ವೇಗವಾಗಿ ಸಾಗುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಬೈಕ್ ಬಸ್‌ನೊಳಗೆ ಸಿಲುಕಿಕೊಂಡು ತಕ್ಷಣವೇ ಬೆಂಕಿ ಹೊತ್ತಿಕೊಂಡು ಬೈಕ್ ಸವಾರ ಸಜೀವ ದಹನಗೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಸಿಂದಗಿ

ವೇಗವಾಗಿ ಸಾಗುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಬೈಕ್ ಬಸ್‌ನೊಳಗೆ ಸಿಲುಕಿಕೊಂಡು ತಕ್ಷಣವೇ ಬೆಂಕಿ ಹೊತ್ತಿಕೊಂಡು ಬೈಕ್ ಸವಾರ ಸಜೀವ ದಹನಗೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಮಂಗಳವಾರ ನಡೆದಿದೆ. ಸಿಂದಗಿಯ ಅಲ್ಲಾಪುರ ಲೇಔಟ್ ನಿವಾಸಿ ಅಭಿಷೇಕ ಸಾಹೇಬಗೌಡ ನಾಗರಹಳ್ಳಿ (19) ಬಸ್‌ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಸಜೀವ ದಹನಗೊಂಡ ಬೈಕ್ ಸವಾರ.

ಆಗಿದ್ದೇನು?:

ಸಿಂದಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಕನ್ನೊಳ್ಳಿ ಟೋಲ್ ಪ್ಲಾಜಾ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ವೇಗವಾಗಿ ಸಾಗುತ್ತಿರುವಾಗ ಬೈಕ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸೇರಿದಂತೆ ಬೈಕ್‌ ಸವಾರನೂ ಬಸ್‌ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ತಕ್ಷಣವೇ ಬೆಂಕಿ ಹೊತ್ತಿಕೊಂಡು ಬೆಂಕಿ ವೇಗವಾಗಿ ವ್ಯಾಪಿಸಿ ಬಸ್ ಸೇರಿದಂತೆ ಬೈಕ್‌ ಸವಾರ ಸಂಪೂರ್ಣ ಸುಟ್ಟು ಭಸ್ಮವಾಗಿದ್ದಾನೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ತಕ್ಷಣ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ತೀವ್ರತೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಾಹನ ಸಂಚಾರಕ್ಕೂ ಅಡಚಣೆಯುಂಟಾಯಿತು. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ದಾವಿಸಿ ಬೆಂಕಿ ನಿಯಂತ್ರಿಸಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.ಯುವಕನದ್ದು ಆತ್ಮಹತ್ಯೆ ಯತ್ನವೇ?:

ಬಸ್‌ಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಜೀವಂತ ದಹನವಾದ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್‌ ಎದುರಾಗಿದೆ. ಈ ಘಟನೆ ನಡೆಯುವ ಮುನ್ನ ತನ್ನ ಇನ್‌ಸ್ಟಾಗ್ರಾಂನಲ್ಲಿ ಯುವಕ ಅಭಿಷೇಕ ನಾಗರಹಳ್ಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಹಾಕಿರುವುದು ಬೆಳಕಿಗೆ ಬಂದಿದೆ. ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಯುವಕ ವಿಡಿಯೋ ಹೇಳಿಕೆಯೊಂದನ್ನು ಮಾಡಿದ್ದು, ತನ್ನ ಸಾವಿಗೆ ಆ ಮೂವರು ಕಾರಣ. ಆಕೆಯಿಲ್ಲದೆ ನಾನು ಬದುಕುವುದಿಲ್ಲ. ಜತೆಗೆ ಅವಳು ನನಗೆ ಬೇಕು, ಅವಳನ್ನ ದೂರು ಮಾಡಿದವರೆ ಸಾವಿಗೆ ಕಾರಣ ಎಂದಿದ್ದಾನೆ. ಮಧ್ಯಾಹ್ನದ ಹೊತ್ತಿಗೆ ಸಾಯುತ್ತೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾನೆ ಅಭಿಷೇಕ. ಜತೆಗೆ ವೀರೇಶ್ ನಂದೂರ್, ತಾಯಿ ಚೈತ್ರಾ ನಂದೂರ್, ಕೂಡಲಸಂಗಮದಲ್ಲಿರೋ ಅವರ ಸಂಬಂಧಿ ನವೀನ್‌ಕುಮಾರ್ ಪಾಟೀಲ್ ಕಾರಣ ಎಂದು ಇನ್‌ಸ್ಟಾಗ್ರಾಂಗೆ ವಿಡಿಯೋ ಪೋಸ್ಟ್ ಮಾಡಿದ್ದಾನೆ.