ಉ.ಕ. ವನವಾಸಿಗಳಿಂದ ಬಾಲರಾಮನಿಗೆ ಬೆತ್ತದ ಪಲ್ಲಕ್ಕಿ ಅರ್ಪಣೆ

| Published : Feb 20 2024, 01:51 AM IST

ಸಾರಾಂಶ

ವನವಾಸಿ ಬಂಧುಗಳೂ ಒಂದು ಬೆತ್ತದ ಪಲ್ಲಕ್ಕಿಯನ್ನು ತಯಾರಿಸಿ ಕೊಡುವಂತೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವನವಾಸಿ ವಿಭಾಗದ ಪ್ರಮುಖರಲ್ಲಿ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಾಲ್ವರು ಈ ಸುಂದರವಾದ ಬೆತ್ತದ ಪಲ್ಲಕ್ಕಿಯನ್ನು ಸಮರ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಅಯೋಧ್ಯೆಯ ರಾಮನಿಗೆ ಮಂದಿರ ಕಟ್ಟುವಲ್ಲಿಂದ ಆರಂಭಿಸಿ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಇನ್ನಿಲ್ಲವೆಂಬಂತೆ ಧನಕನಕ ವಸ್ತುಗಳನ್ನು ತಂದೊಪ್ಪಿಸುತ್ತಲೇ ಇದ್ದಾರೆ. ಕರ್ನಾಟಕ ಪ್ರಾಂತ ವನವಾಸಿ ವಿಭಾಗದ ಉತ್ತರ ಕನ್ನಡ ಜಿಲ್ಲೆಯ ಬಂಧುಗಳು ಅತ್ಯಂತ ಶ್ರದ್ಧೆಯಿಂದ ತಾವೇ ಸುಂದರವಾಗಿ ತಯಾರಿಸಿದ ಬೆತ್ತದ ಪಲ್ಲಕ್ಕಿಯನ್ನು ಸೋಮವಾರ ಅಯೋಧ್ಯೆಗೆ ತೆರಳಿ ರಾಮನಿಗೆ ಅರ್ಪಿಸಿ ಧನ್ಯರಾದರು.‌ಮಂಡಲೋತ್ಸವದ ಪ್ರಯುಕ್ತ ಸೋಮವಾರ ಸಂಜೆ ನಡೆದ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಸುಂದರವಾಗಿ ಅಲಂಕರಿಸಲಾದ ಇದೇ ಪಲ್ಲಕ್ಕಿಯಲ್ಲಿ ಶ್ರೀರಾಮದೇವರ ಉತ್ಸವ ಮೂರ್ತಿಯನ್ನಿಟ್ಟು ಉತ್ಸವ ನಡೆಸಲಾಯಿತು.ಅಯೋಧ್ಯೆಯ ಉತ್ಸವದಲ್ಲಿ ಸಮಾಜದ ಎಲ್ಲ ವರ್ಗದ ಜನ ಭಾಗವಹಿಸುವಂತಾಗಬೇಕು, ಅದರಂತೆ ವನವಾಸಿ ಬಂಧುಗಳೂ ಒಂದು ಬೆತ್ತದ ಪಲ್ಲಕ್ಕಿಯನ್ನು ತಯಾರಿಸಿ ಕೊಡುವಂತೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವನವಾಸಿ ವಿಭಾಗದ ಪ್ರಮುಖರಲ್ಲಿ ಅಪೇಕ್ಷೆ ವ್ಯಕ್ತಪಡಿಸಿದ್ದರು.ಅದರಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕೇಶವ ಮರಾಠಿ, ವಿನಾಯಕ ಮರಾಠಿ, ಸುನಿಲ್ ನಾಯ್ಕ, ಅರುಣ್ ನಾಯ್ಕ ಎಂಬ ನಾಲ್ವರು ಈ ಸುಂದರವಾದ ಬೆತ್ತದ ಪಲ್ಲಕ್ಕಿಯನ್ನು ನಿರ್ಮಿಸಿ, ಕಾರಿನಲ್ಲಿ ಇಟ್ಟುಕೊಂಡು ಅಯೋಧ್ಯೆಗೆ ತಂದು ಶ್ರೀಗಳ ಮೂಲಕ ರಾಮದೇವರಿಗೆ ಅರ್ಪಿಸಿದ್ದಾರೆ. ಶ್ರೀಗಳು ಇದಕ್ಕೆ ಶ್ರಮಿಸಿದ ಎಲ್ಲರನ್ನೂ ರಾಮದೇವರು ವಿಶೇಷವಾಗಿ ಅನುಗ್ರಹಿಸಲಿ ಎಂದು ಹಾರೈಸಿದರು.ಸೋಮವಾರ ಬೆಳಗ್ಗೆ ರಾಜ್ಯದ ಮಾಜಿ ಸಚಿವ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿ ದಂಪತಿ ಹಾಗೂ ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಶ್ರೀಧರ ರೆಡ್ಡಿ ರಾಮ ದೇವರಿಗೆ ಕಲಶಾಭಿಷೇಕ ಸೇವೆ ನಡೆಯಿತು. ಸಂಜೆಯ ಉತ್ಸವದಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಭಾಗವಹಿಸಿದರು.