ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಮರ ಬಿದ್ದು ಧ್ವಂಸಗೊಂಡು ವರ್ಷ ಕಳೆದರೂ ಪುನರ್ ನಿರ್ಮಾಣವಾಗದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಸುಬ್ರಮಣಿ
ಸಿದ್ದಾಪುರ: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಮರ ಬಿದ್ದು ಧ್ವಂಸಗೊಂಡು ವರ್ಷ ಕಳೆದರೂ ಪುನರ್ ನಿರ್ಮಾಣವಾಗದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಿದ್ದಾಪುರ ಮುಖ್ಯ ರಸ್ತೆಯ ಹಳೆಯ ಸಿದ್ದಾಪುರದ ಸಂತ ಮರಿಯಮ್ಮನ ದೇವಾಲಯದ ಮುಂಭಾಗದಲ್ಲಿರುವ ಸಾರ್ವಜನಿಕರ ಬಸ್ಸು ತಂಗುದಾಣ ಸಮೀಪದ ತೋಟದಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಮರ ಬಸ್ ತಂಗುದಾಣದ ಮೇಲೆ ಬಿದ್ದು ಸಂಪೂರ್ಣ ಹಾನಿಗೊಳಗಾಗಿತ್ತು. ಘಟನೆ ಕುರಿತು ಪತ್ರಿಕೆಗಳಲ್ಲಿ ವರದಿಗಳು ಪ್ರಕಟಗೊಂಡ ಬಳಿಕ, ತೋಟದ ಮಾಲೀಕರಿಂದಲೇ ಅದೇ ಸ್ಥಳದಲ್ಲಿ ಹೊಸ ಬಸ್ ತಂಗುದಾಣ ನಿರ್ಮಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ, ಭರವಸೆ ನೀಡಿ ವರ್ಷ ಕಳೆದರೂ ತಂಗುದಾಣ ನಿರ್ಮಾಣ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಈ ಭಾಗದಲ್ಲಿ ಮೂರು ಶಾಲೆಗಳು, ದೇವಸ್ಥಾನಗಳಿದ್ದು ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದೇ ತಂಗುದಾಣ ಆಶ್ರಯಿಸುತ್ತಿದ್ದರು. ಇದೀಗ ತಂಗುದಾಣವಿಲ್ಲದೆ ಬಸ್ಗಾಗಿ ಕಾಯುವ ಪ್ರಯಾಣಿಕರು ಮಳೆ, ಬಿಸಿಲಿನಲ್ಲೇ ನಿಲ್ಲುವಂತಾಗಿದೆ. ವೃದ್ಧರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದೀಗ ತಂಗುದಾಣವಿದ್ದ ಜಾಗದಲ್ಲಿ ಕಾಡು ಬೆಳೆದುಕೊಂಡಿದ್ದು, ಬಸ್ ತಂಗುದಾಣವಿತ್ತು ಎಂಬುದನ್ನು ಗುರುತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರ ಬಳಕೆಯ ಜಾಗವನ್ನು ಗುರುತಿಸಿ ಸಂರಕ್ಷಿಸಬೇಕು. ಅಲ್ಲದೆ, ಧ್ವಂಸಗೊಂಡಿರುವ ಬಸ್ ತಂಗುದಾಣವನ್ನು ಅದೇ ಸ್ಥಳದಲ್ಲಿ ಕೂಡಲೇ ಪುನರ್ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಸಾರ್ವಜನಿಕರ ಬಳಕೆಯಲ್ಲಿರುವ ಬಸ್ ತಂಗುದಾಣದ ಜಾಗವನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದ್ದಾರೆ ಎಂಬ ಶಂಕೆಯಿದೆ. ಆದಷ್ಟು ಬೇಗ ಅದೇ ಸ್ಥಳದಲ್ಲಿ ತಂಗುದಾಣ ನಿರ್ಮಿಸಿ ಸಾರ್ವಜನಿಕರ ಅನುಕೂಲಕ್ಕೆ ಒದಗಿಸುಬೇಕು ಇಲ್ಲವಾದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಹೋರಾಟ ಮಾಡಲಾಗುವುದು.-ಎಚ್.ಬಿ. ರಮೇಶ್ ಜಿಲ್ಲಾ ಕಾರ್ಯದರ್ಶಿ ಸಿಪಿಐಎಂ ಕೊಡಗು.ನಾನು ಇತ್ತೀಚೆಗಷ್ಟೇ ಸಿದ್ದಾಪುರ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ಇದೀಗ ವಿಷಯ ನನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ನಿಯಮಾನುಸಾರ ಅಗತ್ಯ ಕ್ರಮವನ್ನು ಆದಷ್ಟು ಶೀಘ್ರವಾಗಿ ಕೈಗೊಳ್ಳಲಾಗುವುದು.
-ಸತೀಶ್ ಕೆ.ವಿ. ಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿದ್ದಾಪುರ ಗ್ರಾ.ಪಂ.