ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆಗೆ ಸರ್ಕಾರದ ನಿರ್ಬಂಧ ಜಾರಿಯಿರುವ ಸಂದರ್ಭದಲ್ಲೇ, ಸಾಂಪ್ರದಾಯಿಕ ಎಂಡಿ ಬಲೆ ಮೀನುಗಾರಿಕೆ ನಡೆಸುತ್ತಿದ್ದ ಕಾರವಾರದ ಮೀನುಗಾರರಿಗೆ ಬುಧವಾರ ಅಪಾರ ಪ್ರಮಾಣದ ಮೀನುಗಳು ಬಲೆಗೆ ಬಿದ್ದಿವೆ.

ಕಡಲತೀರದ ಮೀನುಗಾರರ ಮುಖದಲ್ಲಿ ಮನೆಮಾಡಿದ ಹರ್ಷ, ಸಡಗರ

ಕನ್ನಡಪ್ರಭ ವಾರ್ತೆ ಕಾರವಾರ

ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆಗೆ ಸರ್ಕಾರದ ನಿರ್ಬಂಧ ಜಾರಿಯಿರುವ ಸಂದರ್ಭದಲ್ಲೇ, ಸಾಂಪ್ರದಾಯಿಕ ಎಂಡಿ ಬಲೆ ಮೀನುಗಾರಿಕೆ ನಡೆಸುತ್ತಿದ್ದ ಕಾರವಾರದ ಮೀನುಗಾರರಿಗೆ ಬುಧವಾರ ಅಪಾರ ಪ್ರಮಾಣದ ಮೀನುಗಳು ಬಲೆಗೆ ಬಿದ್ದಿವೆ. ಈ ಬಂಪರ್ ಮತ್ಸ್ಯ ಭೇಟೆಯಿಂದಾಗಿ ಕಡಲತೀರದ ಮೀನುಗಾರರ ಮುಖದಲ್ಲಿ ಹರ್ಷ ಹಾಗೂ ಸಡಗರ ಮನೆಮಾಡಿದೆ.ನಗರದ ರವೀಂದ್ರನಾಥ ಟಾಗೋರ್ ಕಡಲತೀರದ ಸಮೀಪ ಸಮುದ್ರದಲ್ಲಿ ಬೆಳಗಿನ ಜಾವ ಮೀನುಗಾರರು ಹಾಕಿದ್ದ ಎಂಡಿ ಬಲೆಗೆ ಒಂದೇ ಬಾರಿ ಊಹೆಗೂ ಮೀರಿ ಭಾರಿ ಪ್ರಮಾಣದ ಮೀನುಗಳು ಲಭಿಸಿವೆ. ಮೀನುಗಳ ಭಾರದಿಂದ ಬಲೆ ಸಂಪೂರ್ಣವಾಗಿ ತುಂಬಿ ತುಳುಕುತ್ತಿದ್ದ ಕಾರಣ, ಅದನ್ನು ದಡಕ್ಕೆ ಎಳೆಯಲು ಹತ್ತಾರು ಮೀನುಗಾರರು ಒಗ್ಗಟ್ಟಿನಿಂದ ಹರಸಾಹಸ ಪಡಬೇಕಾಯಿತು. ಮೀನುಗಾರರ ಈ ಸಂಘಟಿತ ಶ್ರಮ, ಬಲೆ ಎಳೆಯುವ ಅಪರೂಪದ ದೃಶ್ಯ ಹಾಗೂ ಮೀನುಗಳ ರಾಶಿಯನ್ನು ಕಂಡು ಬೆಳಗಿನ ವಾಯುವಿಹಾರಕ್ಕೆ ಬಂದಿದ್ದ ಸ್ಥಳೀಯರು ಹಾಗೂ ಪ್ರವಾಸಿಗರು ತೀವ್ರ ಕುತೂಹಲದಿಂದ ವೀಕ್ಷಿಸಿ ಸಂತಸಪಟ್ಟರು.ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಹಾಗೂ ಮೀನುಗಾರಿಕೆ ನಿರೀಕ್ಷಿತ ಮಟ್ಟದಲ್ಲಿ ನಡೆಯದೇ ಸಾಂಪ್ರದಾಯಿಕ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರು. ಆದರೆ ಯಾಂತ್ರಿಕ ದೋಣಿಗಳ ಸದ್ದು ಇಲ್ಲದ ಈ ನಿಶ್ಯಬ್ದ ಸಮಯದಲ್ಲಿ ಸಿಕ್ಕಿರುವ ಉತ್ತಮ ಮೀನುಗಾರಿಕೆಯಿಂದ ಅವರಲ್ಲಿ ಹೊಸ ಆಶಾಭಾವನೆ ಗರಿಗೆದರಿದೆ. ಬಲೆಗೆ ಬಿದ್ದ ಅಪಾರ ಪ್ರಮಾಣದ ಮೀನುಗಳನ್ನು ವಾಹನಗಳ ಮೂಲಕ ಸ್ಥಳೀಯ ಮಾರುಕಟ್ಟೆಗಳ ಜೊತೆಗೆ, ಬೇಡಿಕೆಗೆ ಅನುಗುಣವಾಗಿ ಹೊರ ಜಿಲ್ಲೆಗಳಿಗೂ ಸಾಗಿಸಲಾಯಿತು.ಪ್ರಸ್ತುತ ಕರಾವಳಿಯಲ್ಲಿ ಕಾಣಿಸಿಕೊಂಡಿರುವ ಅನುಕೂಲಕರ ಹವಾಮಾನ ಹಾಗೂ ಸಮುದ್ರದ ಪೂರಕ ಪರಿಸ್ಥಿತಿಯಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ಉತ್ತಮ ಫಲಿತಾಂಶ ದೊರೆತಿದೆ.