ಕನ್ನಡಪ್ರಭ ವಾರ್ತೆ ಕಳಸ

ಹೊರನಾಡು ಪ್ರವಾಸಕ್ಕೆ ಬಂದಿದ್ದವರ ಕಾರು ಸಂಸೆಯ ಗಣಪತಿ ದೇವಾಲಯದ ಸಮೀಪ ರಸ್ತೆಯಿಂದ 30 ಅಡಿಗಿಂತ ಕೆಳಗಿರುವ ಸೋಮವತಿ ನದಿಗೆ ಬಿದ್ದು ಪವಾಡ ಸದೃಶ ರೀತಿಯಲ್ಲಿ ದಂಪತಿ ಅಪಾಯದಿಂದ ಪಾರಾಗಿರುವ ಘಟನೆ ಕುದುರೆಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಾರ್ಕಳ, ಕಳಸ - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ದಂಪತಿ ಇದ್ದ ಕಾರು ಗಣಪತಿ ದೇವಾಲಯದ ಬಳಿ ಸೋಮವತಿ ನದಿಗೆ ಬಿದ್ದಿದೆ. ರಸ್ತೆಯಿಂದ 30 ಅಡಿಗಿಂತ ಕೆಳಗೆ ಕಾರು ಬಿದ್ದರೂ ಯಾವುದೇ ಅಪಾಯವಾಗದೇ ನೀರಿನಲ್ಲಿ ಸ್ವಲ್ಪ ದೂರ ತೇಲಿಕೊಂಡು ಹೋಗಿ ನದಿ ಮಧ್ಯೆ ಇದ್ದ ಬಂಡೆಕಲ್ಲಿಗೆ ತಾಗಿದ್ದರಿಂದ ಅಲ್ಲಿಯೇ ನಿಂತು ಹೆಚ್ಚು ಅಪಾಯ ವಾಗುವುದು ತಪ್ಪಿದೆ.

ಮಳೆಯೂ ಸ್ವಲ್ಪ ಕಡಿಮೆಯಾಗಿ ನೀರಿನ ಹರಿವು ಕಡಿಮೆಯಾಗಿದ್ದರಿಂದ ಕಾರು ತಂಬಾ ದೂರ ಹೋಗದೆ ದಂಪತಿಗೆ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಸೋಮವತಿ ನದಿಗೆ ಕಾರು ಇಳಿದಿದ್ದನ್ನು ಕಂಡ ಸ್ಥಳೀಯರು ಕೂಡಲೇ ರಕ್ಷಿಸಲು ಮುಂದಾದರು. ಕಾರನ್ನು ಮೇಲೆ ಎಳೆಯಲು ಹರಸಾಹಸ ಪಡಬೇಕಾಯಿತು. ತಡೆಗೋಡೆ ಇಲ್ಲದಿರುವುದು ಹಾಗೂ ಅಜಾಗರೂಕ ಚಾಲನೆಯೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.


ಈ ರಸ್ತೆ ಭಾಗದಲ್ಲಿ ವರ್ಷದಲ್ಲಿ 3-4 ಇಂತಹ ವಾಹನ ಅಪಘಾತ ನಡೆಯುತ್ತಿದ್ದರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ತಡೆಗೋಡೆ ಇಲ್ಲವೇ ಎಚ್ಚರಿಕೆ ಮಾಹಿತಿ ಫಲಕವನ್ನೂ ಹಾಕುವ ಗೋಜಿಗೆ ಹೋಗಿಲ್ಲ. ಈ ಪ್ರದೇಶದಲ್ಲಿ ಪ್ರವಾಸಿಗರು ಹೆಚ್ಚಾಗಿ ಪ್ರಯಾಣಿಸುತ್ತಿದ್ದು ಈ ಬಗ್ಗೆ ಕ್ರಮವಹಿಸದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ದೂರಿದ್ದಾರೆ. ಕುದುರೆ ಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.