ಸಾರಾಂಶ
- ಸುಪ್ರೀಂ ಕೋರ್ಟ್ ಆದೇಶದಂತೆ 3 ತಿಂಗಳಲ್ಲೇ ಸರ್ವೇ, ದಾಖಲೀಕರಣ: ಡಿಸಿ ಸೂಚನೆ । ಜಿಲ್ಲೆಯಲ್ಲಿ 2017.37 ಹೆ. ಪರಿಭಾವಿತ ಅರಣ್ಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಸುಪ್ರೀಂ ಕೋರ್ಟ್ ಆದೇಶದನ್ವಯ ಅರಣ್ಯ ಭೂಮಿಗಳ ಏಕೀಕೃತ ದಾಖಲಾತಿಗಳನ್ನು ಕ್ರೋಢೀಕರಿಸುವ ಅಭಿಯಾನ ಹಮ್ಮಿಕೊಂಡು, 3 ತಿಂಗಳಲ್ಲೇ ಸರ್ವೇ ಮಾಡಿ, ದಾಖಲೀಕರಿಸುವ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚಿಸಿದರು.ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿಗಳ ಕ್ರೋಢೀಕೃತ ದಾಖಲೆಗಳ ಜಿಲ್ಲಾಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡೀಮ್ಡ್ ಫಾರೆಸ್ಟ್ ವಿಶೇಷವಾಗಿ ಕರ್ನಾಟಕದಲ್ಲಿ ಪ್ರಮುಖವಾಗಿದೆ. ಡೀಮ್ಡ್ ಫಾರೆಸ್ಟ್ ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಅರಣ್ಯವೆಂದು ಘೋಷಿತವಾಗಿದ್ದರೂ, ವಾಸ್ತವವಾಗಿ ಅರಣ್ಯದ ಗುಣಲಕ್ಷಗಳನ್ನು ಹೊಂದಿದ್ದರೆ, 1996ರ ಟಿ.ಎನ್.ಗೋದಾವರ್ಮನ್ ತಿರುಮಲ್ಪಾಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಅರಣ್ಯ ಭೂಮಿಯೆಂದು ನಮೂದಿಸಲಾಗುವುದು. ಅಲ್ಲದೇ, ಇತರೆ ಉದ್ದೇಶಗಳಿಗಾಗಿ ಮೀಸಲು, ಸಂರಕ್ಷಿತ ಅಥವಾ ಬೇರೆ ಯಾವುದೇ ಹೆಸರಿನಲ್ಲಿ ವರ್ಗೀಕರಿಸಲ್ಪಟ್ಟ ಎಲ್ಲ ಅರಣ್ಯಗಳನ್ನು ಒಳಗೊಳ್ಳುತ್ತದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ನ ಈ ತೀರ್ಪಿನ ನಂತರ ಪ್ರತಿ ರಾಜ್ಯದಲ್ಲಿ ಡೀಮ್ಡ್ ಫಾರೆಸ್ಟ್ ಪ್ರದೇಶಗಳನ್ನು ಗುರುತಿಸಲು ತಜ್ಞರ ಸಮಿತಿಗಳನ್ನು ರಚಿಸಲು ಆದೇಶಿಸಿದೆ. ಅದರಂತೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸದ ಕಂದಾಯ ಇಲಾಖೆಯ ಅರಣ್ಯ ಪ್ರದೇಶ, ರೈತರಿಗೆ ಹಂಚಲ್ಪಟ್ಟಿದ್ದರೂ ಬೇಸಾಯ ಮಾಡದ ದಟ್ಟ ಅರಣ್ಯ ಭೂಮಿ, ಅರಣ್ಯ ಇಲಾಖೆಯ ತೋಟ ಸೇರಿದಂತೆ ಒಟ್ಟು 10,11,839.80 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶ ಒಳಗೊಂಡಿದೆ ಎಂದು ಡಿಸಿ ಹೇಳಿದರು.ಹೊಸ ಸಮೀಕ್ಷೆಗೆ ಸೂಚನೆ:
ಚನ್ನಗಿರಿ ತಾಲೂಕಿನಲ್ಲಿ 4 ಜಿಲ್ಲೆಯ ಭಾಗಗಳು ಸೇರಿದ್ದು, ಡೀಮ್ಡ್ ಫಾರೆಸ್ಟ್ ಪರಿಕಲ್ಪನೆಯು ಕರ್ನಾಟಕದಲ್ಲಿ ಹಲವಾರು ವಿವಾದಗಳಿಗೆ ಕಾರಣವಾಗಿದೆ. ಕೆಲವು ಪ್ರದೇಶಗಳನ್ನು ಡೀಮ್ಡ್ ಫಾರೆಸ್ಟ್ ಎಂಬುದಾಗಿ ವರ್ಗೀಕರಿಸುವಾಗ ವೈಜ್ಞಾನಿಕ ಮಾನದಂಡಗಳನ್ನು ಬಳಸದೇ, ಡೀಮ್ಡ್ ಫಾರೆಸ್ಟ್ ಎಂಬುದಾಗಿ ವರ್ಗೀಕರಿಸಿದ್ದರಿಂದ ತೊಂದರೆ, ತೊಡಕುಗಳು ಉಂಟಾಗಿವೆ. ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರವು ಡೀಮ್ಡ್ ಫಾರೆಸ್ಟ್ ಪೂರ್ಣಗೊಳಿಸಲು ಸೂಚನೆ ನೀಡಿದೆ. ಅದರಂತೆ ಈ ಪ್ರಕ್ರಿಯೆ ತ್ವರಿತಗೊಳಿಸಿ, ಪೂರ್ಣಗೊಳಿಸಲು ಗ್ರಾಮೀಣ, ತಾಲೂಕು ಮಟ್ಟದಲ್ಲಿ ಹೊಸ ಸಮೀಕ್ಷೆ ನಡೆಸುವಂತೆ ಸೂಚಿಸಿದರು.2017.37 ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶ:
ಅರಣ್ಯ ಇಲಾಖೆ ಅಂಕಿ ಅಂಶಗಳ ಅನ್ವಯ ಜಿಲ್ಲೆಯಲ್ಲಿ 2017.37 ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ. ಜಿಲ್ಲೆಯ ಆನಗೋಡು, ಬೆಳಗುತ್ತಿ, ಸೊಕ್ಕೆ, ಮಲೆಬೆನ್ನೂರು, ಗೋವಿನಕೋವಿ, ಬೆಳಗುತ್ತಿ, ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಬರಲಿವೆ. ಚನ್ನಗಿರಿಯು ಭದ್ರಾವತಿ ಅರಣ್ಯ ವಲಯಕ್ಕೆ ಸೇರುತ್ತದೆ. ಮುಂದಿನ 3 ತಿಂಗಳಲ್ಲಿ ಭೂ ಮಾಪನ ಇಲಾಖೆ ಎಲ್ಲಾ ಭೂ ಮಾಪಕರು, ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿಗಳು, ಪಿಡಿಒಗಳನ್ನು ಸರ್ವೇ ಕಾರ್ಯಕ್ಕೆ ನಿಯೋಜಿಸುವ ಮೂಲಕ ಅಭಿಯಾನದ ರೀತಿ ಕೆಲಸ ಮಾಡಬೇಕು. ಈ ಬಗ್ಗೆ ಸಿಬ್ಬಂದಿ ಸಭೆ ಕರೆಯುವಂತೆ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಡಿಸಿ ಸೂಚನೆ ನೀಡಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ, ಪ್ರಭಾರ ಡಿಡಿಎಲ್ಆರ್ ಕಸ್ತೂರಿ, ಇಲಾಖೆ ಅಧಿಕಾರಿಗಳು ಇದ್ದರು.
- - --20ಕೆಡಿವಿಜಿ4:
ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ. ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿಗಳ ಕ್ರೋಢೀಕೃತ ದಾಖಲೆಗಳ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಸಿದರು.