ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ಹೆಡೆತಲೆ ಗ್ರಾಮದಲ್ಲಿ ಟಿಎಸ್ಪಿ ಯೋಜನೆಯಲ್ಲಿ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ನಂತರ ಅವರು ಮಾತನಾಡಿ, ತಾಲೂಕಿನ ಹೆಡತಲೆ ಗ್ರಾಮಕ್ಕೆ 2023 ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ಷೇತ್ರಕ್ಕೆ 25 ಕೋಟಿ ಅನುದಾನ ಬಂದಿತ್ತು, ಆ ಅನುದಾನದಲ್ಲಿ ಸುಮಾರು 50 ಲಕ್ಷಗಳನ್ನು ಹೆಡತಲೆ ಗ್ರಾಮದ ಸಾಮಾನ್ಯ ವರ್ಗದ ಬೀದಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗಿದೆ, ಅಲ್ಲದೆ 25 ಲಕ್ಷ ವೆಚ್ಚದಲ್ಲಿ ಭಂಗಿ ಮಾರಮ್ಮ ದೇವಾಲಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಪ್ರಸ್ತುತ ಟಿಎಸ್ಪಿ ಯೋಜನೆಯಡಿ ಕ್ಷೇತ್ರಕ್ಕೆ ಒಂದು ಕೋಟಿ ಅನುದಾನ ಬಂದಿದೆ, ಈ ಅನುದಾನದಲ್ಲಿ ಹೆಡತಲೆ ಗ್ರಾಮಕ್ಕೆ 50 ಲಕ್ಷ ರೂಗಳನ್ನು ನಿಯೋಜಿಸಿ ಪರಿಶಿಷ್ಟ ವರ್ಗದ ಬೀದಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಜೊತೆಗೆ ಸುಮಾರು 20 ಲಕ್ಷ ವೆಚ್ಚದಲ್ಲಿ ಅಂಗನವಾಡಿ ನಿರ್ಮಿಸಿ ಉದ್ಘಾಟನೆಯನ್ನು ನೆರವೇರಿಸಲಾಗಿದೆ ಒಟ್ಟಾರೆಯಾಗಿ ಹೆಡತಲೆ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ಒಂದು ಕೋಟಿ 25 ಲಕ್ಷ ವೆಚ್ಚದ ಕಾಮಗಾರಿಯನ್ನು ನಿರ್ವಹಿಸಲಾಗಿದೆ, ಇನ್ನು ಉಪ್ಪಾರರ ಬೀದಿ, ಮತ್ತು ಮುಸ್ಲಿಂ ಬೀದಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಬಾಕಿ ಉಳಿಯಲಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನಿಯೋಜಿಸಿ ಗ್ರಾಮದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ತಾಲೂಕಿನ ಹೆಡತಲೆ ಗ್ರಾಮದಲ್ಲಿ ನರೇಗಾ ಅನುದಾನದಲ್ಲಿ 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು. ಅಲ್ಲದೆ ತಾಲೂಕಿನ ಕಸುವಿನಹಳ್ಳಿ ಗ್ರಾಮದ ನೂತನ ಪಿಯುಸಿ ಕಾಲೇಜಿಗೆ ಕಾರ್ಖಾನೆಯ ಸಿಎಸ್ಆರ್ ನಿಧಿಯಿಂದ ಕಂಪ್ಯೂಟರ್ ಉಪಕರಣಗಳನ್ನು ವಿತರಣೆ ಮಾಡಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಮಹೇಶ್, ಎಸ್ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ದೊರಸ್ವಾಮಿ ನಾಯಕ, ಕಾರ್ಮಿಕ ವಿಭಾಗದ ಅಧ್ಯಕ್ಷ ರಾಜು, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಯ್ಯ, ಮುಖಂಡರಾದ ಮಾದಪ್ಪ, ರಾಜೇಶ್, ಶಿವಕುಮಾರ್, ಆನಂದ, ನಾರಾಯಣ, ಮಹದೇವಯ್ಯ, ತಗಡೂರು ನಾಯಕ, ಗೋಪಾಲಕೃಷ್ಣ, ನಾಯಕರ ಸಂಘದ ತಾಲೂಕು ಅಧ್ಯಕ್ಷ ನಾಗರಾಜು ಇದ್ದರು.