ಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಕರಣ -ಸ್ಥಳ ಮಹಜರು ಪರಿಷತ್‌ ಸಭಾಪತಿ ವ್ಯಾಪ್ತಿಗೆ : ಸ್ಪೀಕರ್‌ ಖಾದರ್‌

| Published : Dec 29 2024, 01:18 AM IST / Updated: Dec 29 2024, 12:32 PM IST

UT Khader
ಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಕರಣ -ಸ್ಥಳ ಮಹಜರು ಪರಿಷತ್‌ ಸಭಾಪತಿ ವ್ಯಾಪ್ತಿಗೆ : ಸ್ಪೀಕರ್‌ ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ 16ನೇ ವಿಧಾನಸಭೆಯ 5ನೇ ಅಧಿವೇಶನ 8 ದಿನಗಳ ಕಾಲ 63 ಗಂಟೆ 57 ನಿಮಿಷಗಳ ಕಾರ್ಯಕಲಾಪ ನಡೆಸಿದೆ. ಧನವಿನಿಯೋಗ ಸೇರಿ ಒಟ್ಟು 16 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು.

 ಮಂಗಳೂರು : ಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಕರಣ ವಿಧಾನ ಪರಿಷತ್‌ ವ್ಯಾಪ್ತಿಗೆ ಬರುವುದರಿಂದ ಸ್ಥಳ ಮಹಜರು ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಏನಿದ್ದರೂ ಪರಿಷತ್‌ ಸಭಾಪತಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ. ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನಾ ಸ್ಥಳ ಮಹಜರಿಗೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಯಾರ ಅನುಮತಿ ಪಡೆಯಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್‌ ಖಾದರ್‌, ಘಟನೆ ನಡೆದಿರುವುದು ಪರಿಷತ್‌ ವ್ಯಾಪ್ತಿಯಲ್ಲಿ ಆಗಿರುವುದರಿಂದ ಅಲ್ಲಿ ಅಸೆಂಬ್ಲಿ ಸ್ಪೀಕರ್‌ನ ವಿಚಾರ ಬರುವುದಿಲ್ಲ. ಹಾಗಾಗಿ ಪರಿಷತ್‌ ಸಭಾಪತಿಗಳೇ ನಿಯಮಾನುಸಾರ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್‌ ಶಾಸಕರಾಗಿರುವುದರಿಂದ ಅವರ ವಿಚಾರ ನನ್ನ ವ್ಯಾಪ್ತಿಗೆ ಬರುತ್ತದೆ. ಅವರು ಪ್ರಕರಣ ಬಗ್ಗೆ ದೂರು ನೀಡಿದ್ದು, ಅದನ್ನು ಪ್ರಿವಿಲೇಜ್‌ ಕಮಿಟಿಗೆ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹಾಲಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್‌ ವಿಚಾರವನ್ನು ಶಾಸಕಾಂಗದ ಕಾರ್ಯದರ್ಶಿಗಳಿಂದ ಮಾಹಿತಿ ಪಡೆಯಲಾಗುವುದು ಎಂದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಪ್ರಕರಣದಂತಹ ಘಟನೆಗಳು ನಡೆಯಬಾರದು. ಸದನದ ಒಳಗೆ ಮಾತ್ರವಲ್ಲ, ಹೊರಗೂ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅದಕ್ಕಾಗಿ ಸದನ ಬಳಿಕವೂ ಕ್ಯಾಮರಾ ಚಿತ್ರೀಕರಣ ಮುಂದುವರಿಸುವ ಅವಶ್ಯಕತೆ ಇಲ್ಲ. ವಿಧಾನಸಭಾ ನಿಯಮದಂತೆ ಅಧಿವೇಶನ ವೇಳೆ ಮಾತ್ರ ಕ್ಯಾಮರಾ ರೆಕಾರ್ಡ್‌ ಮಾಡಲಾಗುತ್ತದೆ. ಅಧಿವೇಶನದ ನಂತರ ಕ್ಯಾಮರಾ ರೆಕಾರ್ಡ್‌ ಮಾಡುತ್ತಿಲ್ಲ. ಆದರೆ ಕಲಾಪದ ಬಳಿಕ ವರಾಂಡ ಮುಂತಾದ ಕಡೆಗಳಲ್ಲಿ ಕುಳಿತುಕೊಂಡು ಮಾತನಾಡುವಾಗಲೂ ಜನಪ್ರತಿನಿಧಿಗಳು ತಮ್ಮ ನಡವಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು ಎಂದರು. ಆದರೆ ಸುವರ್ಣ ಸೌಧದೊಳಗೆ ಪೊಲೀಸರು ಪ್ರವೇಶಿಸಿದ ಬಗ್ಗೆ ಚರ್ಚಿಸುತ್ತೇನೆ ಎಂದರು.

ಬೆಳಗಾವಿಯಲ್ಲಿ 16 ವಿಧೇಯಕ ಪಾಸ್‌

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ 16ನೇ ವಿಧಾನಸಭೆಯ 5ನೇ ಅಧಿವೇಶನ 8 ದಿನಗಳ ಕಾಲ 63 ಗಂಟೆ 57 ನಿಮಿಷಗಳ ಕಾರ್ಯಕಲಾಪ ನಡೆಸಿದೆ. ಧನವಿನಿಯೋಗ ಸೇರಿ ಒಟ್ಟು 16 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು.

ರಾಜ್ಯದಲ್ಲಿ ಬಾಣಂತಿ ಸಾವು, ಅನುದಾನದ ಕೊರತೆ, ಅಭಿವೃದ್ಧಿ ಬಗ್ಗೆ ನಿಯಮ 60ರಡಿ ನಿಲುವಳಿ ಸೂಚನೆಯಲ್ಲಿ ನಡೆಸಲಾಗಿದೆ. ಒಟ್ಟು 3,004 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾದ 150 ಪ್ರಶ್ನೆಗಳ ಪೈಕಿ 137 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ಎಂದು ಅವರು ವಿವರ ನೀಡಿದರು.

ಮಂಗಳೂರು ಕ್ಷೇತ್ರಕ್ಕೆ 2 ಯೋಜನೆಗೆ ಸಂಪುಟ ಅಸ್ತು

ನನ್ನ ಮಂಗಳೂರು ಅಸೆಂಬ್ಲಿ ಕ್ಷೇತ್ರಕ್ಕೆ 200 ಕೋಟಿ ರು.ಗಳಲ್ಲಿ ಕೋಟೆಪುರ-ಬೋಳಾರ ವರೆಗೆ ನೇತ್ರಾವತಿ ನದಿಗೆ ಪರ್ಯಾಯ ಸೇತುವೆ ನಿರ್ಮಾಣ ಹಾಗೂ ಸಜಿಪನಡುವಿನಿಂದ ತುಂಬೆ ವರೆಗೆ 62 ಕೋಟಿ ರು.ಗಳಲ್ಲಿ ಸೇತುವೆ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಮಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದರು.