ಸಾರಾಂಶ
ಸರ್ಕಾರಿ ಕಚೇರಿಯಿಂದ ಒಟ್ಟು ₹35 ಲಕ್ಷ ವಿದ್ಯುತ್ ಬಿಲ್ ತುಂಬುವುದು ಬಾಕಿ ಇದೆ. ಅದರಲ್ಲಿ ಸಬ್ ರಿಜಿಸ್ಟರ್ ಕಚೇರಿಯದೆ ₹3 ಲಕ್ಷ ಹಣ ತುಂಬುವುದು ಬಾಕಿ ಇದೆ.
ಹೊನ್ನಾವರ: ಎಸ್ಎಸ್ಎಲ್ಸಿ ಪರೀಕ್ಷೆ ಸಿಸಿ ಕ್ಯಾಮೆರಾದ ಕಣ್ಗಾವಲಿನಲ್ಲಿ ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಉಂಟಾಗುವ ಭಯದ ವಾತಾವರಣ ಹೋಗಲಾಡಿಸಲು ಅರ್ಧವಾರ್ಷಿಕ ಪರೀಕ್ಷೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಬಿಇಒ ಜಿ.ಎಸ್. ನಾಯ್ಕ ತಿಳಿಸಿದರು.
ತಾಪಂ ಸಭಾಭವನದಲ್ಲಿ ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿ ವಿನೋದ್ ಅಣ್ವೇಕರ್ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ 26 ಶಾಲೆಗೆ 31 ವಿವೇಕ ಕೊಠಡಿ ಮಂಜೂರಾಗಿದೆ ಎಂದರು.ಹೆಸ್ಕಾಂ ಇಲಾಖಾ ಅಧಿಕಾರಿ ಶಂಕರ ಗೌಡ ಮಾತನಾಡಿ, ಸರ್ಕಾರಿ ಕಚೇರಿಯಿಂದ ಒಟ್ಟು ₹35 ಲಕ್ಷ ವಿದ್ಯುತ್ ಬಿಲ್ ತುಂಬುವುದು ಬಾಕಿ ಇದೆ. ಅದರಲ್ಲಿ ಸಬ್ ರಿಜಿಸ್ಟರ್ ಕಚೇರಿಯದೆ ₹3 ಲಕ್ಷ ಹಣ ತುಂಬುವುದು ಬಾಕಿ ಇದೆ ಎಂದರು.ಸಮಾಜಕಲ್ಯಾಣ ಹಾಗೂ ಹಿಂದೂಳಿದ, ಅಲ್ಪಸಂಖ್ಯಾತ ಇಲಾಖೆ ಸೇರಿ ಒಂದೇ ಮೀಟರ್ ಬೋರ್ಡ್ ಇದ್ದುದರಿಂದ ಬಿಲ್ ತುಂಬುವ ವಿಚಾರದಲ್ಲಿ ಇಲಾಖೆಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಬಾಕಿ ಇರುವ ವಿಷಯ ಚರ್ಚೆ ವೇಳೆ ಹೊರಬಂತು.
ಸಮಾಜ ಕಲ್ಯಾಣ ಇಲಾಖೆಯವರು ಎಸಿ ಬಳಸುವುದರಿಂದ ಬಿಲ್ ಹೆಚ್ಚು ಬಂದಿದೆ. ನಮ್ಮ ಇಲಾಖೆಯದು ಕಡಿಮೆ ಬಿಲ್ ಇರುತ್ತದೆ ಎಂದು ಹಿಂದುಳಿದ ವರ್ಗ ಇಲಾಖೆಯ ರಾಜು ನಾಯ್ಕ ತಿಳಿಸಿದ್ದು, ಇದಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸುಮಂಗಲ ಭಟ್ ಉತ್ತರಿಸಿ ಪ್ರತಿ ಬಾರಿ ನಾವೇ ಬಿಲ್ ತುಂಬುವಂತಾಗಿದೆ ಎಂದರು.ಮೂರು ಇಲಾಖೆಗೆ ಪ್ರತ್ಯೇಕ ಮೀಟರ್ ಬೋರ್ಡ್ ನೀಡಿ ಎಂದು ಆಡಳಿತಾಧಿಕಾರಿ ವಿನೋದ್ ಅಣ್ವೇಕರ್ ಹೆಸ್ಕಾಂನವರಿಗೆ ಸೂಚಿಸಿದರು.
ಕರ್ಕಿ ತೊಪ್ಪಲಕೇರಿಯಲ್ಲಿ ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು 2017ರಿಂದ ಮನವಿ ನೀಡುತ್ತಾ ಬಂದಿದ್ದಾರೆ. ನಾವು ಪ್ರಸ್ತಾವನೆ ಕಳಿಸಿದ್ದೇವೆ ಎಂದರು.ಕಟ್ಟಡ ಕಾರ್ಮಿಕ ಇಲಾಖೆ ಚರ್ಚೆಯಲ್ಲಿ ಅಸಂಘಟಿತ ವಲಯದವರನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಎಸ್ಎಸ್ಪಿ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ಇಲಾಖೆಯ ಅಧಿಕಾರಿ ಗುರುಪ್ರಸಾದ್ ತಿಳಿಸಿದರು.ಈ ಸಂದರ್ಭದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.