ಗ್ರಾಮೀಣ ಪ್ರದೇಶದ ರೈತರು ಈ ಹಿಂದೆ ಜಮೀನುಗಳಲ್ಲಿ ಕೃಷಿ ಕೆಲಸ ಕಾರ್ಯಗಳಿಗೆ ಹಳ್ಳಿಕಾರ್ ತಳಿಯ ರಾಸುಗಳನ್ನೇ ಬಳಸುತ್ತಿದ್ದರು. ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳುತ್ತಿರುವ ರೈತರು ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳನ್ನೇ ಹೆಚ್ಚು ಬಳಸುತ್ತಿರುವುದರಿಂದ ನಾಟಿ ತಳಿಯ ಹಸು, ಎತ್ತುಗಳು ಕಡಿಮೆಯಾಗುತ್ತಿವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ದನಗಳ ಜಾತ್ರೆಯು ರೈತರು ಹಳ್ಳಿಕಾರ್ ನಾಟಿ ತಳಿಯ ಹಸುಗಳು ಮತ್ತು ಎತ್ತುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಸೇರುವ ಸಾಂಪ್ರದಾಯಿಕ ಸಭೆ ಇದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಸೋಮನಳಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಸೋಮನಳಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ರಾಸುಗಳೊಂದಿಗೆ ಪಾಲ್ಗೊಂಡಿರುವ ರೈತರಿಗೆ ಉಚಿತವಾಗಿ ಹಾಲಿನ ಕ್ಯಾನ್‌ಗಳನ್ನು ವಿತರಿಸಿ ಮಾತನಾಡಿದರು.

ಮಕರ ಸಂಕ್ರಾಂತಿ ನಂತರದಲ್ಲಿ ನಡೆಯುವ ದೇವರ ಜಾತ್ರೆ ಹಾಗೂ ರಥೋತ್ಸವದ ಪ್ರಯುಕ್ತ ಆಯೋಜಿಸುವ ದನಗಳ ಜಾತ್ರೆಯು ಕೇವಲ ವ್ಯಾಪಾರವಲ್ಲ. ಹಳ್ಳಿಗಳ ನಡುವಿನ ರೈತರ ಬಾಂಧವ್ಯವನ್ನು ಹೆಚ್ಚಿಸುವ ಮತ್ತು ಕೃಷಿ ಸಂಸ್ಕೃತಿಯನ್ನು ಎತ್ತಿಹಿಡಿಯುವ ಹಬ್ಬವಾಗಿದೆ ಎಂದರು.

ಗ್ರಾಮೀಣ ಪ್ರದೇಶದ ರೈತರು ಈ ಹಿಂದೆ ಜಮೀನುಗಳಲ್ಲಿ ಕೃಷಿ ಕೆಲಸ ಕಾರ್ಯಗಳಿಗೆ ಹಳ್ಳಿಕಾರ್ ತಳಿಯ ರಾಸುಗಳನ್ನೇ ಬಳಸುತ್ತಿದ್ದರು. ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳುತ್ತಿರುವ ರೈತರು ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳನ್ನೇ ಹೆಚ್ಚು ಬಳಸುತ್ತಿರುವುದರಿಂದ ನಾಟಿ ತಳಿಯ ಹಸು, ಎತ್ತುಗಳು ಕಡಿಮೆಯಾಗುತ್ತಿವೆ ಎಂದರು.

ನಮ್ಮ ಪೂರ್ವಿಕರ ಮೂಲ ಸಂಸ್ಕೃತಿ, ಬೇಸಾಯ ಕ್ರಮಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಪರಿಚಯಿಸಲು ರೈತರ ಅವಿಭಾಜ್ಯ ಅಂಗವಾಗಿರುವ ಹಳ್ಳಿಕಾರ್ ನಾಟಿ ತಳಿಯ ಹಸು ಎತ್ತುಗಳನ್ನು ಪೋಷಣೆ ಮಾಡಬೇಕು. ದನಗಳ ಜಾತ್ರೆಯಲ್ಲಿ ಪಾಲ್ಗೊಂಡಿರುವ ಎಲ್ಲ ರೈತರು ಜಾತ್ರೆ ಮುಗಿದ ನಂತರ ರಾಸುಗಳೊಂದಿಗೆ ಸುರಕ್ಷಿತವಾಗಿ ತಮ್ಮ ಊರುಗಳಿಗೆ ತೆರಳಬೇಕು ಎಂದು ಹೇಳಿದರು.

ಈ ವೇಳೆ ಸಮಾಜ ಸೇವಕ ಸುನಿಲ್‌ ಲಕ್ಷ್ಮೀಕಾಂತ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಣ್ಯ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಹೊಣಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು, ದೇವಸ್ಥಾನದ ಟ್ರಸ್ಟಿ ಬಲರಾಮೇಗೌಡ, ಮುಖಂಡರಾದ ಕುಮಾರ್, ಜಯರಾಮು, ಅಶೋಕ ಸೇರಿದಂತೆ ಹಲವರು ಇದ್ದರು.