ಸಾರಾಂಶ
ರಾಮನಗರ: ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ - ಸಹಕಾರ ಬ್ಯಾಂಕುಗಳ ಚುನಾವಣೆಗಳಿಗೆ ಬ್ರೇಕ್ ಹಾಕಲಾಗಿದೆ.
ಸಹಕಾರ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳಾದ ಎ.ಸಿ.ದಿವಾಕರ್ ರವರು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಕಲಂ 121ರಡಿ ಸರ್ಕಾರಕ್ಕೆ ದತ್ತವಾದ ಅಧಿಕಾರವನ್ನು ಚಾಯಿಸಿ ತಕ್ಷಣದಿಂದಲೇ ಸಹಕಾರ ಸಂಘಗಳ - ಸಹಕಾರ ಬ್ಯಾಂಕುಗಳ ಚುನಾವಣೆಗಳನ್ನು ಮುಂದಿನ ಆದೇಶದವರೆಗೆ ನಡೆಸದಂತೆ ಆದೇಶ ಹೊರಡಿಸಿದ್ದಾರೆ.ಅಧಿಕಾರಿ - ಸಿಬ್ಬಂದಿ ನಿಯೋಜನೆ ಕಷ್ಟ:
2024ರ ಮಾರ್ಚ್ ನಿಂದ ಜೂನ್ ತಿಂಗಳ ಅವಧಿಯಲ್ಲಿ ಹಲವು ಸಹಕಾರ ಸಂಘಗಳ ಆಡಳಿತ ಮಂಡಳಿಯ ಪದಾವಧಿಯು ಮುಕ್ತಾಯಗೊಳ್ಳಲಿದ್ದು, ಅಂತಹ ಸಹಕಾರ ಸಂಘಗಳ ಚುನಾವಣೆಗೆ ಈಗಾಗಲೇ ಮಾರ್ಚ್ ನಿಂದ ಮೇ ತಿಂಗಳ ಅವಧಿಯಲ್ಲಿ ಚುನಾವಣಾ ದಿನಾಂಕಗಳನ್ನು ನಿಗದಿಪಡಿಸಿ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.ಅಲ್ಲದೇ, ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ಸಹಕಾರ ಇಲಾಖೆಯನ್ನು ಒಳಗೊಂಡಂತೆ ಇತರೆ ಇಲಾಖೆಗಳ ಅಧಿಕಾರಿ - ಸಿಬ್ಬಂದಿಗಳನ್ನು ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಸಹಕಾರ ಸಂಘಗಳ ಚುನಾವಣೆಯನ್ನು ಸಮರ್ಪಕವಾಗಿ ಜರುಗಿಸಲು ಅಗತ್ಯವಾದ ಅಧಿಕಾರಿ - ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವಾಗುವುದಿಲ್ಲ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಸಹ ಕರ್ತವ್ಯ ನಿರ್ವಹಿಸಬೇಕಾಗಿರುವುದರಿಂದ ಸದರಿ ಸಂಘಗಳ ಆಡಳಿತ ಮಂಡಳಿಗಳ ಚುನಾವಣೆ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು ಕಷ್ಟಸಾಧ್ಯವಾಗುತ್ತದೆ.ಒಂದು ವೇಳೆ ಮಾರ್ಚ್ ನಿಂದ ಮೇ ಮಾಹೆಯ ಅಂತ್ಯದವರೆಗಿನ ಅವಧಿಯಲ್ಲಿ ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗುವ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆದು ನಿಗದಿತ ಅವಧಿಯಲ್ಲಿ ಆಡಳಿತ ಮಂಡಳಿ ರಚನೆ ಆಗದೆ ಹೋಗಿದ್ದರೆ ಅಂತಹ ಎಲ್ಲಾ ಸಹಕಾರ ಸಂಘಗಳಿಗೂ ಕೂಡ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಪ್ರಕರಣ 28ಎ (5)ರಡಿ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಬೇಕಾಗುತ್ತದೆ.
