ಸದಾ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ರೈತರು ನಗರ ಪ್ರದೇಶದಲ್ಲಿ ಇಂಥ ಕ್ರೀಡಾಕೂಟ ಹೆಚ್ಚು ಆಯೋಜಿಸುವ ಮೂಲಕ ರಾಸುಗಳು ಮತ್ತು ರೈತರ ನಡುವೆ ಬಾಂಧವ್ಯ ಹೆಚ್ಚಲು ಸಹಕಾರಿಯಾಗಿದೆ. ನಾಡಪ್ರಭು ಕೆಂಪೇಗೌಡ ಯುವಕರ ಬಳಗ ಮೊದಲ ಬಾರಿಗೆ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಎತ್ತಿನಗಾಡಿ ಓಟ ನಮ್ಮ ಗ್ರಾಮೀಣ ಪ್ರದೇಶದ ಸೊಗಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಹೇಳಿದರು.ಪಟ್ಟಣದ ಹೊರವಲಯದಲ್ಲಿ ಪೇಟೆ ಒಕ್ಕಲಗೇರಿಯ ನಾಡಪ್ರಭು ಕೆಂಪೇಗೌಡ ಯುವಕರ ಬಳಗ ಆಯೋಜಿಸಿದ್ದ 1ನೇ ವರ್ಷದ ರಾಜ್ಯ ಮಟ್ಟದ ಜೋಡಿ ಹಸುಗಳು ಮತ್ತು ಚಕ್ಕಡಿ ಓಟದ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಯಾವುದೇ ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಸ್ಪರ್ಧಾ ಸಮಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡಿದಂತೆ ಶಾಂತ ರೀತಿಯಿಂದ ವರ್ತಿಸಬೇಕು ಎಂದರು.
ಗ್ರಾಮೀಣ ಸೊಗಡಿನ ಸಂಸ್ಕೃತಿ ಬಿಂಬಿಸುವ ಎತ್ತಿನಗಾಡಿ ಓಟದ ರಾಸುಗಳಿಗೂ ಮತ್ತು ರೈತರಿಗೂ ಅವಿನಾವಭಾವ ಸಂಬಂಧವಿದೆ. ಸ್ಪರ್ಧೆಗಳಿಂದ ರೈತರಿಗೆ ಮನರಂಜನೆ ಜೊತೆಗೆ ಕ್ರೀಡಾ ಸ್ಫೂರ್ತಿ ತುಂಬುತ್ತದೆ ಎಂದರು.ಈ ಹಿಂದೆ ಗ್ರಾಮೀಣ ಪ್ರದೇಶದ ಜನರು ಶುಭ ಸಮಾರಂಭಗಳಿಗೆ ತೆರಳಲು ಎತ್ತಿನ ಗಾಡಿಗಳನ್ನು ಬಳಸುತ್ತಿದ್ದರು. ರೈತರು ಜಾನುವಾರುಗಳೊಂದಿಗೆ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ರಾಸುಗಳ ಪಾತ್ರ ಶ್ಲಾಘನೀಯ ಎಂದು ಬಣ್ಣಿಸಿದರು.
ಸದಾ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ರೈತರು ನಗರ ಪ್ರದೇಶದಲ್ಲಿ ಇಂಥ ಕ್ರೀಡಾಕೂಟ ಹೆಚ್ಚು ಆಯೋಜಿಸುವ ಮೂಲಕ ರಾಸುಗಳು ಮತ್ತು ರೈತರ ನಡುವೆ ಬಾಂಧವ್ಯ ಹೆಚ್ಚಲು ಸಹಕಾರಿಯಾಗಿದೆ. ನಾಡಪ್ರಭು ಕೆಂಪೇಗೌಡ ಯುವಕರ ಬಳಗ ಮೊದಲ ಬಾರಿಗೆ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ರೈತರು ಕೃಷಿ ಚಟುವಟಿಕೆಗಳ ಜೊತೆಗೆ ಮನರಂಜನೆಗೂ ಜಾನುವಾರುಗಳನ್ನು ಬಳಸುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇಂತಹ ಸ್ಪರ್ಧೆಗಳಿಗೆ ಉತ್ತೇಜನ ನೀಡಬೇಕು ಎಂದರು.
ಹಲವು ಸಮಸ್ಯೆಗಳಿಂದ ಕೃಷಿ ಚಟುವಟಿಕೆಗಳಿಂದ ರೈತರು ವಿಮುಖವಾಗುತ್ತಿರುವ ಸಂದರ್ಭದಲ್ಲಿ ಯುವಸಮೂಹ ಕೃಷಿಯತ್ತ ಚಿಂತನೆ ನಡೆಸಬೇಕು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಸಾವಿರಾರು ಕೋಟಿ ಅನುದಾನ ತಂದು ಮಳವಳ್ಳಿಯ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ. ನಮ್ಮ ಸರ್ಕಾರದ ಹಲವಾರು ಯೋಜನೆಗಳು ಬಡವರ ಕೈಹಿಡಿಯುತ್ತಿವೆ ಎಂದರು.ರಾಜ್ಯ ವಿವಿಧ ಭಾಗಗಳಿಂದ 40ಕ್ಕೂ ಅಧಿಕ ಜೋಡಿ ರಾಸುಗಳು ಭಾಗವಹಿಸಿದ್ದವು. ಈ ವೇಳೆ ತಾಪಂ ಇಒ ಎಚ್.ಜಿ. ಶ್ರೀನಿವಾಸ್, ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಕೀರ್ತನ್ ಕುಮಾರ್, ಮುಖಂಡ ಬಸವರಾಜು ಹಾಗೂ ನಾಡಪ್ರಭು ಕೆಂಪೇಗೌಡ ಯುವಕರ ಬಳಗದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.