ಶರಾವತಿ ಯೋಜನೆ ವಿರುದ್ಧ ರಾವಣ ದಹನ

| Published : Oct 04 2025, 12:00 AM IST

ಸಾರಾಂಶ

ಶರಾವತಿ ಪಂಪ್ಡ್ ಯೋಜನೆ ವಿರೋಧಿಸಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಹಾಗೂ ಅವರ ಭಕ್ತರು ಮೂರು ದಿನಗಳ ಕಾಲ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸಿ, ರಾವಣ ದಹನ‌ ಕಾರ್ಯಕ್ರಮ ಆಯೋಜಿಸಿ ಸಾಂಕೇತಿಕ ಉಪವಾಸ ಸಂಪನ್ನಗೊಳಿಸಿದರು.

ಹೊನ್ನಾವರ: ಶರಾವತಿ ಪಂಪ್ಡ್ ಯೋಜನೆ ವಿರೋಧಿಸಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಹಾಗೂ ಅವರ ಭಕ್ತರು ಮೂರು ದಿನಗಳ ಕಾಲ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ಮಾಡಿದರು. ವಿಜಯ ದಶಮಿಯಂದು ಬಂಗಾರಮಕ್ಕಿಯಲ್ಲಿ ರಾವಣ ದಹನ‌ ಕಾರ್ಯಕ್ರಮ ಆಯೋಜಿಸಿ ಸಾಂಕೇತಿಕ ಉಪವಾಸ ಸಂಪನ್ನಗೊಳಿಸಿದರು. ಆನಂತರ ಮಾತನಾಡಿದ ಮಾರುತಿ ಗುರೂಜಿ, ಪಶ್ಚಿಮ ಘಟ್ಟದಲ್ಲಿ ಪ್ರಕೃತಿಗೆ ವಿರುದ್ಧವಾಗಿ ಅನುಷ್ಠಾನಗೊಳಿಸಲು ಹೊರಟಿರುವ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ರಾವಣನ ದಹನ ಮಾಡಲಾಗಿದೆ. ಕಾಮಗಾರಿ, ಟೆಂಡರ್, ಪ್ರಕ್ರಿಯೆ ಕಾನೂನು ಪ್ರಕಾರ ಆಗಿಲ್ಲ. ಅದರ ಬಗ್ಗೆ ಕೇಳಿದಾಗ ಕೆಪಿಸಿಯವರು ಸಹ ಸುಳ್ಳು ಹೇಳುತ್ತಿದ್ದಾರೆ. ಕೆಲವರು ಯೋಜನೆ ಬಗ್ಗೆ ಅಧ್ಯಯನ ಮಾಡದೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗ ನಾವು ಮಾಡಿರುವುದು ಕೇವಲ ಸಾಂಕೇತಿಕವಾಗಿ ಉಪವಾಸ. ಇದು ಸರ್ಕಾರಕ್ಕೆ ಹೋಗಿ ಮುಟ್ಟಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೇ ಯೋಜನೆ ಕೈಬಿಡದೇ ಇದ್ದರೆ ಆಮರಣಾಂತ ಉಪವಾಸ ಮಾಡುತ್ತೇನೆ ಎಂದರು.

ಶಿವಮೊಗ್ಗ ರೈತ ಸಂಘದ ಅಧ್ಯಕ್ಷ ದಿನೇಶ ಶಿರವಾಳ ಮಾತನಾಡಿ, ಶರಾವತಿ ಪಂಪ್ಡ್ ಯೋಜನೆಯಿಂದ ಮಲೆನಾಡು ಭಾಗದ ಜೀವರಾಶಿಗಳಿಗೆ ಮಾರಕವಾಗಿದೆ. ಈ ಯೋಜನೆಯ ವಿರುದ್ಧದ ಯಾವ ಹೋರಾಟಕ್ಕೂ ನಾವು ಸಿದ್ಧ. ಜನರು, ಜನಪ್ರತಿನಿಧಿಗಳು, ರೈತರು, ಪರಿಸರ ತಜ್ಞರು ಹೋರಾಟಕ್ಕೆ ಕೈಜೋಡಿಸಬೇಕು ಎಂದರು.

ಕ್ರಾಂತಿರಂಗ ಸಂಘಟನೆಯ ಮಂಗಲದಾಸ ನಾಯ್ಕ ಮಾತನಾಡಿ, ನಮ್ಮ ಜಿಲ್ಲೆ ಹಲವು ಯೋಜನೆಗಳಿಂದ ಹದಗೆಟ್ಟು ಹೋಗಿದೆ. ಅರಣ್ಯದಲ್ಲಿ ಸುರಂಗ ಕೊರೆದು ಯೋಜನೆ ಮಾಡಲು ಹೊರಟಿದ್ದಾರೆ. ಇದರಿಂದ ಜನರಿಗೆ ಮತ್ತು ಪ್ರಾಣಿಗಳಿಗೆ ತೊಂದರೆ ಉಂಟಾಗಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಸುನೀತಾ ಹೆಗಡೆ ಮಾತನಾಡಿ, ಈ ಯೋಜನೆ ಪರಿಸರಕ್ಕೆ ಮಾರಕವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಪ್ರಾರಂಭಿಸಬಾರದು. ಅಲ್ಲದೆ ನಮ್ಮ ಗ್ರಾಪಂನಲ್ಲಿ ಯೋಜನೆ ವಿರುದ್ಧ ಠರಾವು ಮಾಡಲಾಗಿದೆ. ಇದನ್ನು ನಿರಂತರವಾಗಿ ವಿರೋಧಿಸುತ್ತೇವೆ ಎಂದರು.

ಶರಾವತಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ್ ಕೊಚರೆಕರ್, ರೈತ ಸಂಘಟನೆಯ ರಮೇಶ ಕೆಳದಿ, ರಾಮಚಂದ್ರ ಮೆನೆಗುಡ್ಡ, ಸೋಮಶೇಖರ, ಗಣಪತಿ ತಾಳಗುಪ್ಪ, ರಾಜಪ್ಪ ಉಪಸ್ಥಿತರಿದ್ದರು.