2025ರ ವೇಳೆಗೆ ದೇಶದ 15 ಕೋಟಿ ಜನರಿಗೆ ಕ್ಯಾನ್ಸರ್‌ ಸಂಭವ

| Published : Dec 01 2023, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಧಾರವಾಡನಿತ್ಯ ನಾವು ಸೇವಿಸುವ ಆಹಾರ ಅಮೃತಕ್ಕೆ ಸಮಾನ. ಉತ್ತಮ ಆಹಾರದ ಎದುರು ಎಂತಹ ಔಷಧಿಯೂ ಇಲ್ಲ ಎಂದು ಪಾರಂಪರಿಕ ವೈದ್ಯ ಹನುಮಂತ ಮಳಲಿ ಹೇಳಿದರು.ಇಲ್ಲಿಯ ಸರ್ಕಾರಿ ನೌಕರರ ಭವನದಲ್ಲಿ ಸ್ವದೇಶಿ ಹೋರಾಟಗಾರ ರಾಜೀವ ದೀಕ್ಷಿತ್ ವಿಚಾರ ವೇದಿಕೆ ಗುರುವಾರ ಆಯೋಜಿಸಿದ್ದ ರಾಜೀವ ದೀಕ್ಷಿತ ಜಯಂತಿ ಹಾಗೂ ಪಾರಂಪರಿಕ ಔಷಧಿಗಳ ಶಕ್ತಿ ಮತ್ತು ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದ ಅವರು, ನಮ್ಮ ದೇಹಕ್ಕೆ ಆಹಾರವೇ ಪರಮ ಔಷಧಿ. ಆದರೆ, ಈ ಬಗ್ಗೆ ಹೆಚ್ಚಿನವರಿಗೆ ತಿಳಿವಳಿಕೆ ಇಲ್ಲದೇ ಇಂಗ್ಲೀಷ್‌ ಔಷಧಿಗೆ ಮಾರು ಹೋಗಿದ್ದೇವೆ. ದೇಶದಲ್ಲಿ 21 ಲಕ್ಷ ವನಸ್ಪತಿಗಳಿವೆ. ಪ್ರತಿಯೊಂದರಲ್ಲೂ ಒಂದೊಂದು ಔಷಧಿ ಇದೆ. ವನಸ್ಪತಿಯಲ್ಲಿನ ಔಷಧಿ ಗುಣ ಗುರುತಿಸುವವರು ವಿರಳ ಎಂದರು.

ಕನ್ನಡಪ್ರಭ ವಾರ್ತೆ ಧಾರವಾಡ

ನಿತ್ಯ ನಾವು ಸೇವಿಸುವ ಆಹಾರ ಅಮೃತಕ್ಕೆ ಸಮಾನ. ಉತ್ತಮ ಆಹಾರದ ಎದುರು ಎಂತಹ ಔಷಧಿಯೂ ಇಲ್ಲ ಎಂದು ಪಾರಂಪರಿಕ ವೈದ್ಯ ಹನುಮಂತ ಮಳಲಿ ಹೇಳಿದರು.

ಇಲ್ಲಿಯ ಸರ್ಕಾರಿ ನೌಕರರ ಭವನದಲ್ಲಿ ಸ್ವದೇಶಿ ಹೋರಾಟಗಾರ ರಾಜೀವ ದೀಕ್ಷಿತ್ ವಿಚಾರ ವೇದಿಕೆ ಗುರುವಾರ ಆಯೋಜಿಸಿದ್ದ ರಾಜೀವ ದೀಕ್ಷಿತ ಜಯಂತಿ ಹಾಗೂ ಪಾರಂಪರಿಕ ಔಷಧಿಗಳ ಶಕ್ತಿ ಮತ್ತು ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದ ಅವರು, ನಮ್ಮ ದೇಹಕ್ಕೆ ಆಹಾರವೇ ಪರಮ ಔಷಧಿ. ಆದರೆ, ಈ ಬಗ್ಗೆ ಹೆಚ್ಚಿನವರಿಗೆ ತಿಳಿವಳಿಕೆ ಇಲ್ಲದೇ ಇಂಗ್ಲೀಷ್‌ ಔಷಧಿಗೆ ಮಾರು ಹೋಗಿದ್ದೇವೆ. ದೇಶದಲ್ಲಿ 21 ಲಕ್ಷ ವನಸ್ಪತಿಗಳಿವೆ. ಪ್ರತಿಯೊಂದರಲ್ಲೂ ಒಂದೊಂದು ಔಷಧಿ ಇದೆ. ವನಸ್ಪತಿಯಲ್ಲಿನ ಔಷಧಿ ಗುಣ ಗುರುತಿಸುವವರು ವಿರಳ ಎಂದರು.

ಆರೋಗ್ಯದಲ್ಲಿ ಇರಲಿ ಎಚ್ಚರ:

ಪ್ರಸ್ತುತ ಸಂದರ್ಭದಲ್ಲಿ ಕಲುಷಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತಿವೆ. ಚಿಕ್ಕ ಮಕ್ಕಳಿಗೆ ಸಕ್ಕರೆ ರೋಗ, ಕಿಡ್ನಿ ವಿಫಲತೆ, ರಕ್ತದೊತ್ತಡ, ಕ್ಯಾನ್ಸರ್‌, ಹೃದಯ ಸಂಬಂಧಿತ ಕಾಯಿಲೆ ಬರುತ್ತಿವೆ. ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ ಇನ್ನೂ ಆರೋಗ್ಯವಂತರಾಗಿರುವಾಗ ಯುವ ಪೀಳಿಗೆ ಅನಾರೋಗ್ಯಕ್ಕೆ ಈಡಾಗುತ್ತಿದೆ. ದೇಶದಲ್ಲಿ 23 ಕೋಟಿ ಜನರಿಗೆ ಸಕ್ಕರೆ ಕಾಯಿಲೆ, 3 ಕೋಟಿ ಜನರಿಗೆ ಕ್ಯಾನ್ಸರ್‌, 70 ಲಕ್ಷ ಜನರಿಗೆ ಎಚ್‌ಐವಿ ಹಾಗೂ 45 ಲಕ್ಷ ಜನರಿಗೆ ಚರ್ಮ ರೋಗವಿದೆ ಎಂದು ಮಾಹಿತಿ ಇದೆ. 2025ರ ಡಿಸೆಂಬರ್‌ ವೇಳೆಗೆ ಕ್ಯಾನ್ಸರ್‌ ರೋಗಿಗಳು 15 ಕೋಟಿಗೆ ಏರಿಕೆಯಾಗುತ್ತದೆ ಎಂದು ಡಬ್ಲೂಎಚ್‌ಓ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ನಾವು ಸ್ವದೇಶಿ ಆಹಾರ ಹಾಗೂ ಶುದ್ಧ ಆಹಾರ ಸೇವನೆಯತ್ತ ಹೋಗಬೇಕು. ಇಲ್ಲದೇ ಹೋದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮಳಲಿ ಎಚ್ಚರಿಸಿದರು.

ರಾಜೀವ ದೀಕ್ಷಿತ ಬಳಗದ ಡಾ.ಪರಾಗ ಮೆಳವಂಕಿ ಮಾತನಾಡಿ, ತಾವು ಅಲೋಪತಿಕ್‌ ಕಲಿತಿದ್ದರೂ ಆಯುರ್ವೇದದ ಹಿನ್ನೆಲೆ ಇದೆ. ಜತೆಗೆ ರಾಜೀವ ದೀಕ್ಷಿತ ಅವರ ಪ್ರಭಾವವಿದೆ ಎಂದರು.

ಸಾಕಷ್ಟು ರೋಗಗಳ ಮನೆ ಮದ್ದಿನ ಮೂಲಕವೇ ಗುಣಮುಖವಾಗಲಿವೆ. ರಿಫೈನ್ಡ್‌ ಆಹಾರ ಬಳುವಂತಿಲ್ಲ. ಯೋಗ ಮತ್ತು ಬದಲಾದ ಜೀವನ ಶೈಲಿಯಿಂದ ರೋಗ ಬರದಂತೆ ತಡೆಯಬಹುದು. ಯಾವ ಸಮಯಕ್ಕೆ ಎಷ್ಟು ಪ್ರಮಾಣದಲ್ಲಿ ಯಾವ ಆಹಾರ ತೆಗೆದುಕೊಳ್ಳಬೇಕೆಂಬ ಸಣ್ಣ ಪ್ರಜ್ಞೆ ಇದ್ದವರು ಆರೋಗ್ಯವಂತರಾಗುತ್ತಾರೆ. ಸದ್ಯದಲ್ಲಿಯೇ ಬೇಲೂರಿನಲ್ಲೊಂದು ಔಷಧಿ ರಹಿತ ಆಸ್ಪತ್ರೆ ತೆರೆಯುವ ಪ್ರಯತ್ನ ನಡೆಯುತ್ತಿವೆ ಎಂದು ಹೇಳಿದರು.

ರಾಜೀವ ದೀಕ್ಷಿತ ವಿಚಾರ ವೇದಿಕೆಯ ಸೋಮಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪರಮಾತ್ಮಾ ಮಹಾರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತಂಜಲಿಯ ಭವರಲಾಲ್‌ ಆರ್ಯ, ಶ್ರೀರಾಮ ಸೇನೆ ಪ್ರಮೋದ ಮುತಾಲಿಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌.ಎಫ್‌.ಸಿದ್ದನಗೌಡರ ಹಾಗೂ ಎಂ.ಡಿ.ಪಾಟೀಲ ಇದ್ದರು.