ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 82ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮನೆ ದೇವರಾದ ಯಡಿಯೂರು ಸಿದ್ಧಲಿಂಗೇಶ್ವರನ ದೇವಾಲಯದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿದರು.ಬಿಜೆಪಿ ರಾಜ್ಯಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ಸಂಸದ ಬಿ. ವೈ. ರಾಘವೇಂದ್ರ ಅವರ ಜೊತೆಯಲ್ಲಿ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,
ಸಿದ್ಧಲಿಂಗೇಶ್ವರನ ದೇವಾಲಯದಲ್ಲಿ ರುದ್ರಾಭಿಷೇಕ, ಸಂಕಲ್ಪ, ಮಹಾ ಮಂಗಳಾರತಿ, ಅಷ್ಟೋತ್ತರ ಸೇವೆಗಳನ್ನು ಸಲ್ಲಿಸಿದರು,ಬಿ.ವೈ. ವಿಜಯೇಂದ್ರ ಹಾಗೂ ಬಿ. ವೈ. ರಾಘವೇಂದ್ರ ಪಂಚೆ, ಶಲ್ಯ, ಸಾಂಪ್ರದಾಯಿಕ ಉಡುಗೆ ಧರಿಸಿ ದೇವಾಲಯ ಪ್ರವೇಶ ಮಾಡಿದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಮೂಲಿ ಬಿಳಿ ಬಣ್ಣದ ಜುಬ್ಬಾ, ಪೈಜಾಮದಲ್ಲಿ ದೇವಾಲಯ ಪ್ರವೇಶಿಸಿದರು.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಹಲವು ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ, ಹಾರ, ಹೂ ಗುಚ್ಛಗಳನ್ನು ಸ್ವೀಕರಿಸಿದರು.ಶ್ರೀರಂಗಪಟ್ಟಣದ ಕಾವೇರಿ ತೀರದ ಚಂದ್ರಮನ ಆಶ್ರಮದ ತ್ರಿನೇತ್ರ ಸ್ವಾಮೀಜಿ ಯಡಿಯೂರಪ್ಪ ಅವರಿಗೆ ಆಶೀರ್ವದಿಸಿ ಶುಭಕಾಮನೆಗಳನ್ನು ತಿಳಿಸಿದರು, ಕುಣಿಗಲ್ ತಹಸೀಲ್ದಾರ್ ರಶ್ಮಿ, ಮಾಜಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಸ್ವಾಮಿ, ಕೆಎಡಿಬಿ ಮಾಜಿ ಅಧ್ಯಕ್ಷ ರುದ್ರೇಶ್, ತುರುವೇಕೆರೆ ಬಿಜೆಪಿ ಮುಖಂಡ ಲಕ್ಷ್ಮೀನಾರಾಯಣ, ತಾಲೂಕು ಬಿಜೆಪಿ ಅಧ್ಯಕ್ಷ ಕೊಡಗಳ್ಳಿ ದಿನೇಶ, ಮಾಜಿ ಅಧ್ಯಕ್ಷ ಬಲರಾಮ, ತಿಮ್ಮೇಗೌಡ, ಮರಿ ಅಣ್ಣ, ವೈ.ಟಿ.ಸಿದ್ಧಲಿಂಗಣ್ಣ ಇದ್ದರು.