ಸಾರಾಂಶ
ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಜಿಲ್ಲೆಯ ಪ್ರಮುಖ ಕ್ಷೇತ್ರ ಬೆಳೆಯಾದ ಭತ್ತದಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ.ಭತ್ತದಲ್ಲಿ ಬಿತ್ತನೆ ಬೀಜದಿಂದಲೇ ಪ್ರಸಾರವಾಗುವ ಪ್ರಮುಖ ರೋಗಗಳಾದ ಬೆಂಕಿ ರೋಗ, ಕಂದುಚುಕ್ಕೆ ರೋಗ, ಊದುಬತ್ತಿ ರೋಗ ಮತ್ತು ದುಂಡಾಣು ಅಂಗಮಾರಿ ರೋಗಗಳ ಹತೋಟಿಗಾಗಿ ರೈತ ಬಾಂಧವರು ಮುಂಜಾಗೃತ ಕ್ರಮವಾಗಿ ಬೀಜೋಪಚಾರ ಮಾಡುವುದು ಅತ್ಯಗತ್ಯ.ಭತ್ತದಲ್ಲಿ ಕಂಡು ಬರುವ ಬೆಂಕಿ ರೋಗದ ಹತೋಟಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಬೆಂಡೈಜಿಮ್ 50% ಡಬ್ಲ್ಯೂಪಿ 4 ಗ್ರಾಂ./ಕೆ.ಜಿ./ ಲೀಟರ್ ಅಥವಾ 4 ಗ್ರಾಂ. ಕಾರ್ಬೆಂಡೈಜಿಮ್ 25% + ಮ್ಯಾಂಕೊಜೆಬ್ 50% ಡಬ್ಲ್ಯೂಎಸ್ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ ಅಥವಾ 3 ಗ್ರಾಂ. ಟ್ರೈಸೈಕ್ಲಜೋಲ್ 75% ಡಬ್ಲ್ಯೂಪಿ ಅಥವಾ 0.5 ಗ್ರಾಂ. ಟ್ರೈಪ್ಲೊಕ್ಸಿಸ್ಟ್ರೋಬಿನ್ 25% + ಟೆಬುಕೋನೊಜೋಲ್ 50% (ನೆಟಿವೊ 75 ಡಬ್ಲ್ಯೂಜಿ)ನ್ನು ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ ಮಿಶ್ರಣ ಮಾಡಿ ಬೀಜೋಪಚಾರ ಕೈಗೊಳ್ಳಬೇಕು.ಕಂದು ಚುಕ್ಕೆ ರೋಗದ ಹತೋಟಿಗಾಗಿ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ 4 ಗ್ರಾಂ. ಕಾರ್ಬೆಂಡೈಜಿಮ್ 50% ಡಬ್ಲ್ಯೂಪಿ ಅಥವಾ 4 ಗ್ರಾಂ. ಕಾರ್ಬೆಂಡೈಜಿಮ್ 25% + ಮ್ಯಾಂಕೊಜೆಬ್ 50% ಡಬ್ಲ್ಯೂಎಸ್ ನಿಂದ ಬೀಜೋಪಚಾರ ಮಾಡಬೇಕು.ಊದುಬತ್ತಿರೋಗದ ಹತೋಟಿಗಾಗಿ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ 4 ಗ್ರಾಂ. ಕಾರ್ಬೆಂಡೈಜಿಮ್ 50% ಡಬ್ಲ್ಯೂಪಿ ಅಥವಾ 4 ಗ್ರಾಂ. ಕಾರ್ಬೆಂಡೈಜಿಮ್ 25% + ಮ್ಯಾಂಕೊಜೆಬ್ 50% ಡಬ್ಲ್ಯೂಎಸ್ ಹಾಗೂ ದುಂಡಾಣು ಅಂಗಮಾರಿ ರೋಗದ ಹತೋಟಿಗಾಗಿ ಸ್ಟ್ರೆಪ್ಟೋಸೈಕ್ಲಿನ್ (0.4 ಗ್ರಾಂ) ಮತ್ತು ತಾಮ್ರದ ಆಕ್ಸಿಕ್ಲೋರೈಡ್ (1 ಗ್ರಾಂ.) ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡುವುದರಿಂದ ಈ ರೋಗಗಳನ್ನು ತಡೆಗಟ್ಟಬಹುದು ಎಂದು ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಸಸ್ಯ ಸಂರಕ್ಷಣೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಎನ್. ಪುಷ್ಪಾ ತಿಳಿಸಿದ್ದಾರೆ. ಬೀಜೋಪಚಾರ ವಿಧಾನ 1ಬೀಜವನ್ನು ಪ್ಲಾಸ್ಟಿಕ್ ಹಾಳೆ ಅಥವಾ ಗೋಣಿ ಚೀಲ ಅಥವಾ ಗಟ್ಟಿಯಾದ ಸಿಮೆಂಟ್ ನೆಲದ ಮೇಲೆ ಹರಡಿ, ಅದರ ಮೇಲೆ ತೆಳುವಾಗಿ ನೀರು ಚಿಮುಕಿಸಿ ಒದ್ದೆ ಮಾಡಿ ಶಿಫಾರಸು ಮಾಡಿರುವ ಪ್ರಮಾಣದಲ್ಲಿ ಶಿಲೀಂಧ್ರನಾಶಕವನ್ನು ಹಾಕಿ ಕೈಚೀಲ ಧರಿಸಿದ ಕೈಯಿಂದ ಅಥವಾ ಮಿಶ್ರಣ ಯಂತ್ರದಿಂದ ಹದವಾಗಿ ಮಿಶ್ರಮಾಡಿ, 3 ರಿಂದ 8 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆಗೆ ಬಳಸುವುದು. ಬೀಜೋಪಚಾರ ವಿಧಾನ 2ಕೆಸರು ಸಸಿಮಡಿ, ಡ್ರಂ ಸೀಡರ್ ಮತ್ತು ನೇರ ಬಿತ್ತನೆಗೆ ಭತ್ತದ ಸಸಿಮಡಿಯಲ್ಲಿ ಕಾಣಿಸಿಕೊಳ್ಳುವ ಬೀಜದಿಂದ ಪ್ರಸಾರವಾಗುವ ರೋಗಗಳ ನಿರ್ವಹಣೆಗಾಗಿ ಪ್ರತಿ ಎಕರೆಗೆ ಶಿಫಾರಸು ಮಾಡಿರುವ ಬಿತ್ತನೆ ಬೀಜವನ್ನು ಶಿಲೀಂಧ್ರನಾಶಕದ ದ್ರಾವಣದಲ್ಲಿ 12 ಗಂಟೆಗಳ ಕಾಲ ನೆನೆಸಿ, ನಂತರ 24 ರಿಂದ 48 ಗಂಟೆಗಳ ಕಾಲ ಒದ್ದೆಯಾದ ಗೋಣಿ ಚೀಲದಲ್ಲಿ ಕಟ್ಟಿಕುಡಿ ಮೊಳಕೆ ಕಾಣಿಸಿಕೊಂಡಾಗ ಬಿತ್ತನೆ ಮಾಡುವುದು. 1 ಕಿ.ಗ್ರಾಂ. ಬಿತ್ತನೆ ಬೀಜವನ್ನು ನೆನಸಲು 1 ಲೀಟರ್ ನೀರು ಬೇಕಾಗುತ್ತದೆ.ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 99803 66789 ಸಂಪರ್ಕಿಸಬಹುದು.