ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ದಲಿತ ಸಂಘರ್ಷ ಸಮಿತಿಯ ಕಚೇರಿಯಲ್ಲಿ ಗುರುವಾರ ಬುದ್ಧ ಪೂರ್ಣಿಮೆಯನ್ನು ಬುದ್ಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಅರ್ಥಪೂರ್ಣವಾಗಿ ಮತ್ತು ಸರಳವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಧಮ್ಮಮಿತ್ರ ವಿಜಯಕುಮಾರ್, ಇತಿಹಾಸದಲ್ಲಿ ಬುದ್ಧನ ಸ್ಥಾನ ಅದ್ವಿತೀಯವಾದದ್ದು. ಭಗವಾನರು ಮಾನವರ ಇತಿಮಿತಿಗಳನ್ನು ಬಲ್ಲವರಾಗಿದ್ದರು. ಸಾಮಾನ್ಯ ಮನುಷ್ಯನ ನೆಮ್ಮದಿಯಿಂದ ಬದುಕಲು ಸೂಕ್ತ ಮಾರ್ಗಗಳನ್ನು ಬೋಧಿಸಿದರು. ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬ ಸತ್ಯವನ್ನು ಜಗತ್ತಿಗೆ ತಿಳಿಸಿ ಕೊಟ್ಟ ಮಹಾತ್ಮ ಬುದ್ಧ ಎಂದರು.ಜಗತ್ತಿನ ಶಾಂತಿ ಬಯಸಿದ ಬುದ್ಧಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಬುದ್ಧ ಪ್ರತಿಯೊಬ್ಬರ ಸುಖ ಜೀವನಕ್ಕೆ ಪಂಚಶೀಲಗಳ ಸಂದೇಶ ಸಾರಿದರು. ಅವೇ ಇವತ್ತು ಧರ್ಮ ಸೂತ್ರಗಳಾಗಿವೆ. ಜಗತ್ತಿನ ಶಾಂತಿ ಬಯಸಿದ ಬುದ್ಧ ಮುಂದೆ ಬೌದ್ಧ ಧರ್ಮವನ್ನು ಸ್ಥಾಪಿಸಿ ಬಾಬಾ ಸಾಹೇಬ್ ಅಂಬೇಡ್ಕರ್ರಂತ ಮಹಾನ್ ಜ್ಞಾನಿಗಳಿಗೆ ಪ್ರೇರಣೆಯಾಗಿದ್ದಾರೆ. ಶಾಂತಿ ನೆಮ್ಮದಿ ಬದುಕಿಗಾಗಿ ಭಗವಾನರ ಸಂದೇಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು. ದಲಿತ ಸಂಘರ್ಷ ಸಮಿತಿಯ ಮುಖಂಡ ಮು. ತಿಮ್ಮಯ್ಯ ಮಾತನಾಡಿ, ಬೌದ್ಧ ಧರ್ಮ ಜಗತ್ತಿನಲ್ಲಿಯೇ ಮಾದರಿ ಧರ್ಮವಾಗಿದೆ. ಇವತ್ತು ಜಗತ್ತಿನ ಅನೇಕ ರಾಷ್ಟ್ರಗಳು ಬೌದ್ಧ ಧರ್ಮವನ್ನು ಪಾಲಿಸುವ ಮೂಲಕ ಬುದ್ಧನ ತತ್ವಗಳನ್ನು ಒಪ್ಪಿವೆ. ಪ್ರಸ್ತುತ ದಿನಮಾನಗಳಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಪರಿಪಾಲಿಸುವುದು ಅಗತ್ಯ ಎಂದರು.
ಅಂಬೇಡ್ಕರ್ ಬಗ್ಗೆ ಅಧ್ಯಯನದಸಂಸ ತಾಲೂಕು ಸಂಚಾಲಕರಾದ ಎಂ. ಶೇಷಪ್ಪನವರು ನಮ್ಮ ಜೀವನದಲ್ಲಿ ಗೌತಮ ಬುದ್ಧ ಬೋಧಿಸಿದ ಪಂಚಶೀಲಗಳ ಪಾಲನೆಯಿಂದ ಕರುಣೆ ಮತ್ತು ನೆಮ್ಮದಿ ಪಡೆಯಲು ಸಾಧ್ಯವಿದೆ ಮತ್ತು ಪ್ರಚಾರಕ್ಕಿಂತ ವಿಚಾರಗಳನ್ನು ತಿಳಿದಾಗ ಬುದ್ಧ ಹೆಚ್ಚು ಇಷ್ಟವಾಗುತ್ತಾರೆ. ಜೊತೆಗೆ ಧಮ್ಮವನ್ನು ತಿಳಿಯುವ ಮೊದಲು ಬಾಬಾ ಸಾಹೇಬರನ್ನು ಓದಿಕೊಳ್ಳುವುದು ಮುಖ್ಯ ಎಂದರು.ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ರಾಮಕೃಷ್ಣಪ್ಪ, ಮುಖಂಡರಾದ ಎ.ಕೆ. ವೆಂಕಟೇಶಪ್ಪ, ಸೋಮಶೇಖರ್, ಚಿಕ್ಕಾಪುರ ಶ್ರೀನಿವಾಸ್, ದೊಡ್ಡಿ ಮುನಿಯಪ್ಪ, ಬಿ.ಜೆ.ರಾಮಪ್ಪ, ಮಿಟ್ಟಿಗಾನಹಳ್ಳಿ ಶ್ರೀನಿವಾಸ್, ಮಾಸ್ತಿ ಬಸವರಾಜ್, ಶಂಭಣ್ಣ, ಹರೀಶ್, ಮಚ್ಚೆ ಶ್ರೀನಿವಾಸ್ ಇದ್ದರು.