ಸಾರಾಂಶ
ವಿರಾಜಪೇಟೆ ಕಾವೇರಿ ವಿದ್ಯಾ ಸಂಸ್ಥೆಗಳು, ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ‘ಕಾವೇರಿಯನ್ಸ್ ಕಾರ್ನಿವಲ್ 2024’ ಕಾರ್ಯಕ್ರಮ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ರೈತ ಮತ್ತು ಸೈನಿಕ ನಾಣ್ಯದ ಎರಡು ಮುಖಗಳು ಇದ್ದಂತೆ. ರೈತರಿನಿಲ್ಲದೆ ಬದುಕು ಅಸಾಧ್ಯವಾದರೆ ಸೈನಿಕನಿಲ್ಲದೆ ದೇಶದ ಭದ್ರತೆ ಅಸಾಧ್ಯ. ಯುವ ಸಮುದಾಯ ಸೇನೆ ಸೇರುವ ಮೂಲ ದೇಶಭಕ್ತಿ ಅಭಿವ್ಯಕ್ತಿಗೊಳಿಸಿ ಎಂದು ಜೈ ಭಾರತ್ ತರಬೇತಿ ಕೇಂದ್ರ ಮತ್ತು ಆರ್ಮಿ ಆಕಾಡೆಮಿಯ ಸಂಸ್ಥಾಪಕ ಕುಟ್ಟಂಡ ಲವ ಪೊನ್ನಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ವಿರಾಜಪೇಟೆ ಕಾವೇರಿ ವಿದ್ಯಾ ಸಂಸ್ಥೆಗಳು, ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ ‘ಕಾವೇರಿಯನ್ಸ್ ಕಾರ್ನಿವಲ್ 2024’ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಐಷಾರಮಿ ಜೀವನದ ಹಿಂದೆ ಬೀಳದೆ, ಜೀವನ ಮೌಲ್ಯಗಳು, ಶಿಸ್ತು, ಸಾಮಾಜಿಕ ಕಳಕಳಿ, ಶಿಸ್ತುಬದ್ಧ ಜೀವನದೊಂದಿಗೆ ರಾಷ್ಟ್ರಭಕ್ತಿಯ ಚಿಂತನೆ ಮಾಡಬೇಕು. ಸೇನೆಯಲ್ಲಿ ವಿಫುಲ ಅವಕಾಶಗಳಿವೆ ಎಂದರು.ವಿರಾಜಪೇಟೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ನರು ನರೇಂದ್ರ ಮಾತನಾಡಿ, ಮೊಬೈಲ್ ವ್ಯಾಮೋಹ ತ್ಯಜಿಸಿ, ದೈಹಿಕ, ಮಾನಸಿಕವಾಗಿ ಸದೃಢರಾಗುವ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಸಾಲ್ಡಾನಾ ಅಧ್ಯಕ್ಷತೆ ವಹಿಸಿದ್ದರು.ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಹಾರ ಮೇಳ, ಗುಂಪು ಗಾಯನ (ಜನಪದ) ಸ್ಪರ್ಧೆ, ಗುಂಪು ನೃತ್ಯ ಸ್ಪರ್ಧೆ, ಮಾದರಿ ತಯಾರಿ, 5 ಸೈಡ್ ಹಾಕಿ ಮತ್ತು ಹಗ್ಗಜಗ್ಗಾಟ, ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಗಾಯನ ಸ್ಪರ್ಧೆಯಲ್ಲಿ 8 ತಂಡ, ನೃತ್ಯ ಸ್ಪರ್ಧೆಯಲ್ಲಿ 8 ತಂಡ, ಮಾದರಿ ತಯಾರಿಸುವ ಸ್ಪರ್ಧೆಯಲ್ಲಿ 8 ತಂಡ, 5 ಸೈಡ್ ಹಾಕಿಯಲ್ಲಿ 6 ತಂಡಗಳು ಮತ್ತು ಹಗ್ಗಜಗ್ಗಾಟ ಬಾಲಕಿಯರ ವಿಭಾಗದಲ್ಲಿ 10 ತಂಡ, ಬಾಲಕರ ವಿಭಾಗದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು.ಆಹಾರ ಮೇಳದಲ್ಲಿ ಒಟ್ಟು ೨೨ ಮಳಿಗೆಗಳಲ್ಲಿ ವಿವಿಧ ಬಗೆಯ ಆಹಾರ ಸ್ಪರ್ಧೆಗಳ ವಿಜೇತ ತಂಡಗಳಿಗೆ ನಗದು ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು. ವಿರಾಜಪೇಟೆ ಕಾವೇರಿ ಆಂಗ್ಲ ಮಾಧ್ಯಮ ಶಾಲೆ ತಂಡ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಮಗ್ರ ಪ್ರಶಸ್ತಿ ಪಡೆಯಿತು.
ಕಾರ್ಯಕ್ರಮ ಸಂಚಾಲಕಿ ದಮಯಂತಿ ಎಂ.ಪಿ., ಉಪನ್ಯಾಸಕ ಡಯಾನ ಸೋಮಯ್ಯ, ಗಾಯತ್ರಿ ಕೆ.ಪಿ. ಮತ್ತು ದೇಚಮ್ಮ ಎಂ.ಬಿ. ಇದ್ದರು.ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಸ್ವಾಗತಿಸಿದರು. ಉಪನ್ಯಾಸಕರಾದ ಅನುಪಮ, ಡಯಾನ ಸೋಮಯ್ಯ ನಿರೂಪಿಸಿದರು, ದಮಯಂತಿ ಎಂ.ಪಿ. ವಂದಿಸಿದರು.