ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಭಾರತದ ಕಾಡುಗಳಲ್ಲಿ ಕಾಳ್ಗಿಚ್ಚಿಗೆ ಮಾನವನೇ ಕಾರಣ ಎಂದು ವಲಯ ಅರಣ್ಯ ಅಧಿಕಾರಿ ಕೆ..ಎನ್. ಹೇಮಂತ್ ತಿಳಿಸಿದರು.ತಾಲೂಕಿನ ಅಗ್ಗುಂದ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಳ್ಗಿಚ್ಚಿ ನಿರ್ಗಮದ ಹಾಗೂ ಮಾನವನ ಶತ್ರು ಕಲಾ ಜಾಥಾವನ್ನು ಉದ್ಘಾಟಿಸಿ ಮಾತನಾಡಿ, ನಿಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಿರೇಕಲ್ಲು ಗುಡ್ಡ, ರಾಮೇನಹಳ್ಳಿ,ಬಿಸ್ಲೆ ಕಲ್ಲು, ದೇಶಾಣಿ ಬೆಟ್ಟದಪುರ,ಜಜೂರು, ಹಾಗೂ ಡಿ.ಎಂ. ಕುರ್ಕೆ ಎಂಬ ಮೀಸಲು ಅರಣ್ಯ ಪ್ರದೇಶಗಳಿದ್ದು ಈ ಎಲ್ಲಾ ಅರಣ್ಯಗಳಲ್ಲಿ ಅತ್ಯಮೂಲ್ಯವಾದ ಔಷಧೀಯ ಸಸ್ಯಗಳು, ಬೆಲೆಬಾಳುವ ಮರ ಗಿಡಗಳು ಮತ್ತು ತಾಲೂಕಿನಲ್ಲಿ ವ್ಯಾಪ್ತಿಯಲ್ಲಿ ಒಟ್ಟು 35,000 ಎಕರೆಗಿಂತ ಹೆಚ್ಚು ಅರಣ್ಯ ಪ್ರದೇಶ ಇರುವುದು ನಮ್ಮ ನಿಮ್ಮೆಲ್ಲರ ಭಾಗ್ಯ. ಇವು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪ್ರದೇಶಗಳಾಗಿರುತ್ತವೆ. ಅರಣ್ಯದಲ್ಲಿ ಚಿರತೆ, ಕರಡಿ, ಜಿಂಕೆ, ಕಡವಿ, ಇತರೆ ವನ್ಯ ಪ್ರಾಣಿಗಳ ವಾಸಸ್ಥಾನವಾಗಿರುತ್ತದೆ. ಸದ್ಯದಲ್ಲಿ ಬೇಸಿಗೆಕಾಲ ಇರುವುದರಿಂದ ಇಂತಹ ಅಮೂಲ್ಯವಾದ ಎಲ್ಲ ಮೀಸಲು ಅರಣ್ಯಗಳನ್ನು ಬೆಂಕಿಯಿಂದ ರಕ್ಷಣೆ ಮಾಡುವುದು ಮತ್ತು ಬೆಂಕಿ ಬೀಳದಂತೆ ಎಚ್ಚರವಹಿಸುವುದು ನಿಮ್ಮ ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿರುತ್ತದೆ ಎಂದರು.
ನಂತರ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕಲಂದರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗಿಡಮರಗಳ ಮತ್ತು ಪ್ರಾಣಿ ಪಕ್ಷಿಗಳ ಮರಣವಾಗುತ್ತಿದೆ. ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ ಮತ್ತು ಪರಿಸರ ಮಾಲಿನ್ಯವಾಗುತ್ತಿದೆ. ನೀರಿನ ತೊಂದರೆ ಉಂಟಾಗುತ್ತದೆ. ಕಾಡಿನಲ್ಲಿ ಬೆಂಕಿಯನ್ನು ಕಂಡರೆ ಸಮೀಪದ ಅರಣ್ಯ ಇಲಾಖೆಗೆ ತಿಳಿಸಬೇಕು. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಕರಿಸಬೇಕು. ಕಾಡಿನೊಳಗಿನ ದಾರಿಯಲ್ಲಿ ಬೀಡಿ, ಸಿಗರೇಟ್ ಸೇದಿ ಎಸೆಯಬಾರದು ಎಂದು ಸಲಹೆ ನೀಡಿದರು.ಸಾರ್ವಜನಿಕರಿಗೆ ಗ್ರಾಮದಲ್ಲಿ ಹೊಯ್ಸಳ ಜನಪದ ಕಲಾತಂಡ ಕಲಾಜಾಥಾದಲ್ಲಿ ಜನರಿಗೆ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಪುನೀತ್, ದಿಲೀಪ್, ಕೃಷ್ಣಮೂರ್ತಿ, ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
l