ಕನ್ನಡಪ್ರಭ ವಾರ್ತೆ ಧರ್ಮಸ್ಥಳ:
ಎಲ್ಲ ಜಾತಿ, ಮತ, ಧರ್ಮ ಸೇರಿದಂತೆ ಸಮಾಜದ ಪ್ರತಿಯೊಬ್ಬರನ್ನು ಮೇಲೆತ್ತುವುದೇ ನಿಜವಾದ ಅಭಿವೃದ್ಧಿ. ಶ್ರೀಕ್ಷೇತ್ರ ಧರ್ಮಸ್ಥಳ ಕೂಡ ಜಾತ್ಯತೀತವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ 2047ರ ವಿಕಸಿತ ಭಾರತ ಗುರಿ ಈಡೇರಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದ್ದಾರೆ.ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ನ್ನು ಭಾನುವಾರ ಧರ್ಮಸ್ಥಳ ಅಮೃತ ವರ್ಷಿಣಿ ಸಭಾಭವನದಲ್ಲಿ ವರ್ಚ್ಯುವಲ್ ಮೂಲಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಬಗ್ಗೆ ನಾವೆಲ್ಲ ಮಾತನಾಡುತ್ತೇವೆ. ಭಾರತದಾದ್ಯಂತ ಇಂತಹ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಧರ್ಮಸ್ಥಳದಲ್ಲಿ ಸಿರಿ ಗ್ರಾಮೋತ್ಪನ್ನ ಹೆಸರಿನಲ್ಲಿ ಇದು ಚಾಲನೆಯಲ್ಲಿ ಇದೆ. ಮಾತ್ರವಲ್ಲ ಧಾರ್ಮಿಕ, ಶಿಕ್ಷಣ, ಆರೋಗ್ಯ, ಕಲೆ-ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಧರ್ಮಸ್ಥಳ ಕ್ಷೇತ್ರ ಅಪಾರ ಕೆಲಸ ಮಾಡಿದೆ. ಸಿರಿ ಮೂಲಕ ಮಹಿಳೆಯರ, ಬಡವರ ಉದ್ಧಾರಕ್ಕೆ ಡಾ.ವೀರೇಂದ್ರ ಹೆಗ್ಗಡೆಯವರು ಶ್ರಮಿಸುತ್ತಿದ್ದಾರೆ. ಇದರ ಸಾಧನೆಗೆ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾರೆ ಎಂಬಂತೆ ಅವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಶ್ರಮ ಇಲ್ಲಿ ಕಾಣುತ್ತಿದೆ ಎಂದು ಉಪ ರಾಷ್ಟ್ರಪತಿಗಳು ಶ್ಲಾಘಿಸಿದರು.ಜೀವನ ಭದ್ರತೆಗೆ ಸಿರಿ ಕಾರಣ:
ಗ್ರಾಮೀಣ ಹಿನ್ನೆಲೆಯ ಬಡವರಿಗೆ ‘ಸಿರಿ’ ಗ್ರಾಮೋತ್ಪನ್ನ ನೆರವಾಗಿದೆ. ಇದು ರಾತ್ರೋರಾತ್ರಿ ಬೆಳೆದಿಲ್ಲ, ವರ್ಷಾನುಗಟ್ಟಲೇ ಕಾಲ ತೆಗೆದುಕೊಂಡು ಈ ಹಂತಕ್ಕೆ ಬೆಳೆದಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಪ್ರಧಾನಿ ಆಶಯದ ಆತ್ಮನಿರ್ಭರ ಭಾರತಕ್ಕೆ ಪೂರಕವಾದ ಕಾರ್ಯಗಳು ಇಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಮಾತೃಶ್ರೀ ಸಿರಿ ಕೈಗಾರಿಕಾ ಪಾರ್ಕ್ ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯ ನೋಡಿ ನಾನು ಬಹಳ ಖುಷಿಯಾಗಿದ್ದೇನೆ. ನಾನು ಶ್ರೀಮಂಜುನಾಥಸ್ವಾಮಿ ದರ್ಶನ ಪಡೆದು ಕೃತಾರ್ಥನಾಗಿದ್ದೇನೆ. ಇದೇ ಮೊದಲ ಬಾರಿಗೆ ಮಂಜುನಾಥಸ್ವಾಮಿಯ ದರ್ಶನ ಪಡೆದಿದ್ದೇನೆ. ನಿಮಗೆ, ನಮಗೆಲ್ಲ ಶ್ರೀಮಂಜುನಾಥ ಸ್ವಾಮಿಯ ಆಶೀರ್ವಾದ ಇರಲಿ ಎಂದು ಅವರು ಆಶಿಸಿದರು.
