ಲಕ್ಷ್ಮೇಶ್ವರ: ಶಿಸ್ತುಬದ್ಧವಾದ ಜೀವನ, ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಬ್ರಾಹ್ಮಣ ಸಮಾಜದಲ್ಲಿನ ಮಕ್ಕಳಲ್ಲಿ ಸಮಾಜದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯವಾಗಬೇಕು. ಅಲ್ಲದೆ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ತಿಳಿಸಿದರು.ಭಾನುವಾರ ಪಟ್ಟಣದ ಶಂಕರಭಾರತಿ ಮಠದಲ್ಲಿ ನಡೆದ ಬ್ರಾಹ್ಮಣ ಸಮಾಜದ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ವಿವಾಹ, ಉದ್ಯೋಗ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮಲ್ಲಿಯೇ ಇದೆ. ಇದೀಗ ಬ್ರಾಹ್ಮಣ ನಿಗಮ ಮಂಡಳಿ ವತಿಯಿಂದ ಸ್ವಯಂಉದ್ಯೋಗ ಮಾಡುವವರಿಗೆ, ಶಿಕ್ಷಣಕ್ಕಾಗಿ ಅನೇಕ ರೀತಿಯ ಆರ್ಥಿಕ ಸಹಾಯ ದೊರೆಯುತ್ತಿವೆ. ಅವುಗಳ ಸದುಪಯೋಗಪಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.
ನಮ್ಮ ಸಮಾಜದಲ್ಲಿನ ವಿವಾಹದ ಸಮಸ್ಯೆಗಳಿಗೆ ಪರಿಹಾರ ನೀಡಲು ಜಿಲ್ಲಾ ಮಟ್ಟದಲ್ಲಿ ವಧು- ವರರ ವೇದಿಕೆ ರಚನೆ ಮಾಡುವ ಯೋಚನೆಯಿದೆ ಎಂದು ಹೇಳಿದ ಅವರು, ಮಾ. ೨೧ರಿಂದ ಶೃಂಗೇರಿಯಲ್ಲಿ ನಡೆಯುವ ಜಗದ್ಗುರುಗಳ ವರ್ಧಂತಿ ಉತ್ಸವ ಪ್ರಯುಕ್ತ ಗಾಯತ್ರಿ ಜಪಾನುಷ್ಠಾನದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸೋಣ ಎಂದರು.ಜಿಲ್ಲಾ ಶಾಂಕರ ತತ್ವ ಪ್ರಸಾರ ಸಂಚಾಲಕ ಗಿರೀಶ ಪಂತರ ಮಾತನಾಡಿ, ಶೃಂಗೇರಿಯಲ್ಲಿ ಜಗದ್ಗುರುಗಳ ವರ್ಧಂತಿ ಉತ್ಸವದ ನಿಮಿತ್ತ ಮಾ. ೨೧ರಂದು ನಡೆಯಲಿರುವ ಗಾಯತ್ರಿ ಜಪಾನುಷ್ಠಾನಕ್ಕೆ ಈ ಭಾಗದ ಎಲ್ಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಇಂದಿನ ದಿನಗಳಲ್ಲಿ ಹಿಂದೂ ಧರ್ಮ ಅಧೋಗತಿಯತ್ತ ಸಾಗುತ್ತಿದೆ. ಇದನ್ನು ತಪ್ಪಿಸಲು ಶೃಂಗೇರಿ ಜಗದ್ಗುರುಗಳು ಅನೇಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಅದಕ್ಕೆ ಜಿಲ್ಲೆಯಿಂದ ಅನೇಕ ಯುವಕರು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ, ಬ್ರಾಹ್ಮಣ ಸಮಾಜದವರು ಸಂಘಟಿತರಾಗುವುದು ಅವಶ್ಯವಾಗಿದೆ. ಸಮಾಜದ ಬಗ್ಗೆ ಚಿಂತನೆ ಮಾಡಬೇಕಾದ ಅವಶ್ಯಕತೆ ಎದುರಾಗಿದೆ. ಅನೇಕ ಸಮಸ್ಯೆಗಳಿದ್ದರೂ ಸ್ವಾಭಿಮಾನದಿಂದ ಜೀವನ ಸಾಗಿಸುವ ಬ್ರಾಹ್ಮಣ ಸಮಾಜದವರು ಸಂಘಟನೆಯ ಶಕ್ತಿ ತೋರ್ಪಡಿಸಬೇಕಿದೆ ಎಂದರು.ಈ ವೇಳೆ ಅನಂತಭಟ್ ಪೂಜಾರ, ಅನಿಲ ತೆಂಬದಮನಿ, ಆರ್.ಎಸ್. ಕುಲಕರ್ಣಿ, ಗಣೇಶ ಕುರಂದವಾಡ, ಶ್ರೀಪಾದ ತಮ್ಮಣ್ಣವರ, ಡಾ. ಪ್ರಸನ್ನ ಕುಲಕರ್ಣಿ, ಧ್ರುವ ಬೆಟಗೇರಿ, ದತ್ತಾತ್ರೇಯ ಪಾಟೀಲಕುಲಕರ್ಣಿ, ಅನಿಲ ಕುಲಕರ್ಣಿ, ಸರ್ದೇಶಪಾಂಡೆ, ವ್ಯಾಪಾರಿ, ಆನಂದ ತಂತ್ರಿ, ಎ.ಪಿ. ಕುಲಕರ್ಣಿ, ಪಾಪು ಪುರೋಹಿತ, ಶ್ರೀಕಾಂತ ಪೂಜಾರ ಇದ್ದರು. ಕಾರ್ಯದರ್ಶಿ ದಿಗಂಬರ ಪೂಜಾರ ನಿರೂಪಿಸಿದರು.