ಸಾರಾಂಶ
ಮೈಸೂರು : ಪ್ರತಿಷ್ಠಿತ ಬೋಯಿಂಗ್ ಕಂಪನಿ ಸಹಭಾಗಿತ್ವದಲ್ಲಿ ಮೈಸೂರಲ್ಲಿ ಸ್ಥಾಪಿಸಲಾದ ರಂಗಸನ್ಸ್ ಏರೋಸ್ಪೇಸ್ ಕಂಪನಿಯ ನೂತನ ಮತ್ತು ಅತ್ಯಾಧುನಿಕ ಘಟಕವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಉದ್ಘಾಟಿಸಿದರು.
ಬುಧವಾರ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಕಂಪನಿಯಿಂದ ಕೌಶಲ್ಯ ತರಬೇತಿ ಪಡೆದ 60 ಐಟಿಐ ಪದವೀಧರರಿಗೆ ಎಂ.ಬಿ.ಪಾಟೀಲ್ ಪ್ರಮಾಣಪತ್ರ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಸಚಿವರು, ಒಂದು ಕಾಲದಲ್ಲಿ ಅಗರಬತ್ತಿ ವ್ಯಾಪಾರ ಮಾಡುತ್ತಿದ್ದ ಸ್ಥಳೀಯರಾದ ರಂಗಸನ್ಸ್ ಪರಿವಾರದವರು ಈಗ ಏರೋಸ್ಪೇಸ್ ಕ್ಷೇತ್ರದಲ್ಲಿ ಛಾಪು ಮೂಡಿಸಿರುವುದು ಮೈಲಿಗಲ್ಲಾಗಿದೆ. ಮೊದಲಿನಿಂದಲೂ ಇದ್ದ ಸ್ಥಾವರದ ಪಕ್ಕದಲ್ಲೇ ನೂತನ ಕಚೇರಿ ನಿರ್ಮಾನ ಮಾಡಿಕೊಂಡಿರುವುದು ಗಮನಾರ್ಹವಾಗಿದೆ. ವೈಮಾಂತರಿಕ್ಷ ಕ್ಷೇತ್ರದಲ್ಲಿ ಇವರಿಗೆ ಬೇಕಾದ ಎಲ್ಲಾ ಸಹಕಾರವನ್ನೂ ಕೈಗಾರಿಕೆ ಇಲಾಖೆ ಕೊಡುತ್ತದೆ. ನೂತನ ಘಟಕವು ವಿಸ್ತಾರ, ವಿನ್ಯಾಸ ಮತ್ತು ಮಹತ್ವಾಕಾಂಕ್ಷೆ ಈ ಮೂರರಲ್ಲೂ ಜಾಗತಿಕ ಮಟ್ಟದಲ್ಲಿರುವುದು ಖುಷಿಯ ಸಂಗತಿಯಾಗಿದೆ ಎಂದು ಹೇಳಿದರು.
ರಂಗಸನ್ಸ್ ಏರೋಸ್ಪೇಸ್ ಜತೆ ಕೈಜೋಡಿಸಿರುವ ಬೋಯಿಂಗ್ ಕಂಪನಿ
ರಂಗಸನ್ಸ್ ಏರೋಸ್ಪೇಸ್ ಜತೆ ಬೋಯಿಂಗ್ ಕಂಪನಿ ಕೈಜೋಡಿಸಿರುವುದು ಅಭಿನಂದನಾರ್ಹವಾಗಿದೆ. ಇಲ್ಲಿ ಅತ್ಯಾಧುನಿಕ ಉತ್ಪಾದನಾ ವಿಧಾನ ಮತ್ತು ಆಧುನಿಕ ಎಂಜಿನಿಯರಿಂಗ್ ಪ್ರಯೋಗಾಲಯಗಳಿದ್ದು, ರಂಗಸನ್ಸ್ ಕಂಪನಿಯು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಪ್ರಿಸಿಷನ್ ಉತ್ಪಾದನೆಯಲ್ಲಿ ತೊಡಗಿರುವುದು ಯಶಸ್ಸಿಗೆ ಒಂದು ದೊಡ್ಡ ಉದಾಹರಣೆಯಾಗಿದೆ. ನಮ್ಮಲ್ಲಿರುವ ಏರೋಸ್ಪೇಸ್ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ಸಮರ್ಥವಾಗಿವೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇಕ್ ಇನ್ ಇಂಡಿಯಾಕ್ಕೆ ಸಹಕಾರಿ:
ಏರೋಸ್ಪೇಸ್ ವಲಯದಲ್ಲಿ ಕರ್ನಾಟಕವು ದೇಶದಲ್ಲಿಯೇ ಅಗ್ರಸ್ಥಾನದಲ್ಲಿದ್ದು, ರಂಗಸನ್ಸ್ ಮತ್ತು ಬೋಯಿಂಗ್ ಸಹಭಾಗಿತ್ವವು ಇದಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ದೇಶದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ವಹಿವಾಟಿನಲ್ಲಿ ಕರ್ನಾಟಕದ ಪಾಲು ಶೇ.65ರಷ್ಟಿದೆ. ಅಲ್ಲದೆ, ರಂಗಸನ್ಸ್ದಿಂದ ಕೌಶಲ್ಯ ತರಬೇತಿ ಪಡೆದವರ ಪೈಕಿ ಶೇ.70ರಷ್ಟು ಜನರಿಗೆ ಕಂಪನಿಯೇ ಕೆಲಸ ಕೊಡುತ್ತಿರುವುದು ಸ್ವಾಗತಾರ್ಹವಾಗಿದ್ದು, ಇದರಿಂದ ಯುವಜನರಿಗೆ ಅವಕಾಶಗಳು ಸಿಗುತ್ತವೆ. ರಂಗಸನ್ಸ್ ಕಂಪನಿಯ ಹೊಸ ಹೆಜ್ಜೆಯು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಒಳ್ಳೆಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಂಗಸನ್ಸ್ ಏರೋಸ್ಪೇಸ್ ಸಿಇಒ ಪವನ್ ರಂಗ, ಬೋಯಿಂಗ್ ಕಂಪನಿಯ ಹಿರಿಯ ನಿರ್ದೇಶಕ ಅಶ್ವನಿ ಭಾರ್ಗವ, ಬೋಯಿಂಗ್ ಅಧಿಕಾರಿಗಳಾದ ಮೋಹನದಾಸ್ ಪಿಳ್ಳೈ, ಗಣಪತಿ ಹೆಬ್ಬಾರ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ। ಮಹೇಶ ಇದ್ದರು.
ಉದ್ಯಮ ಕೈತಪ್ಪಲು ಕೇಂದ್ರ ಸರ್ಕಾರ ಕಾರಣ:
ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಉದ್ಯಮಗಳು ಹೋಗಲು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ಕಾರಣ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದು, ನಾವು ಬಹಳಷ್ಟು ಕಂಪನಿಗಳನ್ನು ಕರ್ನಾಟಕಕ್ಕೆ ಕರೆಸಿದ್ದೇವೆ. ನಾನು ₹10 ಲಕ್ಷ ಕೋಟಿ ಬಂಡವಾಳ ತಂದಿದ್ದೇನೆ ಎಂದು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೆಮಿ ಕಂಡಕ್ಟರ್ ಉದ್ಯಮಗಳು ಕೈ ತಪ್ಪಲು ಬೇರೆ ಬೇರೆ ಕಾರಣಗಳಿವೆ. ತಮಗೆ ಬೇಕಾದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಉದ್ಯಮಗಳನ್ನು ಕಳುಹಿಸುತ್ತಿದೆ. ಉದ್ಯಮಗಳ ಜೊತೆ ನಾವು ಮಾತುಕತೆ ಮಾಡಿರುತ್ತೇವೆ. ಎಲ್ಲವೂ ಅಂತಿಮವಾಗಿರುತ್ತದೆ. ದೆಹಲಿಗೆ ಹೋದ ಮೇಲೆ ಅವರು ಬದಲಾಗುತ್ತಾರೆ. ಗೂಗಲ್ ಕಂಪನಿ ಆಂಧ್ರಕ್ಕೆ ಹೋಗಲು ಕೇಂದ್ರ ಸರ್ಕಾರವೇ ನೇರ ಕಾರಣ. ಅದು ಚಂದ್ರಬಾಬು ನಾಯ್ಡು ಅವರಿಗೆ ಕೇಂದ್ರ ಸರ್ಕಾರ ಕೊಟ್ಟ ಉಡುಗೊರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಈ ರೀತಿಯಲ್ಲೂ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ.
;Resize=(128,128))
;Resize=(128,128))