ಸಾರಾಂಶ
ಚಾಮರಾಜನಗರ: ಮುಡಾ ನಿವೇಶನ ಹಗರಣ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.
ನಗರದ ರೋಟರಿ ಭವನದಲ್ಲಿ ನಡೆದ ಬಿಎಸ್ಪಿ ಜಿಲ್ಲಾ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಗಳ ವಿರುದ್ದ ರಾಜ್ಯಪಾಲರು ತನಿಖೆಗೆ ಅವಕಾಶ ಕೊಟ್ಟಿದ್ದಾರೆ. ಮತ್ತೊಂದೆಡೆ ಜಾರಿ ನಿರ್ದೇಶನಾಲಯ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಶುರು ಮಾಡಿದೆ. ಇನ್ನೊಂದೆಡೆ ವಿರೋಧಗಳು ಕೂಡ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸುತ್ತಿದೆ. ರಾಜ್ಯದ ಮುಖ್ಯಸ್ಥನ ಮೇಲೆ ಕಳಂಕ ಬಂದಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ನ್ಯಾಯಾಲಯದಿಂದ ತೀರ್ಪು ನಿರ್ದೋಷಿ ಎಂದು ಬಂದ ಮೇಲೆ ಮುಂದುವರೆಯಿರಿ ಎಂದು ಹೇಳಿದರು.ಎಸ್ಸಿ,ಎಸ್ಟಿ, ಓಬಿಸಿ ಸಿಎಂ ಮಾಡಿ: ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ಅಲ್ಪಸಂಖ್ಯಾತ ಸಮುದಾಯದ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಈ ಸಮುದಾಯಗಳು ಕಳೆದ ಚುನಾವಣೆಯಲ್ಲಿ ಶೇ.90 ರಷ್ಟು ಮತಗಳನ್ನು ಕಾಂಗ್ರೆಸ್ಗೆ ನೀಡಿವೆ. ಹಾಗಾಗಿ ಈ ಸಮುದಾಯ ನಾಯಕರನ್ನು ಕಾಂಗ್ರೆಸ್ ಸಿದ್ದರಾಮಯ್ಯನವರ ರಾಜೀನಾಮೆಯಿಂದ ತೆರವಾಗುವ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ನಷ್ಟೇ ಬಿಜೆಪಿಯು ಭ್ರಷ್ಟಾಚಾರ, ಲೂಟಿ ಮಾಡಿದೆ, ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ನೈತಿಕತೆ ಕೇಂದ್ರ ಸರ್ಕಾರ, ಬಿಜೆಪಿಯವರಿಗಿಲ್ಲ. ಏಕೆಂದರೆ ಕಾಂಗ್ರೆಸ್ 55 ವರ್ಷಗಳಲ್ಲಿ ಎಷ್ಟು ಲೂಟಿ ಮಾಡಿದೆಯೋ ಅಷ್ಟನ್ನು ಬಿಜೆಪಿ ಕೇವಲ 15 ವರ್ಷಗಳಲ್ಲಿ ಮಾಡಿದೆ ಎಂದು ಕುಟುಕಿದರು.ಜೈಲಿಗೆ ಹೋಗಿ ಬಂದವರು ಸಿದ್ದರಾಮಯ್ಯ ವಿರುದ್ಧ ಹೋರಾಟ: ಯಡಿಯೂರಪ್ಪ ಒಬ್ಬ ದೊಡ್ಡ ಭ್ರಷ್ಠ ರಾಜಕಾರಣಿ, ವಿಜಯೇಂದ್ರ ಮೇಲೆ ದೊಡ್ಡ ಆರೋಪ ಇದೆ ಜಾರಿ ನಿರ್ದೇಶನಾಲಯ ಪ್ರಾಮಾಣಿಕವಾಗಿ ತನಿಖೆ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಜೈಲಿಗೆ ಹೋಗುತ್ತಾರೆ ಎಂದು ಕುಹಕವಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಎನ್.ನಾಗಯ್ಯ ಮಾತನಾಡಿದರು. ಪಕ್ಷದ ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲ ಬಸವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಸಂಯೋಜಕರಾದ ಅಮಚವಾಡಿ ಪ್ರಕಾಶ್, ರಾಜಶೇಖರ, ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಮಹೇಶ್, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಗ್ರಾಪಂ ಅಧ್ಯಕ್ಷ ಎಸ್.ಬಾಲರಾಜು, ಸದಸ್ಯ ಅಲೋಕ್ ಕುಮಾರ್, ದೇವಲಾಪುರ ಶಿವಣ್ಣ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಬಸವರಾಜಪ್ಪ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಕಾಂತರಾಜು, ಯಳಂದೂರು ಬ್ಲಾಕ್ ಅಧ್ಯಕ್ಷ ಮಹೇಂದ್ರ, ಚಾಮರಾಜನಗರ ಟೌನ್ ಅಧ್ಯಕ್ಷ ರಂಗಸ್ವಾಮಿ, ಕಾರ್ಯಕರ್ತರು ಭಾಗವಹಿಸಿದ್ದರು.