ದುರ್ಬಲರ ಸಾಮಾಜಿಕ ಭದ್ರತೆಗೆ ಮೂಲಸೌಲಭ್ಯ ಕಲ್ಪಿಸಿ

| Published : Feb 24 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನವ, ಉದಾರವಾದಿ ಜಗತ್ತಿನಲ್ಲಿ ದುರ್ಬಲರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗಿದ್ದು, ಅವರ ಏಳಿಗೆಗಾಗಿ ಪಿಂಚಣಿ, ಆರೋಗ್ಯ ರಕ್ಷಣೆ, ಆರ್ಥಿಕ ಸಬಲತೆಗಾಗಿ, ಮೂಲಭೂತ ಅವಶ್ಯಕತೆ ಒದಗಿಸಿ. ಸಾಮಾಜಿಕ ಅಸಮಾನತೆ ನೀಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅವುಗಳ ಮೌಲ್ಯಮಾಪನಕ್ಕೆ ಸಾಮಾಜಿಕ ನ್ಯಾಯ ದಿನಾಚರಣೆ ಅತ್ಯವಶ್ಯಕ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನವ, ಉದಾರವಾದಿ ಜಗತ್ತಿನಲ್ಲಿ ದುರ್ಬಲರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗಿದ್ದು, ಅವರ ಏಳಿಗೆಗಾಗಿ ಪಿಂಚಣಿ, ಆರೋಗ್ಯ ರಕ್ಷಣೆ, ಆರ್ಥಿಕ ಸಬಲತೆಗಾಗಿ, ಮೂಲಭೂತ ಅವಶ್ಯಕತೆ ಒದಗಿಸಿ. ಸಾಮಾಜಿಕ ಅಸಮಾನತೆ ನೀಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅವುಗಳ ಮೌಲ್ಯಮಾಪನಕ್ಕೆ ಸಾಮಾಜಿಕ ನ್ಯಾಯ ದಿನಾಚರಣೆ ಅತ್ಯವಶ್ಯಕ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಸಭಾಂಗಣದಲ್ಲಿ ಸಮಾಜ ಕಾರ್ಯ ವಿಭಾಗ, ನೆಹರು ಯುವ ಕೇಂದ್ರ ಹಾಗೂ ಯುಥ್ ಯುನಿವರ್ಸಲ್ ವ್ಹಾಲೆಂಟರಿ ಅಸೋಸಿಯೇಶನ್ (ಯುವ) ಆಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದ್ದು, ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ವಿವಿಧ ಜಾತಿ, ಧರ್ಮ, ವರ್ಗ, ವರ್ಣ, ಸಂಸ್ಕೃತಿ, ಲಿಂಗ, ಪ್ರದೇಶ, ಬಣ್ಣ, ಚರ್ಮದ ರಚನೆ, ಉಡುಗೆ ತೊಡುಗೆ ಆಹಾರ ಕ್ರಮಗಳಲ್ಲಿ ಭಿನ್ನತೆ ಇದೆ. ಕೆಲವೊಮ್ಮೆ ನ್ಯಾಯವನ್ನೇ ಏಕೈಕ ಗುರಿಯಾಗಿ ಹೊಂದಿರುವ ದೇಶಕ್ಕೆ ಅಡೆತಡೆಗಳು ಎದ್ದು ಕಾಣುತ್ತವೆ. ಈ ಸಮಸ್ಯೆಗಳನ್ನು ನಿವಾರಿಸಿ ತನ್ನ ನಾಗರಿಕರಿಗೆ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸಲು ಭಾರತ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದು. ಸಮುದಾಯದ ಭಾಗವಹಿಸುವಿಕೆ ಮತ್ತು ವೈಯಕ್ತಿಕ ಬದ್ಧತೆಯನ್ನು ಒಟ್ಟುಗೂಡಿಸುವ ಸಮಗ್ರ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು.

ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಗತಿಸಿದರು ಶಿಕ್ಷಣ ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದುವರೆದಿದ್ದರು, ನಾವಿನ್ನು ಸಾಮಾಜಿಕ ಅಸಮಾನತೆ ಕುರಿತು ಮಾತನಾಡುತ್ತಿರುವುದು ವಿಷಾಧನೀಯ ಪ್ರಪಂಚದ ಎಲ್ಲ ದೇಶಗಳಲ್ಲಿ ವಿವಿಧ ಮುಖಗಳಿಂದ ಸಾಮಾಜಿಕ ಅಸಮಾನತೆ ತಾಂಡವಾಡುತ್ತಿದೆ. ವರ್ಗ, ವರ್ಣ, ಲಿಂಗ-ಬೇಧ, ಬಡವ-ಶ್ರೀಮಂತ ಗಲಭೆ, ಯುದ್ಧಗಳು ಜನರ ನಿದ್ದೆಗೆಡಿಸಿವೆ. ಇವುಗಳ ಪರಿಹಾರಕ್ಕೆ ಶಾಂತಿ ಸೌಹಾರ್ದತೆ ಭ್ರಾತೃತ್ವ ನೆಲೆಗೊಳಲು ದಾರ್ಶನಿಕರ ಉಪದೇಶ ಸಂವಿಧಾನದ ಸದಾಶಯಗಳ ಅಳವಡಿಕೆಯೇ ಮೂಲಮಂತ್ರವಾಗಿ ಶಾಂತಿ ನೆಮ್ಮದಿ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿಭಾಗದ ಮುಖ್ಯಸ್ಥ ಡಾ.ಜಿ.ಬಿ.ಸೋನಾರ ಮಾತನಾಡಿ, ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವ ಪ್ರಯತ್ನಗಳಿಗೆ ಉತ್ತೇಜನ ನೀಡಬೇಕಾಗಿದ್ದು, ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

ಸಹಾಯಕ ಪ್ರಾಧ್ಯಪಕಿ ಡಾ.ಕಲಾವತಿ ಕಾಂಬಳೆ ಮಾತನಾಡಿ, ಜಗತ್ತಿನಾದ್ಯಂತ ಲಿಂಗ, ವಯಸ್ಸು, ಜನಾಂಗೀಯ ಉದ್ದೇಶ ಧರ್ಮ, ಸಂಸ್ಕೃತಿ ಕುರಿತು ಕಚ್ಚಾಟ ಬಡತನ ನಿರುದ್ಯೋಗ ಅನಕ್ಷರತೆ, ವಲಸೆ, ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿವೆ. ಇವುಗಳನ್ನು ತೊಡೆದು ಹಾಕಲು ಮತ್ತು ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸಲು ಸಾಮಾಜಿಕ ಅಸಮಾನತೆಯನ್ನು ನೀಗಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಫೆಬ್ರುವರಿ ೨೦ ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ ಎಂದರು.

ವಿಭಾಗದ ಸಹ ಪ್ರಾಧ್ಯಾಪಕ ಡಾ.ರಮೇಶ ಸೋನಕಾಂಬಳೆ, ಶಿವಲಿಂಗ ಮೇತ್ರಿ, ಶರಣು ಕೊಡಬಾಗಿ, ಶ್ರೀನಾಥ ಪಾಟೀಲ ಮುಂತಾದವರು ಇದ್ದರು. ವಿದ್ಯಾರ್ಥಿನಿ ಭೂಮಿಕ ಕೊಣ್ಣೂರ ನಿರೂಪಿಸಿದರು. ಲಕ್ಷ್ಮೀ ಸಂದಿಮನಿ ಸ್ವಾಗತಿಸಿದರು. ಪ್ರತಿಭಾ ಆಲಮೇಲ ವಂದಿಸಿದರು.