ಈ ಭೂಮಿಗೆ ನೀವು ಬೊಗಸೆ ನೀರು ಕೊಟ್ಟರೆ ಸಾಕು, ಇದು ಅಮೆರಿಕದ ಕ್ಯಾಲಿಫೋರ್ನಿಯಾವನ್ನೇ ಮೀರಿಸುತ್ತದೆ ಎಂದು ನಡೆದಾಡುವ ದೇವರು, ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದ್ದ ಮಾತು ಇನ್ನೂ ಎಲ್ಲರ ಕಿವಿಯಲ್ಲಿ ಗುನುಗುತ್ತಿದೆ. ಶ್ರೀಗಳು ಹೇಳಿದ್ದ ಮಾತನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಎಂ.ಬಿ.ಪಾಟೀಲರು ಆ ಕಾಯಕಕ್ಕೆ ನೀರೆರೆದರು. ಈ ಹಿನ್ನೆಲೆ ಇದೀಗ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಬಹುಪ್ರಸಿದ್ಧ ಓರಾ-36 ತಳಿಯ ದ್ರಾಕ್ಷಿಯನ್ನೇ ವಿಜಯಪುರ ಜಿಲ್ಲೆಯಲ್ಲಿ ಬೆಳೆದು ರೈತರು ಸೈ ಎನಿಸಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಔರಾ-36 ತಳಿಯ ಕಂದು ಬಣ್ಣದ ದ್ರಾಕ್ಷಿ ರೈತರನ್ನು ಇಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಈ ಭೂಮಿಗೆ ನೀವು ಬೊಗಸೆ ನೀರು ಕೊಟ್ಟರೆ ಸಾಕು, ಇದು ಅಮೆರಿಕದ ಕ್ಯಾಲಿಫೋರ್ನಿಯಾವನ್ನೇ ಮೀರಿಸುತ್ತದೆ ಎಂದು ನಡೆದಾಡುವ ದೇವರು, ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದ್ದ ಮಾತು ಇನ್ನೂ ಎಲ್ಲರ ಕಿವಿಯಲ್ಲಿ ಗುನುಗುತ್ತಿದೆ. ಶ್ರೀಗಳು ಹೇಳಿದ್ದ ಮಾತನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಎಂ.ಬಿ.ಪಾಟೀಲರು ಆ ಕಾಯಕಕ್ಕೆ ನೀರೆರೆದರು. ಈ ಹಿನ್ನೆಲೆ ಇದೀಗ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಬಹುಪ್ರಸಿದ್ಧ ಓರಾ-36 ತಳಿಯ ದ್ರಾಕ್ಷಿಯನ್ನೇ ವಿಜಯಪುರ ಜಿಲ್ಲೆಯಲ್ಲಿ ಬೆಳೆದು ರೈತರು ಸೈ ಎನಿಸಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಔರಾ-36 ತಳಿಯ ಕಂದು ಬಣ್ಣದ ದ್ರಾಕ್ಷಿ ರೈತರನ್ನು ಇಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.
ಏನಿದು ಔರಾ-36 ದ್ರಾಕ್ಷಿ?:ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅತಿಹೆಚ್ಚು ಬೆಳೆಯಲಾಗುವ ಈ ಔರಾ-36 ದ್ರಾಕ್ಷಿ ನೋಡಲು ಕಂದು ಬಣ್ಣದ್ದಾಗಿದೆ. ಹೆಚ್ಚು ರಾಸಾಯನಿಕ ಬಳಸದೆಯೇ ಅಧಿಕ ಇಳುವರಿ ಕೊಡುತ್ತದೆ. ನೋಡಲು ಆಕರ್ಷಕವಾಗಿರುವ ಈ ದ್ರಾಕ್ಷಿ ತಿನ್ನಲು ಸಹ ಅಷ್ಟೆ ರುಚಿಕರ. ಇದು ಕ್ಯಾಲಿಫೋರ್ನಿಯಾದ ಗ್ರಾಫಾ ಗ್ಲೋಬಲ್ ಕಂಪನಿಯ ಪೆಟೆಂಟ್ನ ವೆರೈಟಿಯಾಗಿದ್ದು, ಇದನ್ನು ನಾಸಿಕನ ಸಹ್ಯಾದ್ರಿ ಫಾರ್ಮ್ಸ್ (ಎಫ್ಪಿಒ) ನವರು ವಿಸ್ತರಣೆ ಮಾಡಲು ಅನುಮತಿ ಪಡೆದಿದ್ದಾರೆ. ಅಲ್ಲಿಂದ ತಿಕೋಟಾಗೆ ಕಾಲಿಟ್ಟಿರುವ ಈ ದ್ರಾಕ್ಷಿ ಇದೀಗ ಜಿಲ್ಲೆಯಲ್ಲಿ ತನ್ನದೆಯಾದ ಬೇಡಿಕೆ ಹೊಂದಿದೆ.ಇದು ರಾಸಾಯನಿಕವೋ ಅಥವಾ ಸಾವಯವವೋ?:
ಮಹಾರಾಷ್ಟ್ರದ ನಾಸಿಕನ ಸಹ್ಯಾದ್ರಿ ಫಾರ್ಮ್ಸ್ನ ವಿಲಾಸರಾವ್ ಶಿಂಧೆ ಅವರ ಸಹಯೋಗದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಔರಾ-36 ತಳಿಯ ದ್ರಾಕ್ಷಿಯನ್ನು ತಿಕೋಟಾದ ಕೃಷ್ಣವೇಣಿ ಎಫ್.ಬಿ.ಒ (ಫಾರ್ಮರ್ಸ್ ಪ್ರೊಡ್ಯೂಜರ್ಸ್ ಆರ್ಗಾನೈಜೇಶನ್) ಇಲ್ಲಿ ಪರಿಚಯಿಸಿದೆ. ಈ ಮೊದಲು ಇಲ್ಲಿ ಬೆಳೆಯಲಾಗುತ್ತಿದ್ದ ಮಾಣಿಕ ಚಮನ್, ಥಾಮ್ಸನ್ ಸೀಡ್ಲೆಸ್, ಸೋನಾಕಾ ಈ ದ್ರಾಕ್ಷಿ ತಳಿಗಳಿಗೆ ಹೂ ಬಿಡುವ ಸಮಯದಲ್ಲಿ, ಕಾಯಿ ಗೊಂಚಲು ಹಿಡಿಯುವಾಗ, ದ್ರಾಕ್ಷಿ ವಿಸ್ತಿರ್ಣ ಹಾಗೂ ಬಣ್ಣ ಬರಲೆಂದು ಹಲವು ರಾಸಾಯನಿಕಗಳನ್ನು ಬಳಸಬೇಕಾದ ಅನಿವಾರ್ಯತೆ ಇತ್ತು. ಆದರೆ, ಈ ಔರಾ-36 ತಳಿಗೆ ಇದ್ಯಾವುದರ ಗೊಡವೆಯೇ ಇಲ್ಲ. ಹಿಗಾಗಿಯೇ ಇದು ಕೇವಲ ಶೇ.20ರಷ್ಟು ನಿರ್ವಹಣಾ ಖರ್ಚು, ಶೇ.20 ಔಷಧಯಲ್ಲೇ ದ್ರಾಕ್ಷಿ ಕೈಗೆ ಸಿಗುತ್ತದೆ.ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯ: ಕ್ಯಾಲಿಫೋರ್ನಿಯಾದಿಂದ ನಾಸಿಕ್ಗೆ ಬಂದ ಈ ದ್ರಾಕ್ಷಿಯನ್ನು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಿಕೋಟಾದ ರೈತರು ಪರಿಚಯಿಸಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾದ ರೈತರಾದ ಸಂದೀಪ ಪಾಟೀಲ 1.5 ಎಕರೆ, ಯಮನಪ್ಪ ಕೊಣ್ಣೂರ 1.5 ಎಕರೆ, ರಾಜೇಂದ್ರ ಕುಸೂರ 2 ಎಕರೆ, ಅತಾಲಟ್ಟಿ ಗ್ರಾಮದಲ್ಲಿ ಡಾ.ಸುಭಾಷ ಮುದನೂರ 8 ಎಕರೆ, ತಾಜಪೂರದ ರಾಜು ಹಾಲಳ್ಳಿ 2 ಎಕರೆ, ನಿಡೋಣಿಯ ರಾವುತ ದರ್ಗಾ 9 ಎಕರೆಯಲ್ಲಿ ದ್ರಾಕ್ಷಿ ನಾಟಿ ಮಾಡಿದ್ದಾರೆ. 2025 ಜನವರಿಯಲ್ಲಿ ನಾಟಿ ಮಾಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ನಾಸಿಕನಿಂದ ಔರಾ-36 ತಳಿಯ ಕಡ್ಡಿಗಳನ್ನು ತಂದು ಕಸಿ ಮಾಡಲಾಗಿದೆ. ಈ ಫಸಲು 2027 ಫೆಬ್ರುವರಿಯಲ್ಲಿ ತಿಕೋಟಾದ ರೈತರು ಬೆಳೆದ ದ್ರಾಕ್ಷಿಯ ಮೊದಲ ಫಸಲು ಮಾರುಕಟ್ಟೆಗೆ ಬರಲಿದೆ.ಔರಾ-36 ತಳಿಯ ವಿಶೇಷತೆಗಳು:ಇದು ನೋಡಲು ಕಂದು ಬಣ್ಣದಿಂದ ಕೂಡಿದ್ದು ಆಕರ್ಷಕವಾಗಿದೆ. ಇದನ್ನು 48 ಡಿಗ್ರಿ ತಾಪಮಾನದಲ್ಲಿಯೂ ಬೆಳೆಯಬಹುದಾಗಿದೆ. ಯಾವುದೇ ತಾಪಮಾನದಲ್ಲೂ ಶೇ.100ರಷ್ಟು ಹೂ ಬಿಡಲಿದೆ. ಉತ್ತಮ ಸೈಜು ಸಿಗಲಿದ್ದು, ಉತ್ತಮ ಬಣ್ಣ ಹೊಂದಿದೆ. ಉತ್ಕೃಷ್ಠವಾಗಿದ್ದು, ಬಹಳ ರುಚಿಕರವಾಗಿದೆ. ಈ ಫಸಲು ಬಂದಾಗ ಮಳೆಯಾದರೆ ದ್ರಾಕ್ಷಿ ಹಣ್ಣು ಸೀಳುವುದಿಲ್ಲ, ಬೇರೆ ದ್ರಾಕ್ಷಿಗಳಿಗೆ ಕಾಯಿ ದಪ್ಪ ಮಾಡಲು ರಾಸಾಯನಿಕ ಬಳಸಲಾಗುತ್ತದೆ. ಇದಕ್ಕೆ ಯಾವುದೇ ರಾಸಾಯನಿಕದ ಅಗತ್ಯವಿಲ್ಲ.ಇದು ರೈತರಿಗೆ ಹೇಗೆ ಲಾಭದಾಯಕ: ಸಾಮಾನ್ಯವಾಗಿ ಎಲ್ಲ ದ್ರಾಕ್ಷಿಗಳು ಬೆಳೆಯಲು ಪ್ರತಿ ಎಕರೆಗೆ ಸಾಲಿನಿಂದ ಸಾಲಿಗೆ 10 ಅಡಿ, ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ನಾಟಿ ಮಾಡುವಂತೆ ಇದನ್ನು ಮಾಡಬಹುದು. ದ್ರಾಕ್ಷಿ ಬೆಲೆಯಲು ಪ್ರತಿ ಎಕರೆಗೆ ₹6-7 ಲಕ್ಷ ಖರ್ಚಾಗುತ್ತದೆ. ಈ ದ್ರಾಕ್ಷಿಗೆ 7-8 ಲಕ್ಷ ವೆಚ್ಚವಾಗುತ್ತದೆ. ಒಂದು ಎಕರೆಗೆ 12 ರಿಂದ 15 ಟನ್ ಇಳುವರಿ ಬರಲಿದ್ದು, ಇದು ಕೂಡ ಅಷ್ಟೆ ಇಳುವರಿ ಸಿಗಲಿದೆ. ಆದರೆ ಬೇರೆ ದ್ರಾಕ್ಷಿಗಳು ಪ್ರತಿ ಕೆಜಿಗೆ ₹ 40ರಿಂದ 60 ಮಾರಾಟವಾಗುತ್ತವೆ. ಔರಾ-36 ದ್ರಾಕ್ಷಿಯೂ ಈಗಾಗಲೇ ಪ್ರತಿ ಕೇಜಿಗೆ ₹150ರಿಂದ 160 ರಂತೆ ಸಾಂಗ್ಲಿ, ತಾಸಗಾಂವನಲ್ಲಿ ಮಾರಾಟವಾಗಿದ್ದು, ಅಲ್ಲಿಂದ ಯೂರೇಪಿಯನ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ.ಸಿದ್ದೇಶ್ವರ ಶ್ರೀಗಳ ಪರಮ ಭಕ್ತನಾಗಿರುವ ನಾನು ಅವರು ಹೇಳಿದಂತೆ ನೀರಾವರಿ ಮಂತ್ರಿಯಾಗಿ ಈ ನೆಲಕ್ಕೆ ಬೊಗಸೆ ನೀರು ಕೊಟ್ಟಿದ್ದೇನೆ. ನಮ್ಮ ರೈತರು ಅಮೆರಿಕದ ಕ್ಯಾಲಿಫೋರ್ನಿಯಾ ದ್ರಾಕ್ಷಿಯನ್ನೇ ಬೆಳೆದು ಕೊಟ್ಟಿದ್ದಾರೆ. ಇದನ್ನು ನಮ್ಮ ಆರಾಧ್ಯ ದೈವ ಸಿದ್ದೇಶ್ವರ ಸ್ವಾಮೀಜಿಗಳಿಗೆ ಅರ್ಪಿಸುತ್ತೇವೆ. ಎಲ್ಲ ರೈತರು ಇದನ್ನು ಹೆಚ್ಚಾಗಿ ಬೆಳೆದು ಲಾಭ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ರೈತರ ಅನುಕೂಲಕ್ಕಾಗಿ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡಲು ಬಿಎಲ್ಡಿಇ ಸಂಸ್ಥೆಯಿಂದಲೇ ಹಲವು ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. -ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವರು.ನಾನು ಬಿಎಸ್ಸಿ ತೋಟಗಾರಿಕೆ ಪದವಿ ಮುಗಿಸಿದ ಬಳಿಕ ರೈತರಾದ ನಮ್ಮ ತಂದೆಯ ಜೊತೆಯಲ್ಲಿ ದ್ರಾಕ್ಷಿ ಬೆಳೆ ಬೆಳೆಯುತ್ತಿದ್ದೆ. ಆದರೆ ಸ್ಥಳೀಯ ದ್ರಾಕ್ಷಿ ಬೆಳೆಗಳಲ್ಲಿ ಪ್ರತಿಬಾರಿಯೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದ್ದವು. ಇದನ್ನು ತಪ್ಪಿಸಬೇಕು ಎಂದುಕೊಂಡು ನಾನು ಹೊಸ ಹೊಸ ವಿಚಾರ ಶೋಧಿಸಿದೆ. ಆಗ ನಾನು ನಾಸಿಕನಲ್ಲಿರುವ ಸಹ್ಯಾದ್ರೀ ಫಾರಂಗೆ ಭೇಟಿ ನೀಡಿದಾಗ ಅಲ್ಲಿ 2019ರಿಂದಲೇ ಪ್ರಾಯೋಗಿಕವಾಗಿ ಔರಾ-36 ಬೆಳೆಯಲಾಗುತ್ತಿತ್ತು. ನಂತರದಲ್ಲಿ 2024ರಲ್ಲಿ ರಾಜ್ಯದಲ್ಲಿ ಬೆಳೆಯಲು ಅನುಮತಿ ಸಿಕ್ಕ ಬಳಿಕ ನಾವು ತಂದಿದ್ದೇವೆ.-ಸಂದೀಪ ಪಾಟೀಲ,
ದ್ರಾಕ್ಷಿ ಬೆಳೆದ ರೈತ.