ಮತಾಂತರ ಒಪ್ಪುವುದಿಲ್ಲ:
ಒಬ್ಬನೇ ಒಬ್ಬ ಹಿಂದುವಿನಲ್ಲಿ ಮೂಲಭೂತವಾದಿ ಇರುವುದಿಲ್ಲ. ಸರ್ವ ಜನಾಂಗದದವರು ನಮ್ಮ ದೇಶದಲ್ಲಿ ಅನ್ಯೋನ್ಯವಾಗಿದ್ದಾರೆ. ನಾನು ಮೂಲಭೂತವಾದಿಯಲ್ಲ. ಎಲ್ಲ ಧರ್ಮದವರನ್ನು ನಾನು ಗೌರವಿಸುತ್ತೇನೆ. ಅಲ್ಲಾ ಕೂಡ ದೇವರು, ಕ್ರೈಸ್ತ ಕೂಡ ದೇವರು. ಆದರೆ, ನಾನು ಮತಾಂತರವನ್ನು ಒಪ್ಪುವುದಿಲ್ಲ. ಮತಾಂತರ ಎನ್ನುವುದು ಧರ್ಮ-ಧರ್ಮಗಳ ನಡುವಿನ ಘರ್ಷಣೆಗೆ, ವೈರತ್ವಕ್ಕೆ ಕಾರಣವಾಗುತ್ತದೆ. ನಿಜವಾದ ಜಾತ್ಯತೀತತೆ ಎಂದರೆ ಎಲ್ಲ ಧರ್ಮಗಳನ್ನು ಗೌರವಿಸುವುದು. ಅವರವರ ಧರ್ಮದವರ ನಂಬಿಕೆಗೆ ಗೌರವ ನೀಡುವುದು, ಹಾಗೆಂದು ನನ್ನನ್ನು ಮತಾಂತರಗೊಂಡು ಬೇರೆ ದೇವರನ್ನು ಪೂಜಿಸು ಎಂದರೆ ಅದು ಸಾಧ್ಯನಾ ಎಂದು ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಪ್ರಶ್ನಿಸಿದರು.ಕನ್ನಡದಲ್ಲಿ ಮಾತು ಆರಂಭಿಸಿದಉಪ ರಾಷ್ಟ್ರಪತಿ, ರಾಜ್ಯಪಾಲ
ಸಮಾರಂಭದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಕನ್ನಡದಲ್ಲಿ ಮಾತು ಆರಂಭಿಸಿದರು. ‘ಎಲ್ಲರಿಗೂ ನನ್ನ ನಮಸ್ಕಾರಗಳು...’ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿ, ಭಾಷಣ ಮುಂದುವರಿಸಿದರು. ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮತ್ತು ವೇದಿಕೆಯ ಗಣ್ಯರಿಗೆ ಸಿರಿ ಉತ್ಪನ್ನಗಳ ಕಿಟ್ಅನ್ನು ನೀಡಲಾಯಿತು. ಇದೇ ವೇಳೆ, ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ನ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಅಲ್ಲದೆ, ಈ ಸಂದರ್ಭ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು.ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ ಏನೇನಿದೆ?
ಬೆಳ್ತಂಗಡಿ ಪೇಟೆಯ ಸಮಾಜ ಮಂದಿರ ರಸ್ತೆಯ ರೆಖ್ಯ ಎಂಬಲ್ಲಿ 7 ಎಕರೆ ಜಾಗದಲ್ಲಿ 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ತಲೆ ಎತ್ತಿದೆ. ಈ ಘಟಕ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡಿದ್ದು, ಕ್ಷಣ ಮಾತ್ರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದೆ. ಪ್ರಸಕ್ತ 500 ಮಂದಿಗೆ ಉದ್ಯೋಗ ಲಭಿಸಿದ್ದು, ಎಲ್ಲರೂ ಗ್ರಾಮೀಣ ಮಹಿಳೆಯರು. ಈ ಕೈಗಾರಿಕಾ ಪಾರ್ಕ್ನಲ್ಲಿ ಹೊಲಿಗೆ ಘಟಕಗಳು, ಜ್ಯೂಸ್, ಬೀಚಿಂಗ್ ಪೌಡರ್, ಅಗರಬತ್ತಿ, ತಿಂಡಿ, ಉಪ್ಪಿನಕಾಯಿ ಮತ್ತು ಖಾರ ಪದಾರ್ಥಗಳನ್ನು ವಿವಿಧ ಬ್ರ್ಯಾಂಡ್ಗಳಲ್ಲಿ ತಯಾರಿಸಿ ಸಿರಿ ಲೇಬಲ್ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಸಿರಿ ಸಂಸ್ಥೆಯ ಜನರಲ್ ಮ್ಯಾನೇಜರ್ ಜೀವನ್ ತಿಳಿಸಿದರು.ಮಹಿಳಾ ಸ್ವಾವಲಂಬನೆಗೆ ಸಿರಿ ಸ್ಥಾಪನೆ: ಡಾ। ಹೆಗ್ಗಡೆ:ಮಹಿಳಾ ಸ್ವಾವಲಂಬನೆಗೆ ಪೂರಕವಾಗಿ ಸಿರಿ ಸ್ಥಾಪನೆ ಮಾಡಲಾಯಿತು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಅಧ್ಯಕ್ಷ ಡಾ। ವೀರೇಂದ್ರ ಹೆಗ್ಗಡೆ ಹೇಳಿದರು.ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ಅನ್ನು ಭಾನುವಾರ ಧರ್ಮಸ್ಥಳ ಅಮೃತ ವರ್ಷಿಣಿ ಸಭಾಭವನದಲ್ಲಿ ವರ್ಚ್ಯುವಲ್ ಮೂಲಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ಸಮಯದಲ್ಲಿ ನಾನು ಮತ್ತು ನನ್ನ ಶ್ರೀಮತಿ ಅವರು ಈ ಭಾಗದ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ್ದೇವೆ. ಅಲ್ಲಿ ಕಂಡ ಪರಿಸ್ಥಿತಿ ನಮಗೆ ತುಂಬಾ ನೋವು ತಂದಿತು ಎಂದರು.ಅನೇಕ ಗ್ರಾಮೀಣ ಮಹಿಳೆಯರು ಜೀವನೋಪಾಯಕ್ಕಾಗಿ ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ಕುಟುಂಬಗಳಿಗೆ ಸ್ವಲ್ಪ ಕೃಷಿ ಭೂಮಿ ಇದ್ದರೂ, ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಪರಿಸ್ಥಿತಿ ಇರಲಿಲ್ಲ. ಯಾಕೆಂದರೆ ದಿನಗೂಲಿ ಕೆಲಸಕ್ಕೆ ಹೋಗದಿದ್ದರೆ ಆ ದಿನ ಕುಟುಂಬದ ಹೊಟ್ಟೆ ಹೊರೆಯುವುದು ಕಷ್ಟವಾಗಿತ್ತು. ಇದರ ಜೊತೆಗೆ ಅನೇಕ ಪುರುಷರು ಮದ್ಯಪಾನದ ದುಶ್ಚಟಕ್ಕೆ ಒಳಗಾಗಿದ್ದರು ಎಂದು ಬೇಸರಿಸಿದರು.ದೊಡ್ಡ ಕುಟುಂಬ, ಕುಟುಂಬದ ಹೆಚ್ಚಿನ ಜವಾಬ್ದಾರಿ ಮಹಿಳೆಯರ ಮೇಲೇ ಇತ್ತು. ಅವರು ತಮ್ಮ ಆರೋಗ್ಯ, ಕನಸು, ಗೌರವ ಎಲ್ಲವನ್ನೂ ತ್ಯಜಿಸಿ ಮಕ್ಕಳ ಬದುಕಿಗಾಗಿ ಹೋರಾಡುತ್ತಿದ್ದ ದೃಶ್ಯ ಮನಸ್ಸನ್ನು ಕಲಕುವಂತಿತ್ತು. ಆ ಸಂದರ್ಭದಲ್ಲಿ ಕೇವಲ ಸಹಾನುಭೂತಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಶಾಶ್ವತ ಜೀವನೋಪಾಯ ಬೇಕು ಎಂದು ಮನಗಂಡು ನಾವು ದೀರ್ಘಾವಧಿ ಕೃಷಿ ಮತ್ತು ಅಲ್ಪಾವಧಿ ಕೃಷಿ ಎಂಬ ಕಲ್ಪನೆಗಳನ್ನು ಪರಿಚಯಿಸಿದೆವು ಎಂದು ಸಿರಿ ರೂಪುಗೊಂಡ ಬಗೆಯನ್ನು ಮೆಲುಕು ಹಾಕಿದರು. ದೀರ್ಘಕಾಲದ ಆದಾಯಕ್ಕಾಗಿ ರಬ್ಬರ್ ಮತ್ತು ತೆಂಗಿನ ಗಿಡಗಳನ್ನು ವಿತರಿಸಿದ್ದೇವೆ. ತಕ್ಷಣದ ಆದಾಯಕ್ಕಾಗಿ ಮಲ್ಲಿಗೆ ಬೆಳೆ, ಹೈನುಗಾರಿಕೆ ಮತ್ತು ತರಕಾರಿ ಕೃಷಿಯನ್ನು ಉತ್ತೇಜಿಸಲಾಯಿತು. ಹೀಗೆ ನಿಧಾನವಾಗಿ ಮಹಿಳೆಯರಲ್ಲಿ ಬದಲಾವಣೆ ಕಾಣತೊಡಗಿತು. ಅವರ ಆರ್ಥಿಕ ಸ್ಥಿತಿ ಸುಧಾರಿಸಿತು. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು. ಕತ್ತಲೆಯಲ್ಲಿದ್ದ ಮನೆಗಳಿಗೆ ಆಸೆಯ ಬೆಳಕು ಬಂತು. ಜತೆಗೆ, ಮಹಿಳೆಯರಿಗೆ ಇನ್ನಷ್ಟು ಉದ್ಯೋಗಾವಕಾಶಗಳನ್ನು ದೊರಕಿಸಬೇಕೆಂಬ ಕಾರಣಕ್ಕಾಗಿ ಹೊಲಿಗೆ ಘಟಕಗಳು, ಜ್ಯೂಸ್, ಬ್ಲೀಚಿಂಗ್ ಪೌಡರ್, ಅಗರಬತ್ತಿ, ತಿಂಡಿ, ಉಪ್ಪಿನಕಾಯಿ ಮತ್ತು ಖಾರ ಪದಾರ್ಥ ತಯಾರಿಕಾ ಕೇಂದ್ರಗಳನ್ನು ವಿವಿಧ ಗ್ರಾಮಗಳಲ್ಲಿ ಆರಂಭಿಸಲಾಯಿತು. ಇದಕ್ಕಾಗಿ ಮಹಿಳೆಯರಿಗೆ ಕಚ್ಚಾ ವಸ್ತುಗಳನ್ನು ಒದಗಿಸುವುದು ಮತ್ತು ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು. ಇದರಿಂದ ಮಹಿಳೆಯರು ಸ್ವ-ಉದ್ಯೋಗದ ಮೂಲಕ ಸ್ವಲ್ಪಮಟ್ಟಿನ ಆದಾಯ ಗಳಿಸಲು ಸಾಧ್ಯವಾಯಿತು ಎಂದರು.ಆದರೆ, ಘಟಕಗಳು ವಿವಿಧ ಗ್ರಾಮಗಳಲ್ಲಿ ಇದ್ದುದರಿಂದ ಇವುಗಳನ್ನು ಸರಿಯಾಗಿ ನಿರ್ವಹಿಸುವುದು ಕಷ್ಟಕರವಾಗತೊಡಗಿತು. ಗ್ರಾಮೀಣ ಮಹಿಳೆಯರು ಒಂದೇ ಸ್ಥಳದಲ್ಲಿ ಸೇರಿ ಗೌರವದಿಂದ ಕೆಲಸ ಮಾಡುವ, ಪರಸ್ಪರ ಬೆಂಬಲಿಸುವ, ಉತ್ತಮ ಉತ್ಪನ್ನಗಳನ್ನು ತಯಾರಿಸುವ ಒಂದು ಸಾಮಾನ್ಯ ವೇದಿಕೆ ಬೇಕು ಎಂಬ ನಿರ್ಧಾರಕ್ಕೆ ಬಂದೆವು. ಆ ಕನಸೇ ‘ಸಿರಿ’. 2004ರಲ್ಲಿ ‘ಸಿರಿ’ಯನ್ನು ಲಾಭರಹಿತ ಸಂಸ್ಥೆಯಾಗಿ ಸ್ಥಾಪಿಸಲಾಯಿತು ಎಂದರು.ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳು ದೊಡ್ಡ ಮಾರುಕಟ್ಟೆ ತಲುಪುವಂತೆ ಮಾರುಕಟ್ಟೆ ಸಂಪರ್ಕಗಳನ್ನು ನಿರ್ಮಿಸಲಾಯಿತು. ಮಹಿಳೆಯರ ನೋವಿಗೆ ಸ್ಪಂದನೆಯಾಗಿ ಆರಂಭವಾದ ಪ್ರಯತ್ನ ಇಂದು ‘ಸಿರಿ’ ಎಂಬ ಮಹಿಳಾ ಆರ್ಥಿಕ ಸಬಲೀಕರಣದ ಚಳವಳಿಯಾಗಿ ಬೆಳೆದಿದೆ. ಈ ರೀತಿ ಹಲವು ಪ್ರಯೋಗಗಳ ಮೂಲಕ ಆರಂಭವಾದ ಸಿರಿ ಈಗ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಪ್ರಯಾಣದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದರು.ಪ್ರಧಾನಮಂತ್ರಿಗಳ ಕನಸಿನ ಆತ್ಮನಿರ್ಭರ ಭಾರತಕ್ಕೆ ಸಿರಿ, ಎಸ್.ಕೆ.ಡಿ.ಆರ್.ಡಿ.ಪಿ. ಮತ್ತು ರುಡ್ ಸೆಟ್ ಸಂಸ್ಥೆಗಳು ಇದೇ ದಾರಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿವೆ ಎಂದರು.
ಆತ್ಮನಿರ್ಭರಕ್ಕೆ ‘ಸಿರಿ’ ನಾಂದಿ: ಗೆಹ್ಲೋಟ್ಸಿರಿ ಗ್ರಾಮೋತ್ಪನ್ನದಿಂದ ಗ್ರಾಮೀಣ ಮಹಿಳೆಯರ ಆರ್ಥಿಕ ಸಶಕ್ತೀಕರಣ ಸಾಧ್ಯವಾಗಿದ್ದು, ಆತ್ಮನಿರ್ಭರ ಭಾರತಕ್ಕೆ ಇದು ನಾಂದಿಯಾಗಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಶ್ಲಾಘಿಸಿದ್ದಾರೆ.ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ನ್ನು ಭಾನುವಾರ ಧರ್ಮಸ್ಥಳ ಅಮೃತ ವರ್ಷಿಣಿ ಸಭಾಭವನದಲ್ಲಿ ವರ್ಚ್ಯುವಲ್ ಮೂಲಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಉದ್ಯೋಗ ಪ್ರಗತಿ, ಕ್ಷೇತ್ರ ವಿಕಾಸದ ಜೊತೆಗೆ ಭಾರತೀಯ ಸಂಸ್ಕೃತಿಯ ರಕ್ಷಣೆಗೆ ಶ್ರೀಕ್ಷೇತ್ರ ಮುಂದಾಗಿದೆ. ಗ್ರಾಮೀಣಾಭಿವೃದ್ಧಿ ಸೇವೆಗೆ ಡಾ.ಹೆಗ್ಗಡೆ ಮತ್ತು ಅವರ ಕುಟುಂಬ ತಮ್ಮನ್ನು ಸಮರ್ಪಿಸಿಕೊಂಡಿದ್ದು, ಇದು ಸಮಾಜದ ಉದ್ಧಾರಕ್ಕೆ ಕಾರಣವಾಗಿದೆ ಎಂದರು. ಜನಜೀವನದ ಆರ್ಥಿಕ ಉನ್ನತಿಯೊಂದಿಗೆ ಪ್ರಧಾನಿ ಮೋದಿಯ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಯೋಜನೆಗಳಿಗೆ ಇದು ಪೂರಕವಾಗಿದೆ. ಹೇರಳ ಉದ್ಯೋಗ ಸೃಷ್ಟಿಯೊಂದಿಗೆ ಸಿರಿ ಸಶಕ್ತ ಕೇಂದ್ರವಾಗಿ ಮೈತಳೆದಿದೆ. ಉದ್ಯೋಗ ವಲಸೆ ತಡೆಗೂ ಇಂತಹ ಕೇಂದ್ರಗಳು ಸಹಕಾರಿಯಾಗಲಿವೆ. ಮಾತೃಶ್ರೀಯವರ ಇಂತಹ ಯೋಜನೆಗಳು ಗ್ರಾಮೀಣ ಉದ್ಯೋಗೀಕರಣಕ್ಕೆ ಆದರ್ಶಪ್ರಾಯವಾಗಿವೆ ಎಂದು ಶ್ಲಾಘಿಸಿದರು.ಧರ್ಮಸ್ಥಳಕ್ಕೆ ಉಪರಾಷ್ಟ್ರಪತಿ ಭೇಟಿ, ದರ್ಶನ, ವಿಶೇಷ ಪೂಜೆ:
ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಶನಿವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿಯ ದರ್ಶನ ಪಡೆದರು.ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳು, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ, ಅನ್ನಪೂರ್ಣ ಛತ್ರಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಹಾಗೂ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ಉಪರಾಷ್ಟ್ರಪತಿಯವರು ಕೆಲಕಾಲ ಅವರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಅವರು, ಕ್ಷೇತ್ರವು ಸಮಾಜಮುಖಿ ಸೇವೆಯಲ್ಲಿ ಸಲ್ಲಿಸುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. ಭೇಟಿಯ ಸಂದರ್ಭದಲ್ಲಿ ಹೆಗ್ಗಡೆಯವರ ಕುಟುಂಬ ಸದಸ್ಯರೂ ಉಪಸ್ಥಿತರಿದ್ದರು.ದೇವರ ದರ್ಶನದ ವೇಳೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತಿತರರು ಇದ್ದರು.