- ಐಡಿ ಎಸ್‌ಜಿ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್‌ಎಸ್‌ಎಸ್ ಶಿಬಿರ ಸಹಕಾರಿ. ಪ್ರತಿಯೊಬ್ಬ ವಿದ್ಯಾರ್ಥಿ ಈ ಅನುಭವ ಪಡೆದುಕೊಳ್ಳಬೇಕು ಎಂದು ಐಡಿಎಸ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ತಸ್ನೀಮ್ ಕೌಸರ್ ಮಣಿಯಾರ್ ಹೇಳಿದರು.

ನರಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಐಡಿ ಎಸ್‌ಜಿ ಸರ್ಕಾರಿ ಕಾಲೇಜು ಆಯೋಜಿಸಿದ್ಧ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಠ್ಯ ಶಿಕ್ಷಣ ಜತೆಗೆ ಸಮುದಾಯದ ಪರಿಚಯ, ಸೇವೆ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಕ್ರೀಡೆ ಮೂಲಕ ಸಮಗ್ರತೆ ಪರಿಕಲ್ಪನೆ ಹೀಗೆ ಹಲವು ಚಿಂತನೆ ಸಾಕಾರಕ್ಕಾಗಿ ಶಿಬಿರ ನಡೆಯುತ್ತದೆ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಚಟುವಟಿಕೆಯಲ್ಲಿ ಸಕ್ರಿ ಯವಾಗಿ ಭಾಗವಹಿಸಬೇಕು ಎಂದರು.

ಕಲಿಕೆ ವಿದ್ಯಾರ್ಥಿ, ಶಿಕ್ಷಕರ ನಡುವಿನ ಕೊಂಡಿ ಆಗಿರದೆ ಸಮುದಾಯದ ನಡುವೆಯೂ ರಚನಾತ್ಮಕ ಸಂಬಂಧ ಏರ್ಪಡಬೇಕು ಎನ್ನುವ ಆಶಯದೊಂದಿಗೆ ಎನ್‌ಎಸ್‌ಎಸ್ ಶಿಬಿರ ನಡೆಸಲಾಗುತ್ತದೆ. ಗ್ರಾಮದ ಸ್ವಚ್ಛತೆ ಕೆಲಸದ ಜತೆ ಗ್ರಾಮೀಣರಲ್ಲಿ ಆರೋಗ್ಯ ಅರಿವು ಮೂಡಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ತಿಳಿಸಿದರು.


ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಆದಿಲ್ ಮಾತನಾಡಿ, ಉದ್ಯೊಗ ಪಡೆಯುವುದಕ್ಕೆ ಪಠ್ಯ ನೆರವಿಗೆ ಬಂದರೆ, ಜೀವನ ನಡೆಸುವುದಕ್ಕೆ ಪಠ್ಯೇತರ ಚಟುವಟಿಕೆ ಸಹಕಾರಿ ಆಗುತ್ತದೆ. ಶಿಬಿರದ ಪ್ರತಿಕ್ಷಣ ತಮ್ಮನ್ನು ತೊಡಗಿಸಿಕೊಂಡಾಗ ಸಾರ್ಥಕತೆ ಜೀವನ ನಿಮ್ಮದಾಗಲಿದೆ ಎಂದರು.

ಐಡಿಎಸ್‌ಜಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಗಿರೀಶ್‌ಕುಮಾರ್ ಮಾತನಾಡಿ, ಪ್ರಸ್ತು ತ ಕಾಲದ ಹಳ್ಳಿ ಬದುಕಿನ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಶಿಬಿರ ಪೂರಕ. ಇಲ್ಲಿನ ರೈತರ ಜೀವನ ಕ್ರಮ ಅರಿಯಬೇಕು. ಆ ನಿಟ್ಟಿನಲ್ಲಿ ಒಟ್ಟು ಏಳು ದಿನಗಳ ಕಾಲ ಶಿಬಿರವನ್ನು ಆಯೋಜಿ ಸಲಾಗಿದೆ ಎಂದು ತಿಳಿಸಿದರು.

ಈವೇಳೆ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಚ್.ಡಿ.ಕಾಂತರಾಜು, ಪ್ರಾಧ್ಯಾಪಕರಾದ ಎಸ್.ಮಹೇಶ್, ಕವಿತಾ, ಲಿಂಗರಾಜ್, ಕಚೇರಿ ಅಧೀಕ್ಷಕ ಲಿಂಗಮೂರ್ತಿ, ಉಪನ್ಯಾಸಕ ಷರೀಫ್ ಉಪಸ್ಥಿತರಿದ್ದರು.