ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿದ.ಕ ಜಿಲ್ಲೆಯಲ್ಲಿ ನಡೆದ ಅನಪೇಕ್ಷಿತ ಘಟನೆಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಂಘಟನೆಗಳ ಪ್ರಮುಖರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವುದು, ಪೋಟೋ ತೆಗೆಯುವುದು ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿ ಪೊಲೀಸ್ ಕ್ರಮವನ್ನು ವಿರೋಧಿಸಿ ಭಾನುವಾರ ರಾತ್ರಿ ಕಡಬ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದ ಕಡಬದ ಹಿಂದೂ ಸಂಘಟನೆಯ 15 ಮಂದಿ ಕಾರ್ಯಕರ್ತರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಸೂಚನೆಯಂತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಘಟನೆಗಳ ಪ್ರಮುಖರ ಮನೆಗಳಿಗೆ ರಾತ್ರಿ ವೇಳೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾರಂಭಿಸಿದ್ದರು. ಅದರಿಂದ ಆಕ್ರೋಶಕೊಂಡಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು, ‘ಪೊಲೀಸರು ಮನೆಗೆ ಬರುವುದು ಬೇಡ. ಅದರಿಂದ ನಮ್ಮ ಮನೆಯವರಿಗೂ ತೊಂದರೆಯಾಗುತ್ತಿದೆ. ಪೊಲೀಸರು ರಾತ್ರಿ ವೇಳೆ ಮನೆಗಳಿಗೆ ಬಂದು ವಿಚಾರಣೆ ನಡೆಸಿ ಫೋಟೋ ತೆಗೆದುಕೊಂಡು ಹೋಗಿ ನಮ್ಮನ್ನು ರೌಡಿಗಳಂತೆ ಬಿಂಬಿಸುತ್ತಿದ್ದಾರೆ’ ಎಂದು ಆರೋಪಿಸಿ ಠಾಣೆಯ ಮುಂದೆ ಜಮಾಯಿಸಿ ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು. ಪೊಲೀಸರು ಮನೆಗೆ ಬರಬೇಕಾಗಿಲ್ಲ. ಅದರ ಬದಲು ನಾವೇ ಠಾಣೆಗೆ ಬಂದಿದ್ದೇವೆ. ಪ್ರತಿ ದಿನ ಮನೆಗೆ ಬಂದು ತೊಂದರೆ ನೀಡಬೇಡಿ ಎಂದು ಆಗ್ರಹಿಸಿದ್ದರು. ಠಾಣೆಯ ಮುಂದೆ ಜಮಾಯಿಸಿದ್ದವರ ಜೊತೆ ಮಾತುಕತೆ ನಡೆಸಿದ ಕಡಬ ಎಸ್ಐ ಅಭಿನಂದನ್ ಎಂ.ಎಸ್ ಅವರು ಪೊಲೀಸ್ ಉನ್ನತಧಿಕಾರಿಗಳ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಏನೇ ಇದ್ದರೂ ನಾಳೆ ಹಗಲು ಬಂದು ಮಾಹಿತಿ ಪಡೆದುಕೊಳ್ಳಿ. ರಾತ್ರಿ ವೇಳೆ ಈ ರೀತಿ ಠಾಣೆಯ ಮುಂದೆ ಸೇರುವುದು ಸರಿಯಲ್ಲ ಎಂದು ಸಮಾಧಾನಿಸಿ ಅವರನ್ನು ಕಳುಹಿಸಿದ್ದರು.ಪ್ರಕರಣ ದಾಖಲು: ಬಳಿಕ ನಡೆದ ಬೆಳವಣಿಗೆಯಲ್ಲಿ ಘಟನೆಗೆ ಸಂಬಂಧಿಸಿ ಕಡಬ ಠಾಣಾ ವ್ಯಾಪ್ತಿಯ ನಿವಾಸಿಗಳಾದ ಪ್ರಮೋದ್ ರೈ, ತಿಲಕ್ ನಂದುಗುರಿ, ಮೋಹನ, ಚಂದ್ರಶೇಖರ, ಮಹೇಶ್, ಡೀಕಯ್ಯ, ಸುಜಿತ್, ಶರತ್, ಶ್ರೇಯಸ್, ಉಮೇಶ್, ರಾಧಾಕೃಷ್ಣ ಕೆ., ಜಯಂತ್ ಮತ್ತು ಇತರ ಮೂವರು ಯಾವುದೇ ಪೂರ್ವಾನುಮತಿ ಪಡೆಯದೆ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.