎಲ್ಲಾ ಸಂಕೋಲೆಗಳನ್ನು ತೊಡೆದು ಹಾಕಬಹುದು ಎಂಬ ನಂಬಿಕೆಯಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಇಂತಹ ಮಹನೀಯರು ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಸಂತೋಷದ ವಿಚಾರ ಎಂದರು.
ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಸಮುದಾಯಕ್ಕೆ ಪರಿಚಯಿಸಿದವರು ನಮ್ಮ ಸಮುದಾಯದ ಹಿರಿಯರಾದ ಜೆ.ಪಿ.ನಾರಾಯಣ ಸ್ವಾಮಿಯವರು ಮತ್ತು ಆರ್.ಎಲ್.ಜಾಲಪ್ಪ ಅವರು, ತದನಂತರದಲ್ಲಿ ನಾರಾಯಣಗುರುಗಳ ಬಗ್ಗೆ ಅರಿಯುವ ಕೆಲಸ ಆರಂಭವಾಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಮುಂದಿನ ಅಕ್ಟೋಬರ್ 26 ರಂದು ಆರ್ಯ ಈಡಿಗರ ಸಂಘದವತಿಯಿಂದ ನಗರದ ಗ್ರಂಥಾಲಯ ಸಭಾಂಗಣದಲ್ಲಿ ನಾರಾಯಣಗುರುಗಳ ಜಯಂತಿ ಜೊತೆಗೆ,ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ಸಹ ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,19ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಸಾಮಾಜಿಕ ಪೀಡುಗುಗಳನ್ನು ತಡೆಯಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಈ ಸಮಾಜ ಸುಧಾರಣೆಯ ಕೆಲಸ ಮಹಾತ್ಮಗಾಂಧಿ, ರವೀಂದ್ರನಾಥ ಟ್ಯಾಗೋರ್, ವಿನೋಭಾಭಾವೆ ಅವರಂತಹ ಹಿರಿಯರನ್ನು ತಲುಪಿದ್ದು ವಿಶೇಷ. ಮಹಿಳಾ ಸಮಾನತೆ, ಶಿಕ್ಷಣ, ಸ್ವಚ್ಛತೆ,ಪ್ರ ತ್ಯೇಕ ದೇವಾಲಯಗಳ ನಿರ್ಮಾಣ, ಮದ್ಯಪಾನ ನಿಷೇಧ ಇನ್ನೂ ಹಲವು ವಿಚಾರಗಳ ಬಗ್ಗೆ ತಮ್ಮ ಹೋರಾಟವನ್ನು ನಾರಾಯಣಗುರುಗಳ ನಡೆಸಿದ್ದರು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್, ಉಪತಹಸೀಲ್ದಾರ್ ಕಮಲಮ್ಮ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಧನಿಯಕುಮಾರ್, ಡಿ.ಎಂ.ಸತೀಶ್,ಟಿ.ಆರ್.ಸದಾಶಿವಯ್ಯ, ಆರ್ಯ ಈಡಿಗರ ಸಮುದಾಯದ ಅಧ್ಯಕ್ಷರಾದ ನಾಗರಾಜು, ಉಪಾಧ್ಯಕ್ಷರಾದ ವೆಂಕಟಸ್ವಾಮಿ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಟ್ರಸ್ಟ್ ಮಾಧವನ್, ಊರುಕೆರೆ ಪುರುಷೋತ್ತಮ್, ಖಜಾಂಚಿ ಎಚ್.ಎಂ.ಕುಮಾರ್, ಎನ್.ಮಂಜುನಾಥ್, ಎಲ್.ಐ.ಸಿ. ನಾರಾಯಣ್, ಸುರಭಿ ನಾಗರಾಜು, ರಾಜೇಶ್, ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.