ಸ್ತನ್ಯ ಪಾನದಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಳ

| Published : Aug 08 2024, 01:31 AM IST

ಸ್ತನ್ಯ ಪಾನದಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

Breastfeeding increases immunity of the child

-ಬೊಮ್ಮೇನಹಳ್ಳಿಯಲ್ಲಿ ನಡೆದ ಸಪ್ತಾಹದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್

---------

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಸ್ತನ್ಯ ಪಾನ ಮಾಡಿಸುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲೂಕಿನ ಬೊಮ್ಮೆನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಸ್ತನ್ಯಪಾನ ಮಾಡಿಸಲು ಇರುವ ಕೊರತೆಗಳನ್ನು ನೀಗಿಸಿ, ತಾಯಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲನೇ ವಾರ ಆಚರಿಸಲಾಗುತ್ತದೆ. ತಾಯಿಯ ಎದೆ ಹಾಲು ಮಗುವಿಗೆ ಅಮೃತ ಧಾರೆ. ಎದೆ ಹಾಲಿನಲ್ಲಿ ಅಪರಿಮಿತ ಪೋಷಕಾಂಶ ಅಡಗಿವೆ. ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹುಟ್ಟಿದ ತಕ್ಷಣ ಮಗುವಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಎದೆ ಹಾಲನ್ನು ಕುಡಿಸಬೇಕು. ಎದೆ ಹಾಲು ಕೊಡುವುದರಿಂದ ತಾಯಿ ಮತ್ತು ಮಗುವಿನ ಮಧ್ಯೆ ಉತ್ತಮವಾದ ಗಟ್ಟಿಯಾದ ಬಾಂಧವ್ಯ ಬೆಸೆಯುತ್ತದೆ. ಮಗು ಹುಟ್ಟಿದಾಗಿನಿಂದ 6 ತಿಂಗಳ ವಯಸ್ಸಾಗುವವರೆಗೂ ಎದೆಹಾಲು ಬಿಟ್ಟು ಬೇರೆ ಏನನ್ನೂ ಕುಡಿಸಬಾರದು ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಎದೆ ಹಾಲುಣಿಸುವುದು ಒಂದು ಸಹಜ ಕ್ರಿಯೆ. ಸಾಂಸ್ಥಿಕ ಹೆರಿಗೆಗಳು ಗಣನೀಯವಾಗಿ ಹೆಚ್ಚಾಗಿದ್ದರೂ, ಎದೆಹಾಲು ಕುಡಿಸುವ ಪ್ರಮಾಣ, ಎದೆಹಾಲು ಮುಂದುವರೆಸುವ ಪ್ರಮಾಣ ಕಡಿಮೆಯಾಗಿರುವುದು ಸಮೀಕ್ಷೆಗಳಿಂದ ಕಂಡು ಬಂದಿದೆ. ಹಾಗಾಗಿ, ಈ ಸಂಗತಿಯ ಗಂಭೀರವಾಗಿ ಪರಿಗಣಿಸಲಾಗಿದೆ. ಆರು ತಿಂಗಳವರೆಗೆ ಕೇವಲ ಎದೆ ಹಾಲು ಉಣಿಸುವ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಬಹಳಷ್ಟು ತಾಯಂದಿರು ಎದೆಹಾಲು ಉಣಿಸಲು ಪ್ರಾರಂಭಿಸಿದರೂ, ಕೆಲವೇ ತಿಂಗಳುಗಳಲ್ಲಿ ಇತರ ಹಾಲು ಮತ್ತು ಪಾನೀಯಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಇದರಿಂದ ಶಿಶು ವಿವಿಧ ಸೋಂಕುಗಳಿಗೆ ಗುರಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮರಣವೂ ಸಂಭವಿಸಬಹುದು ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನು ಮಾತ್ರ ನೀಡಲು, ಎದೆಹಾಲಿನ ಸಂಪೂರ್ಣ ಲಾಭಗಳನ್ನು ಪಡೆಯಲು, ಮಗುವು ಸಂಪೂರ್ಣ ವಿಕಾಸ ಹೊಂದಲು, ಮಗುವನ್ನು ನ್ಯೂಮೋನಿಯಾ, ಅತಿಸಾರಭೇದಿ, ಅಪೌಷ್ಠಿಕತೆ ಇವುಗಳಿಂದ ತಡೆಗಟ್ಟಲು ಸ್ತನ್ಯಪಾನವು ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ ಎಂದರು.

ವಿಶ್ವ ಸ್ತನ್ಯಪಾನ ಸಪ್ತಾಹವು ಸ್ತನ್ಯಪಾನ ಮಾಡುವ ತಾಯಂದಿರಿಗೆ ಅನುಕೂಲಕರ ವಾತಾವರಣ ಕಲ್ಪಿಸಲು ಆರಂಭಿಕ ಬಾಲ್ಯದ ಬೆಳವಣಿಗೆ ಹೆಚ್ಚಿಸಲು ಮತ್ತು ಪೌಷ್ಠಿಕಾಂಶ ಸುಧಾರಿಸಲು ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಪ್ರಮುಖ ವೇದಿಕೆಯಾಗಿದೆ. ಸ್ತನ್ಯಪಾನ ಅಭ್ಯಾಸಗಳ ಸುಧಾರಣೆಗಾಗಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷೆ ಸುಲೋಚನಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಗಾಯತ್ರಿ, ಎಂ.ಅನುಸೂಯ, ಸಮುದಾಯ ಆರೋಗ್ಯಾಧಿಕಾರಿ ಶ್ರೀನಿವಾಸ್, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್, ಅಂಗನವಾಡಿ ಕಾರ್ಯಕರ್ತೆ ಟಿ.ಶಶಿಕಲಾ, ಆಶಾ ಕಾರ್ಯಕರ್ತೆಯರಾದ ನಾಗಮ್ಮ, ಮಂಜುಳಾ ಇದ್ದರು.

--------------

ಪೋಟೋ: ಚಿತ್ರದುರ್ಗ ತಾಲೂಕಿನ ಬೊಮ್ಮೆನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ಸ್ತನ್ಯಪಾನ ಸಪ್ತಾಹದಲ್ಲಿ ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಸ್ತನ್ಯ ಪಾನದ ಮಹತ್ವ ಕುರಿತು ಮಾಹಿತಿ ನೀಡಿದರು.

----------

ಪೋಟೋ: 7 ಸಿಟಿಡಿ5