ಮೀನುಗಾರರ ಕಡೆಗಣಿಸಿದ ಬಜೆಟ್: ಗುರುರಾಜ್‌ ಗಂಟಿಹೊಳೆ

| Published : Mar 10 2025, 12:16 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಕರಾವಳಿಯ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಕ್ಷೇತ್ರಕ್ಕೂ ಸರಿಯಾಗಿ ಹಂಚಿಕೆಯೂ ಮಾಡಿಲ್ಲ. ಕರಾವಳಿಯ ಕಡಲ್ಕೊರತೆ ಸಹಿತ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಸರ್ಕಾರದ ಗಮನವನ್ನು ಸೆಳೆಯಲಾಗಿತ್ತು. ವಿಶೇಷವಾಗಿ ಕಿಂಡಿ ಅಣೆಕಟ್ಟು ಮತ್ತು ಕಾಲುಸಂಕ ನಿರ್ಮಾಣಕ್ಕೆ ವಿಶೇಷ ಅನುದಾನ ಮೀಸಲಿಡಬಹುದು ಎಂಬ ನಿರೀಕ್ಷೆ ಇತ್ತು. ಅದನ್ನು ಬಜೆಟ್‌ ಹುಸಿಗೊಳಿಸಿದ್ದಾರೆ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಂದೂರು

ಮೀನುಗಾರಿಕೆ, ಮೀನುಗಾರರನ್ನು ಮತ್ತು ಕರಾವಳಿಯನ್ನು ದ್ವೇಷಿಸುವ ಬಜೆಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆ ವಲಯದ ಉತ್ತೇಜನಕ್ಕೆ ಯಾವುದೇ ಯೋಜನೆಯನ್ನು ಘೋಷಣೆ ಮಾಡಿಲ್ಲ. ಅಲ್ಲದೆ, ಮೀನುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಕರಾವಳಿಯ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಕ್ಷೇತ್ರಕ್ಕೂ ಸರಿಯಾಗಿ ಹಂಚಿಕೆಯೂ ಮಾಡಿಲ್ಲ. ಕರಾವಳಿಯ ಕಡಲ್ಕೊರತೆ ಸಹಿತ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಸರ್ಕಾರದ ಗಮನವನ್ನು ಸೆಳೆಯಲಾಗಿತ್ತು. ವಿಶೇಷವಾಗಿ ಕಿಂಡಿ ಅಣೆಕಟ್ಟು ಮತ್ತು ಕಾಲುಸಂಕ ನಿರ್ಮಾಣಕ್ಕೆ ವಿಶೇಷ ಅನುದಾನ ಮೀಸಲಿಡಬಹುದು ಎಂಬ ನಿರೀಕ್ಷೆ ಇತ್ತು. ಅದನ್ನು ಬಜೆಟ್‌ ಹುಸಿಗೊಳಿಸಿದ್ದಾರೆ.

ಭತ್ತದ ಕೃಷಿ, ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗಬಹುದು ಎಂದು ಅಂದಾಜಿಸಿದ್ದೆವು. ತ್ರಾಸಿ ಮರವಂತೆ ಬೀಚ್‌ ಅಭಿವೃದ್ಧಿ ಸಹಿತ ಯಾವುದೇ ಬೀಚ್‌ಗಳ ಅಭಿವೃದ್ಧಿಗೂ ಅನುದಾನ ನೀಡಿಲ್ಲ. ಅಲ್ಲದೆ, ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಯಾವ ಕ್ರಮವೂ ಬಜೆಟ್‌ನಲ್ಲಿ ಇಲ್ಲ. ಒಟ್ಟಿನಲ್ಲಿ ಕರಾವಳಿ ಹಾಗೂ ಇಲ್ಲಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದವರು ಹೇಳಿದ್ದಾರೆ.