ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಮಕ್ಕಳಿಗೆ ಸೂಕ್ತ ವೇದಿಕೆಯಾಗಿದೆ.
ಕೂಡ್ಲಿಗಿ: ಮಕ್ಕಳಲ್ಲಿ ಕಲೆ ಸೂಪ್ತವಾಗಿ ಅಡಗಿರುತ್ತದೆ. ಅವರಿಗೆ ಶಿಕ್ಷಕರು ಅವಕಾಶ ನೀಡಿ ವೇದಿಕೆ ಕಲ್ಪಿಸಿದರೆ ಆ ಮಗು ತನ್ನ ಪ್ರತಿಭೆಯನ್ನು ಲೋಕಕ್ಕೆ ಪರಿಚಯಿಸುತ್ತದೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ತಾಲೂಕಿನ ಹೊಸಹಳ್ಳಿಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಮಕ್ಕಳಿಗೆ ಸೂಕ್ತ ವೇದಿಕೆಯಾಗಿದೆ. ಈ ನೆಲದ ಸೊಗಡು, ಇಲ್ಲಿಯ ಪರಂಪರೆ ಬಿಂಬಿಸುವ ಹಾಡುಗಳು, ಕಲೆಗಳು ಹಾಗೂ ಜಾನಪದ ಕಲೆಗಳನ್ನು ಮಕ್ಕಳ ಮೂಲಕ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಿದೆ. ಆಧುನಿಕ ಭರಾಟೆಯಲ್ಲಿ ಜಾನಪದ ಕಲಾ ಸೊಗಡು ಕ್ಷೀಣಿಸುತ್ತಿರುತ್ತಿವಾಗ ಇಂತಹ ವೇದಿಕೆಗಳು ಕಲೆಗೆ ಮರುಜೀವ ನೀಡುತ್ತವೆ. ಶಾಲೆಗಳು ಧಾರ್ಮಿಕ ಕೇಂದ್ರಗಳಾಗದೆ, ವೈಜ್ಞಾನಿಕ ಮನೋಭಾವ ಬೆಳೆಸುವ ಕೇಂದ್ರಗಳಾಗಬೇಕಿದೆ. ಸಮಾಜದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ. ಅದನ್ನು ಹೋಗಲಾಡಿಸಿ ವೈಚಾರಿಕ ಸಂಗತಿಗಳನ್ನು ಮೂಡಿಸಬೇಕಿದೆ. ಮಕ್ಕಳು ನಮ್ಮಂತೆ ಆಗಬಾರದು. ಉತ್ತಮ ಪ್ರಜೆಗಳಾಗಬೇಕೆಂಬ ಉದ್ದೇಶದಿಂದ ತಾಲೂಕಿನಲ್ಲಿ 7 ಕೆಪಿಎಸ್ಸಿ ಶಾಲೆಗಳನ್ನು ತಂದಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರಯಬೇಕು. ಖಾಸಗಿ ಶಾಲೆಗಳು ಆತಂಕ ಪಡಬೇಕಾಗಿಲ್ಲ. ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಉತ್ತಮ ಶಿಕ್ಷಣದಿಂದ ಬದುಕಿನಲ್ಲಿ ಉನ್ನತಿ ಸಾಧಿಸಲೆಂಬ ಉದ್ದೇಶವಾಗಿದೆ ಎಂದರು.
ಸಹಾಯಕ ಆಯುಕ್ತ ವಿವೇಕಾನಂದ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು ಹಾಸ್ಟೆಲ್ಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಿದೆ. ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಲಾಗಿದೆ. ವಸತಿ ಶಾಲೆಗಳ ಸೀಟ್ ಬೇಡಿಕೆ ಹೆಚ್ಚಾಗಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತರಾನ್ನಾಗಿ ಮಾಡದೇ ಅವರ ಕನಸನು ಈಡೇರಿಸಿ ಎಂದು ಪೊಷಕರಿಗೆ ಕಿವಿಮಾತು ಹೇಳಿದರು.ಮೈಲೇಶ್ ಬೇವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕೂಡ್ಲಿಗಿ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗವುದು. ಸಮುದಾಯದ ಸಹಭಾಗಿತ್ವ, ಜನಪ್ರತಿನಿಧಿಗಳ ಸಹಕಾರ ಮುಖ್ಯವಾಗಿದ್ದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವ ಬಗೆಯ ಬಗ್ಗೆ ಶಿಕ್ಷಕರು ಗಮನ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದು ಶಿಕ್ಷಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಕೆ.ಎಂ. ಶಶಿಧರ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್ ವಿ.ಕೆ.ನೇತ್ರಾವತಿ, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಗ್ರಾಪಂ ಅಧ್ಯಕ್ಷ ಕೆ.ಜಿ. ಸಿದ್ದನಗೌಡ್ರು, ಉಪಾಧ್ಯಕ್ಷೆ ಲಕ್ಷ್ಮಿ, ಜಿಪಂ ಎಇಇ ಮಲ್ಲಿಕಾರ್ಜುನ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ಮುಖಂಡರಾದ ಸೂಲದಹಳ್ಳಿ ಸಿದ್ದಣ್ಣ, ಎಂ.ಗುರುಸಿದ್ದನಗೌಡ್ರು, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವೆಂಕಟೇಶ್, ಬಣವಿಕಲ್ಲು ಏರ್ರಿಸ್ವಾಮಿ, ಇಸಿಒ ನಿಂಗಪ್ಪ, ತಳವಾರ ಶರಣಪ್ಪ, ಎಳ್ನೀರು ಗಂಗಣ್ಣ, ಬಿ.ಆರ್ಸಿ ಜಗದೀಶ್, ಅಕ್ಷರ ದಾಸೋಹ ನಿರ್ದೇಶಕ ಅಂಜನೇಯ ಇದ್ದರು.