ಜಾತಿ ನಿಂದನೆ, ಹಲ್ಲೆ; ಯರೇಹಂಚಿನಾಳದ 13 ಜನರ ಮೇಲೆ ದೂರು

| Published : Jun 29 2025, 01:32 AM IST

ಸಾರಾಂಶ

ಮಹಿಳೆಯನ್ನು ಬಿಡಿಸಲು ಬಂದ ಅವಳ ಮೈದುನ ಹನುಮಂತ ಹಾಗೂ ಮಹಿಳೆಯ ಮಾವನ ಮಗ ರಮೇಶ ಅವರಿಗೆ ಗ್ರಾಮದ ಸಿದ್ದರೆಡ್ಡಿ ಯಲೇಜಗುಳೇದ ಹಾಗೂ ಬಸವರಾಜ ಹಣಸಿ ಅವರು ಒದ್ದುದಲ್ಲದೇ ಜಾತಿ ನಿಂದನೆ ಮಾಡಿ ಬಡಿದಿದ್ದಾರೆ

ಕುಕನೂರು: ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ, ಅವಾಚ್ಯ, ಅಶ್ಲೀಲ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ 13 ಜನರ ಮೇಲೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಯರೇಹಂಚಿನಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸರ್ಕಸ್ ನಡೆಯುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ ಗ್ರಾಮದ ಶರಣಪ್ಪ ಶಿವಪ್ಪ ಯಲೇಜಗುಳೇದ, ಅಲ್ಲೇ ನಿಂತಿದ್ದ ಹಿಂದೂ ಮಾದಿಗ ಜಾತಿಯ ಲಲಿತಮ್ಮ ಶರಣಪ್ಪ ಮಟ್ಟನವರ ಎಂಬ ಮಹಿಳೆ ಮೇಲೆ ಬಿದ್ದಿದ್ದು, ನೀವು ನನ್ನನ್ನು ಮುಟ್ಟುತ್ತೀರೇನು, ನನ್ನ ಮೇಮೇಲೆ ಬರುತ್ತೀರೇನು ಎಂದು ಬೆದರಿಕೆ ಹಾಕಿ ಅವಳ ಕುತ್ತಿಗೆ ಹಿಡಿದು ದೂಡಿದ್ದಾರೆ

ಮಹಿಳೆಯನ್ನು ಬಿಡಿಸಲು ಬಂದ ಅವಳ ಮೈದುನ ಹನುಮಂತ ಹಾಗೂ ಮಹಿಳೆಯ ಮಾವನ ಮಗ ರಮೇಶ ಅವರಿಗೆ ಗ್ರಾಮದ ಸಿದ್ದರೆಡ್ಡಿ ಯಲೇಜಗುಳೇದ ಹಾಗೂ ಬಸವರಾಜ ಹಣಸಿ ಅವರು ಒದ್ದುದಲ್ಲದೇ ಜಾತಿ ನಿಂದನೆ ಮಾಡಿ ಬಡಿದಿದ್ದಾರೆ. ಅಲ್ಲದೇ ಮಹಿಳೆಯ ಅತ್ತೆ ಹನುಮವ್ವ, ಗಂಡ ಶರಣಪ್ಪ ಹಾಗೂ ರಾಕೇಶ, ಪ್ರಕಾಶ ಎಂಬುವವರ ಮೇಲೆ ಈರಣ್ಣ ಹನಸಿ, ಹನುಮಂತಪ್ಪ ಹನಸಿ, ಈರಯ್ಯ ಹಿರೇಮಠ ಅವರು ಮನೆಯಲ್ಲಿ ಕೂಡಿ ಹಾಕಿ ಬಡಿದಿದ್ದಾರೆ.

ಮನೆಯ ಹೊರಗಡ್ಡೆ ಇದ್ದ ಮಹಿಳೆಯ ಮಗಳು ಅಕ್ಷತಾ ಹಾಗೂ ಪ್ರೇಮ ಅವರಿಗೆ ಸಹ ಕೆಲವರು ಎದೆಗೆ ಬಡಿದಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ ನೀವು ಹೊರಗೆ ಬಂದಲ್ಲಿ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಊರಿಂದ ಹೊರಗೆ ಹಾಕುತ್ತೇವೆ, ರೇಪ್‌ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆಂದು ಪ್ರಕರಣ ದಾಖಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮದ ಶರಣಪ್ಪ ಶಿವಪ್ಪ ಯಲೇಜಗುಳೇದ, ಸಿದ್ದರೆಡ್ಡಿ ಯಲೇಜಗುಳೇದ, ಬಸವರಾಜ ಹಣಸಿ, ಈರಣ್ಣ ಹಣಸಿ, ಹನುಮಂತಪ್ಪ ಹಣಸಿ, ಈರಯ್ಯ ಹಿರೇಮಠ, ನಿಂಗಪ್ಪ ಹಣಸಿ, ಆನಂದ ಹಣಸಿ, ಯಂಕಪ್ಪ ಯಲೇಜಗುಳೇದ, ಸುರೇಶ ಮೇಟಿ, ಸಂಕೇತ ಯಲೇಜಗುಳೇದ, ದೇವಪ್ಪ ಹಣಸಿ, ವಸಂತ ಎಂಬುವವರ ಮೇಲೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.