ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ಅಧ್ಯಕ್ಷರಾಗಿ ಎಸ್‌.ಆರ್‌. ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷರಾಗಿ ಪದ್ಮರಾಜ್‌ ಪಟ್ಟಾಜೆ ಅವಿರೋಧ ಆಯ್ಕೆಯಾಗಿದ್ದಾರೆ.

ಮಂಗಳೂರು: ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ಅಧ್ಯಕ್ಷರಾಗಿ ಎಸ್‌.ಆರ್‌. ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷರಾಗಿ ಪದ್ಮರಾಜ್‌ ಪಟ್ಟಾಜೆ ಅವಿರೋಧ ಆಯ್ಕೆಯಾಗಿದ್ದಾರೆ. ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಜಿಲ್ಲಾಧಿಕಾರಿ ದರ್ಶನ್‌ ಅವರು ಕ್ಯಾಂಪ್ಕೋ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷ ಪದ್ಮರಾಜ್‌ ಪಟ್ಟಾಜೆ ಇವರು ಸತತ ಮೂರನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಎಸ್‌.ಆರ್‌.ಸತೀಶ್ಚಂದ್ರ ಅವರು ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಕಾಸರಗೋಡಿನ ನಿರ್ದೇಶಕ ಪದ್ಮರಾಜ್‌ ಪಟ್ಟಾಜೆಗೆ ಮೊದಲ ಬಾರಿ ಉಪಾಧ್ಯಕ್ಷ ಹುದ್ದೆ ಲಭಿಸಿದೆ.

ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದವರ ಹೆಸರಿನ ಪಟ್ಟಿಯನ್ನು ದೆಹಲಿಯ ಸಹಕಾರಿ ಇಲಾಖೆಗೆ ಕಳುಹಿಸಲಾಗಿದ್ದು, ಅಲ್ಲಿಂದ ಡಿ.3ರಂದು ಅಧಿಕೃತ ಘೋಷಣೆಯಾಗಲಿದೆ.

ಅಧ್ಯಕ್ಷ-ಉಪಾಧ್ಯಕ್ಷರಲ್ಲದೆ 16 ಮಂದಿ ನಿರ್ದೇಶಕರಿದ್ದಾರೆ. ಕಾಸರಗೋಡಿನ 6 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದು, ಕರ್ನಾಟಕದಿಂದ 6 ನಿರ್ದೇಶಕರ ಸ್ಥಾನಕ್ಕೆ 8 ಮಂದಿ ಕಣದಲ್ಲಿದ್ದು, ಇತ್ತೀಚೆಗೆ ಚುನಾವಣೆ ನಡೆದಿತ್ತು. ದಯಾನಂದ ಹೆಗ್ಡೆ ಕಾರ್ಕಳ, ಎಂ.ಮಹೇಶ್‌ ಚೌಟ ಬಂಟ್ವಾಳ, ರಾಧಾಕೃಷ್ಣ ಹೊಸದುರ್ಗ, ಸತ್ಯನಾರಾಯಣ ಪ್ರಸಾದ್‌ ಕಾರಡ್ಕ, ರಾಘವೇಂದ್ರ ಎಚ್‌.ಎಂ. ಗರ್ತಿಕೆರೆ, ಸತೀಶ್ಚಂದ್ರ ಭಂಡಾರಿ ಮಂಜೇಶ್ವರ, ತೀರ್ಥರಾಮ ಎಂ.ವಿ. ಸುಳ್ಯ, ಪುರುಷೋತ್ತಮ ಭಟ್‌ ಮಂಗಳೂರು, ವೆಂಕಟ್ರಮಣ ಭಟ್‌ ವೈ. ಪಡ್ರೆ, ವಿವೇಕಾನಂದ ಗೌಡ ಕಾಸರಗೋಡು, ಸದಾನಂದ ಶೆಟ್ಟಿ ಮಂಜೇಶ್ವರ, ಮುರಳಿಕೃಷ್ಣ ಕೆ.ಎನ್‌. ಸುಳ್ಯ, ಗಣೇಶ್‌ ಕುಮಾರ್‌ ಸುಳ್ಯ, ಸೌಮ್ಯ ಪ್ರಕಾಶ್‌ ಮದಂಗಲ್ಲು ಮಂಜೇಶ್ವರ, ವಿಶ್ವನಾಥ್‌ ಈಶ್ವರ ಹೆಗಡೆ ಕುಮಟಾ ಹಾಗೂ ಗಣೇಶ್‌ ಬಂಟ್ವಾಳ ನಿರ್ದೇಶಕರು.

-------------