ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಹಿಂಬದಿಯಿಂದ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಶಿರಾ ರಸ್ತೆ ಕುರುಬರಹಳ್ಳಿ ಗೇಟ್ ಬಳಿ ನಡೆದಿದೆ. ರಾಜೇಶ್ವರಿ (17) ಗಾಯಗೊಂಡ ವಿದ್ಯಾರ್ಥಿನಿ.ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಥಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜೇಶ್ವರಿ, ಕಾಲೇಜಿನಿಂದ ರಾಮಯ್ಯನ ಪಾಳ್ಯಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಕೊತ್ತೂರಿನಿಂದ ಪಾವಗಡ ಮಾರ್ಗ ವೇಗವಾಗಿ ಬಂದ ಕಾರು ಗುದ್ದಿದೆ. ಪರಿಣಾಮ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಘಟನೆ ಕುರಿತು ಪ್ರಕರಣ ದಾಖಲು ಆಗುವವರೆವಿಗೂ ವಾಪಸ್ಸಾಗುವುದಿಲ್ಲ ಎಂದು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ಎಫ್ಐಆರ್ ಗೆ ಪಟ್ಟುಹಿಡಿದರು. ಕಾರು ವಶಕ್ಕೆ ಪಡೆದ ಪೊಲೀಸರು ಚಾಲಕ ಕೊತ್ತೂರು ಗ್ರಾಮದ ಚಿತ್ತಯ್ಯನ ಪುತ್ರ ಯೋಗರಾಜ್ನನ್ನು ಬಂಧಿಸಿದ್ದು, ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಗುರುಮೂರ್ತಿ ಘಟನೆ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
ಕಣಿವೇನಹಳ್ಳಿಯ ಗೇಟ್ ಕಾಲೇಜು ಮುಂಬಾಗ ಪಾವಗಡ-ಶಿರಾ ರಸ್ತೆ ಮಾರ್ಗದಲ್ಲಿ ಸರ್ಕಾರಿ ಬಸ್ ನಿಲ್ಲಿಸುವಂತೆ ಒತ್ತಾಯಿಸಿ ಕಳೆದ ಮೂರು ತಿಂಗಳ ಹಿಂದೆಯೇ ಸಾರಿಗೆ ಡಿಪೋ ವ್ಯವಸ್ಥಾಪಕ ಹನುಮಂತರಾಯಪ್ಪನಿಗೆ ಮನವಿ ಸಲ್ಲಿಸಲಾಗಿದೆ. ಇದುವರೆವಿಗೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಶಿರಾ ಹಾಗೂ ಪಾವಗಡ ಪ್ರಮುಖ ರಸ್ತೆಯ ಬಳಿ ಮಹಿಳಾ ಕಾಲೇಜು ಬಳಿ ವೇಗವಾಗಿ ವಾಹನಗಳು ಒಡಾಡುತ್ತಿದ್ದು, ಈ ರಸ್ತೆಯಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿವೆ. ರಸ್ತೆ ಉಬ್ಬು ಹಾಕುವಂತೆ ಪ್ರಾಂಶುಪಾಲ, ವಿದ್ಯಾರ್ಥಿನಿಯರು ಮನವಿ ಪತ್ರ ಸಲ್ಲಿಸಿದ್ದರೂ ಲೋಕೋಪಯೋಗಿ ಇಲಾಖೆಯ ಎಇಇ ಅನಿಲ್ ಕುಮಾರ್ ಕ್ರಮವಹಿಸಿಲ್ಲ. ಈ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳಿಗೆ ದೂರು ಸಲ್ಲಿಸುವುದಾಗಿ ವಿದ್ಯಾರ್ಥಿನಿಯರು ಎಚ್ಚರಿಸಿದ್ದಾರೆ.
ಪ್ರಾಂಶುಪಾಲ ಒ.ಮಾರಪ್ಪ ಹಾಗೂ ಉಪನ್ಯಾಸಕ ವರ್ಗ ಭೇಟಿ ನೀಡಿ ಫೋಷಕರಿಗೆ ಸಾಂತ್ವನ ಹೇಳಿದರು.ತಾಲೂಕು ರೈತ ಸಂಘದ ಅಧ್ಯಕ್ಷ ದೊಡ್ಡಹಟ್ಟಿಯ ಪೂಜಾರಪ್ಪ, ನಲಿಗಾನಹಳ್ಳಿಯ ಮಂಜುನಾಥ್, ಕಂಪ್ಯೂಟರ್ ವಿಭಾಗದ ಗುರುಪ್ರಸಾದ್, ಅಶ್ವಿನಿ, ರಮ್ಯಾ, ಸುರೇಖಾ, ನವ್ಯ ರಾಧ, ಮೌನ, ಶಿಲ್ಪಾ ಚಾಯಾ, ಭೂಮಿಕಾ ಉಷಾ ಕಡಮಲಕುಂಟೆ ಗೋವಿಂದಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅನಿಲ್ಕುಮಾರ್, ಸುಬ್ರಮಣಿ ಜನಾರ್ದನ, ಆದರ್ಶ ಮೋಹನ್ ಮತ್ತು ನರ್ಸಿಂಗ್ ವಿದ್ಯಾರ್ಥಿ ಓಬಳಾಪುರದ ಪಿ.ಮನ್ವಿತ್ಕುಮಾರ್ ಇದ್ದರು.
ಫೋಟೊ.........23ಪಿವಿಡಿ3
ಪಾವಗಡದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಗುದ್ದಿದ ಪರಿಣಾಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗೆ ಗಂಭೀರ ಗಾಯಗೊಂಡ ಹಿನ್ನೆಲೆ ವಿದ್ಯಾರ್ಥಿನಿಯರು ತಾ.ಕಚೇರಿಗೆ ಮುತ್ತಿಗೆ, ರಸ್ತೆ ಉಬ್ಬು ಹಾಕಿಸುವಂತೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವರದರಾಜ್ಗೆ ಮನವಿ ಪತ್ರ ಸಲ್ಲಿಸಿದರು.