ಬುದ್ಧ, ಬಸವ, ಅಂಬೇಡ್ಕರ್ ವಿಚಾರಗೋಷ್ಠಿ ಕುರಿತು ಕವಿತಾ ರೆಡ್ಡಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಂತೋಷ್ ಲಾಡ್ ಫೌಂಡೇಶನ್‌ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಮೇ 31ರ ಭಾನುವಾರ ಚಿತ್ರದುರ್ಗದ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಸಂಚಾಲಕಿ ಕವಿತಾ ರೆಡ್ಡಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಧೀರ್ಘವಾದ ಮಾನವ ಜನಾಂಗ ಮತ್ತು ಅದರ ಅಭಿವೃದ್ಧಿಯ ಇತಿಹಾಸದಲ್ಲಿ ಅನೇಕ ಸಮಾಜಗಳು ಮತ್ತು ಉಪ ಸಮಾಜಗಳು ಅನೇಕ ತರಹದ ತಾರತಮ್ಯಗಳಿಗೆ ಮತ್ತು ದಬ್ಬಾಳಿಕೆಗೆ ಒಳಗಾಗಿವೆ. ಅಸಮಾನತೆಯು ಜನರ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಅವರ ಮೂಲಭೂತ ಹಕ್ಕುಗಳನ್ನು ಮತ್ತು ಅವಶ್ಯಕತೆಗಳನ್ನು ಕಸಿದುಕೊಂಡಾಗ ವಿಶೇಷ ಮತ್ತು ಬಲಿಷ್ಠ ಗುಣಗಳುಳ್ಳ ಅನೇಕ ಮಹಾಪುರುಷರು ಮತ್ತು ಮಹಾಮಹಿಳೆಯರು ಅಸಮಾನತೆಯ ವಿರುದ್ಧ ಸಿಡಿದೆದ್ದು ಜಾತಿ, ಮತ, ಅಂತಸ್ತು, ಲಿಂಗ ಮತ್ತು ಇತರ ತಾರತಮ್ಯಗಳ ವಿರುದ್ಧ ಹೋರಾಡಿ ಹೊಸ ಸಮಾಜ ನಿರ್ಮಿಸಿ ಯಶಸ್ವಿಯಾಗಿ ಮುನ್ನಡೆಸಿರುವುದ ಇತಿಹಾಸ ಕಂಡಿದೆ ಎಂದರು.

ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ರವರ ಬಗ್ಗೆ ತಿಳಿಸುವುದರ ಅಗತ್ಯವಾಗಿದೆ. ಈಗಾಗಲೇ ಈ ರೀತಿಯಾದ ಮೂರು ಕಾರ್ಯಕ್ರಮಗಳನ್ನು ಮಾಡಲಾಗಿದೆ ಇದು ನಾಲ್ಕನೆಯದು ಎಂದರು.

ಸಂತೋಷ್ ಲಾಡ್ ಫೌಂಡೇಶನ್‍ನ ಸ್ವಯಂ ಸೇವಕ ಡಾ.ಸಂದೀಪ್ ಮಾತನಾಡಿ, ಮೇ 31ರಂದು ನಡೆಯಲಿರುವ ಬುದ್ಧ, ಬಸವ ಮತ್ತು ಅಂಬೇಡ್ಕರ್ ಒಂದು ದಿನದ ವಿಚಾರ ಸಂಕಿರಣದಲ್ಲಿ ನಾಡಿನ ವಿವಿಧ ವಿದ್ವಾಂಸರು, ಸಾಹಿತಿಗಳು ಚಿಂತಕರು ಉಪನ್ಯಾಸವನ್ನು ನೀಡಲಿದ್ದಾರೆ. ಇದ್ದಲ್ಲದೆ ನಾಡಿನ ವಿವಿಧ ಮಠಾಧೀಶೀರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬುದ್ದನ ಅಷ್ಠಾಂಗ ಮಾರ್ಗ ಒಂದು ವೈಜ್ಞಾನಿಕ ನೋಟದ ಬಗ್ಗೆ ಡಾ.ಸಂಜೀವ ಕುಲಕರ್ಣಿ, ಬುದ್ಧನ ಧಮ್ಮ ಮತ್ತು ಮಹಿಳೆಯ ಬಗ್ಗೆ ಡಾ.ಅನುಸೂಯ ಕಾಂಬಳೆ, ಬಸವಣ್ಣನವರ ಅನನ್ಯ ಸಾಧನೆಗಳ ಬಗ್ಗೆ ರಂಜಾನ ದರ್ಗಾ, ಸಮಾನತೆ ಮತ್ತು ಅಂತರ್ಜಾತಿ ವಿವಾಹ ಬಗ್ಗೆ ಡಾ.ವಿನಯ ವಕ್ಕುಂದ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪಯಣ ಸಂಕಲ್ಪದಿಂದ ಸಂವಿಧಾನದವರೆಗೆ ಬಗ್ಗೆ ಡಾ.ಅಪ್ಪಗೆರೆ ಸೋಮಶೇಖರ್ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳು 21ನೇ ಶತಮಾನದ ಭಾರತದಲ್ಲಿ ಪ್ರಸ್ತತತೆ ಬಗ್ಗೆ ಡಾ.ಜೆ ಸೋಮಶೇಖರ್ ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ ಎಂದರು. ಶಿವಾನಂದ ಶ್ರೀ, ಬಸವಮಹಾಂತ ಶ್ರೀ ಹಾಗೂ ಶಾಂತವೀರ ಶ್ರೀ ಇದ್ದರು.