ಆದರೆ, ಸಹಕಾರ ಇಲಾಖೆಯನ್ನು ಒಳಗೊಂಡಂತೆ ಇತರೆ ಇಲಾಖೆಯ ಬಹುತೇಕ ಎಲ್ಲಾ ಅಧಿಕಾರಿ - ಸಿಬ್ಬಂದಿ ಸಾರ್ವತ್ರಿಕ ಚುನಾವಣೆಯಲ್ಲಿ ನಿರತರಾಗಿರುವುದರಿಂದ ಆಡಳಿತಾಧಿಕಾರಿಗಳನ್ನು ನೇಮಿಸಲು ಸಾಧ್ಯವಾಗುವುದಿಲ್ಲ.ಅಧಿಕಾರಾವಧಿ ವಿಸ್ತರಣೆ:
ಅಲ್ಲದೆ, ಮಾರ್ಚ್ ನಿಂದ ಜೂನ್ ಮಾಹೆಯ ಅಂತ್ಯದವರೆಗೆ ಆಡಳಿತ ಮಂಡಳಿಯ ಅವಧಿ ಮುಗಿಯುವ ಹಾಗೂ ಚುನಾವಣೆ ದಿನಾಂಕಗಳನ್ನು ನಿಗದಿಪಡಿಸಿ ಸಾಮಾನ್ಯ ಚುನಾವಣೆ ಪ್ರಕ್ರಿಯೆ ಹಾಗೂ ಆಕಸ್ಮಿಕ ತೆರವಾದ ಸ್ಥಾನಗಳ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿರುವ ಎಲ್ಲ ಸಹಕಾರ ಸಂಘಗಳಿಗೆ ವಿನಾಯಿತಿ ನೀಡಿ ಆಡಳಿತ ಮಂಡಳಿಯ ಚುನಾವಣೆಗಳನ್ನು ಮುಂದೂಡಿ, ಹಾಲಿ ಇರುವ ಆಡಳಿತ ಮಂಡಳಿಯನ್ನು ಹಾಗೂ ಪದಾಧಿಕಾರಿಗಳನ್ನು ಮುಂದುವರೆಸುವ ಸಂಬಂಧ ನಿಬಂಧಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.ಇದನ್ನು ಪರಿಶೀಲಿಸಿ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ಸಹಕಾರ ಇಲಾಖೆಯನ್ನು ಒಳಗೊಂಡಂತೆ ಇತರೆ ಇಲಾಖೆಗಳ ಅಧಿಕಾರಿ - ಸಿಬ್ಬಂದಿಯನ್ನು ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಚುನಾವಣೆಯನ್ನು ಸಮರ್ಪಕವಾಗಿ ಜರುಗಿಸಲು ಅವಶ್ಯಕ ಅಧಿಕಾರಿ - ಸಿಬ್ಬಂದಿಯನ್ನು ನಿಯೋಜಿಸಲು ಕಷ್ಟ ಸಾಧ್ಯವಾಗುವ ಹಿನ್ನೆಲೆಯಲ್ಲಿ ಸಹಕಾರ ಸಂಘ - ಬ್ಯಾಂಕುಗಳ ಆಡಳಿತ ಮಂಡಳಿ ಚುನಾವಣೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಿ ಹಾಲಿ ಇರುವ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಅವಧಿಯನ್ನು ಮುಂದುವರೆಸಿ ಸಹಕಾರ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳಾದ ಎ.ಸಿ. ದಿವಾಕರ್ ಆದೇಶಿಸಿದ್ದಾರೆ.
ಬಾಕ್ಸ್ ............ಆದೇಶದಲ್ಲಿ ಏನಿದೆ?
1.ರಾಜ್ಯದಲ್ಲಿರುವ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿರುವ - ಮುಕ್ತಾಯಗೊಳ್ಳಲಿರುವ ಸಹಕಾರ ಸಂಘಗಳು - ಸಹಕಾರ ಬ್ಯಾಂಕುಗಳ (ಪ್ರಾಥಮಿಕ, ಮಾಧ್ಯಮಿಕ - ಒಕ್ಕೂಟಗಳ ಮತ್ತು ಅಪೆಕ್ಸ್ ಸಹಕಾರ ಸಂಘಗಳ) ಚುನಾವಣೆಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಪ್ರಕರಣ 28 ಎ(5), 28 ಬಿ, 29 ಎಫ್ (4)ಗಳಿಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಪ್ರಕರಣ 121ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರದ ಅಡಿಯಲ್ಲಿ ವಿನಾಯಿತಿಯನ್ನು ನೀಡಿ ಆಡಳಿತ ಮಂಡಳಿ ಚುನಾವಣೆ ಮುಂದೂಡಿ ಹಾಲಿ ಇರುವ ಆಡಳಿತ ಮಂಡಳಿಯನ್ನೇ ಮುಂದುವರೆಸಲಾಗುತ್ತಿದೆ.2.ಈಗಾಗಲೇ ಚುನಾವಣೆ ವೇಳಾಪಟ್ಟಿ ಹೊರಡಿಸಿ, ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದಲ್ಲಿ ಅದನ್ನು ಸಹ ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಿದೆ.
3.ಘನ ನ್ಯಾಯಾಲಯಗಳ ಆದೇಶದಂತೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದಲ್ಲಿ - ಪ್ರಾರಂಭವಾಗಬೇಕಿದ್ದಲ್ಲಿ ಈ ಆದೇಶ ಕುರಿತು ಘನ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಲಯದ ಆದೇಶದಂತೆ ಕ್ರಮ ವಹಿಸುವುದು.