ಮತಕಳ್ಳತನ ಪತ್ತೆಗೆ ಪ್ರಚಾರ ಸಮಿತಿ ಸಿದ್ಧ: ವಿನಯಕುಮಾರ

| Published : Sep 19 2025, 01:00 AM IST

ಮತಕಳ್ಳತನ ಪತ್ತೆಗೆ ಪ್ರಚಾರ ಸಮಿತಿ ಸಿದ್ಧ: ವಿನಯಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮತಕಳ್ಳತನ ನಡೆದಿರುವುದು ಜಗಜ್ಜಾಹೀರಾಗಿದ್ದು, ಅದನ್ನು ಪತ್ತೆ ಹಚ್ಚುವ ಕೆಲಸ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಚಾರ ಸಮಿತಿ ಮಾಡಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವ ವಿನಯಕುಮಾರ ಸೊರಕೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯದಲ್ಲಿ ಮತಕಳ್ಳತನ ನಡೆದಿರುವುದು ಜಗಜ್ಜಾಹೀರಾಗಿದ್ದು, ಅದನ್ನು ಪತ್ತೆ ಹಚ್ಚುವ ಕೆಲಸ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಚಾರ ಸಮಿತಿ ಮಾಡಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವ ವಿನಯಕುಮಾರ ಸೊರಕೆ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತದಾರರು ಪತ್ತೆ ಹಚ್ಚಲಾಗಿದೆ. ರಾಜ್ಯದ ಇತರೆಡೆಗಳಲ್ಲಿ ಇಂಥ ಘಟನೆ ನಡೆದಿದ್ದು ಆತಂಕ ಮೂಡಿಸಿದೆ ಎಂದರು.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದಕ್ಕೆ ಅನೇಕ ಸಾಕ್ಷಾಧಾರಗಳು ದೊರೆತಿವೆ. ತಾನು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಚುನಾವಣೆ ಉಸ್ತುವಾರಿ ಆಗಿದ್ದಾಗ್ಯೂ ಅಲ್ಲಿ ಬೋಗಸ್‌ ಮತದಾರರ ಯಾದಿ ಕಂಡು ಬಂದಿತ್ತು. ಈ ವರ್ಷ ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದು, ರಾಹುಲ್‌ ಗಾಂಧಿ ಅವರು ಸುಮಾರು 800ಕಿ.ಮೀ ಪಾದಯಾತ್ರೆ ಹಮ್ಮಿಕೊಂಡು ಮತಗಳ್ಳತನದ ಕಡಿವಾಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆಂದು ಸ್ಪಷ್ಟಪಡಿಸಿದರು.

23 ಜನ ಕಾರ್ಯಕರ್ತರ ತಂಡ :

ನಮ್ಮ ರಾಜ್ಯದಲ್ಲಿ ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಎಲೆಕ್ರಾನಿಕ್‌ ಮತಯಂತ್ರ ಬದಲು ಮತ ಪತ್ರದ ಮೂಲಕವೇ ಮತದಾನ ಮಾಡಿಸಲು ನಮ್ಮ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದಲ್ಲಿ 23 ಜನ ಕಾರ್ಯಕರ್ತರ ತಂಡ ರಚಿಸಲಾಗುತ್ತಿದೆ ಎಂದರು.

ಬ್ಲಾಕ್‌ ಮಟ್ಟದ ಸಮಿತಿಗಳಲ್ಲಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಎಲ್ಲ ಸಮುದಾಯಗಳ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಗುತ್ತದೆ. ಅದರಲ್ಲಿ ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೆ ಆಧ್ಯತೆ ನೀಡಲಾಗುತ್ತದೆ. ಪ್ರಾಂತವಾರು ಕಾರ್ಯಕರ್ತರನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಒಟ್ಟಾರೆ ನಮ್ಮ ಸಮಿತಿ ಕೇವಲ ಚುನಾವಣೆಗೆ ಸೀಮಿತವಾಗಿರದೆ ಇಡೀ 5 ವರ್ಷ ಪ್ರಚಾರ ಕಾರ್ಯ ಮಾಡುತ್ತದೆ. ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರೇ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಹಾಗೂ ಆಯಾ ಬ್ಲಾಕ್‌ ಮಟ್ಟದಲ್ಲಿ ಸಾರ್ವಜನಿಕರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಸೊರಕೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಭೀಮಣ್ಣ ಮೇಟಿ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೊಡೆ, ಭಾಲ್ಕಿ ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಹಣಮಂತರಾವ್‌ ಚವ್ಹಾಣ್‌, ಬೂಡಾ ಸದಸ್ಯ ಮಹಮ್ಮದ್‌ ಸಮಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾರ್ಜ್‌ ಫರ್ನಾಂಡಿಸ್‌ ಹಾಗೂ ಇತರರು ಇದ್ದರು.

ಪ್ರತಿ ಬೂತ್‌ನಿಂದ ಇಬ್ಬರು

ಡಿಜಿಟಲ್‌ ಯುತ್‌ ಆಗಿ ನೇಮಕರಾಜ್ಯದಲ್ಲಿ ಒಟ್ಟು 59 ಸಾವಿರ ಬೂತ್‌ಗಳಿದ್ದು, ಪ್ರತಿ ಬೂತ್‌ನಿಂದ ತಲಾ ಇಬ್ಬರು ಕಾರ್ಯಕರ್ತರನ್ನು ನೇಮಿಸಿ ಅವರನ್ನು ಡಿಜಿಟಲ್‌ ಯೂತ್‌ ಎಂದು ಕರೆಯಲಾಗುತ್ತದೆ ಎಂದು ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಡಿಜಿಟಲ್‌ ಯುತ್‌ಗಳು ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯ ನಿರ್ವಹಿಸುವರು. ಪ್ರಚಾರ ಸಮಿತಿಯಿಂದ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ತರಬೇತಿ ನೀಡುವ ಉದ್ದೇಶ ಹೊಂದಿದ್ದೇವೆ ಎಂದು ಸೊರಕೆ ಹೇಳಿದರು.