ಸಾರಾಂಶ
ಯುವತಿಯೋರ್ವಳ ಸಾವಿಗೆ ನ್ಯಾಯ ಕೇಳಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ ಪ್ರಕರಣ ದಾಖಲಿಸುವುದೆಂದರೆ ರಾಜ್ಯದಲ್ಲಿ ರಾವಣ ಆಡಳಿತವಿದೆಯೆ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಬರ್ಬರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ ಎಬಿವಿಪಿ ವಿರುದ್ಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿರುವುದಕ್ಕೆ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕಿಡಿಕಾರಿದ್ದಾರೆ.ಅನ್ಯ ಕೋಮಿನ ಜಿಹಾದಿ ಮನಸ್ಥಿತಿಯ ಮತೀಯ ವ್ಯಕ್ತಿಯಿಂದ ಹತ್ಯೆಯಾದ ಹದಿಹರೆಯದ ಹಿಂದೂ ಯುವತಿಯೋರ್ವಳ ಸಾವಿಗೆ ನ್ಯಾಯ ಕೇಳಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ ಪ್ರಕರಣ ದಾಖಲಿಸುವುದೆಂದರೆ ರಾಜ್ಯದಲ್ಲಿ ರಾವಣ ಆಡಳಿತವಿದೆಯೆ? ಎಂದು ಪ್ರಶ್ನಿಸಿದ್ದಾರೆ.ಸಿದ್ದರಾಮಯ್ಯ ಸರ್ಕಾರದಲ್ಲಿ ನ್ಯಾಯವನ್ನೇ ಕೇಳಬಾರದು ಎಂದಾದರೆ ಎಂತಹ ದಾರಿದ್ರ್ಯದ ಸ್ಥಿತಿ ನಮ್ಮ ರಾಜ್ಯಕ್ಕೆ ಬಂದಿದೆ. ಯುವತಿಯನ್ನು ಪೈಶಾಚಿಕವಾಗಿ ಚುಚ್ಚಿದ ದುಷ್ಕರ್ಮಿಯ ಮನೆಗೆ ಭದ್ರತೆ ಕೊಡುತ್ತಾರೆ. ನ್ಯಾಯ ಕೇಳಿದ ವಿದ್ಯಾರ್ಥಿ ಸಂಘಟನೆ ಮೇಲೆ ಎಫ್ಐಆರ್ ದಾಖಲಿಸಿತ್ತಾರೆ ಎಂದಾದರೆ ಈ ಸರ್ಕಾರದಲ್ಲಿ ಹಿಂದೂಗಳಿಗೆ ಭದ್ರತೆ, ರಕ್ಷಣೆ ಎಷ್ಟರ ಮಟ್ಟಿಗೆ ಕುಸಿದಿದೆ ಎನ್ನುವುದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.ಈ ರಾಜ್ಯದಲ್ಲಿ ಯುವ ಸಮೂಹದ ಜೀವಕ್ಕೆ ನಿಮ್ಮ ಸರ್ಕಾರದಲ್ಲಿ ಬೆಲೆ ಇಲ್ಲ. ರಕ್ಷಣೆ ಕೊಡಬೇಕಾದ ಪೊಲೀಸರೇ ಕಾನೂನು ಕ್ರಮದ ಹೆಸರಲ್ಲಿ ಭಕ್ಷಕರಾಗುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಆರೋಪಿಸಿದರು.