ನಮ್ಮ ಕುಡ್ಲ ವಾಹಿನಿಯಲ್ಲಿ ಕಳೆದ 7 ವರ್ಷಗಳಿಂದ ಪ್ರಸಾರವಾಗುವ ಸಾಪ್ತಾಹಿಕ ಭಾನುವಾರದ ‘ಬ್ಯುಸಿನೆಸ್ ಟಾನಿಕ್‘ ಎಂಬ ಕಾರ್ಯಕ್ರಮದ 350ನೇ ಸಂಚಿಕೆ ಜ.3ರಂದು ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರು: ಹೂಡಿಕೆ, ವಿಮೆ, ಗ್ರಾಹಕರ ರಕ್ಷಣೆ, ರೇರಾ, ಐಪಿಆರ್, ಆತ್ಮನಿರ್ಭರ್ ಭಾರತ್, ಎಂಎಸ್ ಎಂಇ, ಸ್ಟಾರ್ಟ್ ಅಪ್, ಹೊಸ ಕೈಗಾರಿಕಾ ನೀತಿ ಸಹಿತ ವಿವಿಧ ವಿಷಯಗಳ ಬಗ್ಗೆ ನಮ್ಮ ಕುಡ್ಲ ವಾಹಿನಿಯಲ್ಲಿ ಕಳೆದ 7 ವರ್ಷಗಳಿಂದ ಪ್ರಸಾರವಾಗುವ ಸಾಪ್ತಾಹಿಕ ಭಾನುವಾರದ ‘ಬ್ಯುಸಿನೆಸ್ ಟಾನಿಕ್‘ ಎಂಬ ಕಾರ್ಯಕ್ರಮದ 350ನೇ ಸಂಚಿಕೆ ಜ.3ರಂದು ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ರೂವಾರಿ, ಖ್ಯಾತ ಲೆಕ್ಕಪರಿಶೋಧಕ ಸಿಎ ಎಸ್.ಎಸ್. ನಾಯಕ್ ಮಾತನಾಡಿ, ‘ಬ್ಯುಸಿನೆಸ್ ಟಾನಿಕ್’ನ 350ನೇ ಸಂಚಿಕೆ ಬೆಳಗ್ಗೆ 9.15ಕ್ಕೆ ಉದ್ಘಾಟನೆಗೊಳ್ಳಲಿದೆ. ಕರ್ಣಾಟಕ ಬ್ಯಾಂಕ್ ಎಂಡಿ ರಾಘವೇಂದ್ರ ಶ್ರೀನಿವಾಸ ಭಟ್ ಉದ್ಘಾಟಿಸಲಿದ್ದಾರೆ. ಎಂಆರ್ಪಿಎಲ್ ಗ್ರೂಪ್ ಜನರಲ್ ಮೆನೇಜರ್ ಕೃಷ್ಣ ಹೆಗ್ಡೆ ಮಿಯಾರ್ ದೀಪ ಪ್ರಜ್ವಲನ ಮಾಡುವರು. ಅಲೋಶಿಯಸ್ ವಿವಿ ಉಪ ಕುಲಪತಿ ರೆ.ಫಾ.ಡಾ.ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಇದರ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಮಂಗಳೂರು ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸರ್, ಮಂಗಳೂರು ಇಸ್ಕಾನ್ ಅಧ್ಯಕ್ಷ ಗುಣಕರ ರಾಮದಾಸ, ಬೆಂಗಳೂರು ಫಿಜಾ ಗ್ರೂಪ್ ಅಧ್ಯಕ್ಷ ಬಿ.ಎಂ.ಫಾರೂಕ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಎಲ್ಲ ಸಂಚಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು.ಉದ್ಘಾಟನೆ ಬಳಿಕ 350ನೇ ಸಂಚಿಕೆಯ ಪ್ಯಾನಲ್ ಚರ್ಚೆ ಏರ್ಪಡಲಿದೆ. ‘ಇಂಡಿಯಾನೊಮಿಕ್ಸ್-2026’ ವಿಚಾರದಲ್ಲಿ ಚೆನ್ನೈನ ಸೆನ್ಸ್ ಅಂಡ್ ಸಿಂಪ್ಲಿಸಿಟಿ ಸಿಇಒ ಸುನೀಲ್ ಸುಬ್ರಮಣಿಯಂ, ವಚನ ಇನ್ವೆಸ್ಟ್ಮೆಂಟ್ ಪ್ರೆ.ಲಿ. ಸಿಎ ರುದ್ರಮೂರ್ತಿ, ಎನ್ಎಂಪಿಎ ಮಾಜಿ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು, ಮಾಡರೇಟರ್ ಆಗಿ ಎನ್ಆರ್ಐ ಮನಿ ಕ್ಲಿನಿಕ್ ಸಂಸ್ಥಾಪಕ ಡಾ.ಚಂದ್ರಕಾಂತ್ ಭಟ್ ಭಾಗವಹಿಸಲಿದ್ದಾರೆ ಎಂದರು. ನಮ್ಮ ಕುಡ್ಲ ಚಾನೆಲ್ನ ನಿರ್ದೇಶಕರಾದ ಹರೀಶ್ ಬಿ.ಕರ್ಕೇರ, ಲೀಲಾಕ್ಷ ಬಿ.ಕರ್ಕೇರ, ಬ್ಯುಸಿನೆಸ್ ಟಾನಿಕ್ನ ನಿರ್ದೇಶಕ ಸಂತ ಅಲೋಶಿಯಸ್ ವಿವಿ ಸಹಾಯಕ ಪ್ರಾಧ್ಯಾಪಕ ಅರ್ಜುನ್ ಪ್ರಕಾಶ್, ಕಾರ್ಯಕ್ರಮ ಸಂಯೋಜಕ ರಮೇಶ್ಚಂದ್ರ ಪ್ರಭು ಇದ್ದರು.
ಏನಿದು ‘ಬ್ಯುಸಿನೆಸ್ ಟಾನಿಕ್’ ಕಾರ್ಯಕ್ರಮ?ಪ್ರತೀ ಭಾನುವಾರ ಬೆಳಗ್ಗೆ 10ರಿಂದ 11.30ರ ವರೆಗೆ ‘ಬ್ಯುಸಿನೆಸ್ ಟಾನಿಕ್’ ಕಾರ್ಯಕ್ರಮ ನಡೆಯುತ್ತದೆ. ನೇರ ಫೋನ್ ಇನ್ ಮುಖಾಂತರ ವೀಕ್ಷಕರು ಉತ್ತರವನ್ನು ಪಡೆಯುತ್ತಾರೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತರವನ್ನು ನೀಡಿದ್ದಾರೆ. ಸ್ಥಳದಲ್ಲಿ ಸಮಸ್ಯೆ ಬಗೆಹರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ ಎಂದು ಸಿಎ ಎಸ್.ಎಸ್.ನಾಯಕ್ ತಿಳಿಸಿದರು.