ಸಾರಾಂಶ
ಅಭಿವೃದ್ಧಿ ಕಾರ್ಯ । ಕಚೇರಿ ಸಿಬ್ಬಂದಿಯೇ ಖರ್ಚು ಮಾಡಿ ಕಟ್ಟಡ ನವೀಕರಣ । ಶಿಶು ಅಭಿವೃದ್ಧಿ ಅಧಿಕಾರಿ ಚರಣ್ ರಾಜ್ ಕಾಳಜಿಗೆ ಶ್ಲಾಘನೆ
ಕನ್ನಡಪ್ರಭ ವಾರ್ತೆ ತರೀಕೆರೆಸಮರ್ಪಕ ನಿರ್ವಹಣೆ ಇಲ್ಲದೆ ಹತ್ತಾರು ವರ್ಷಗಳಿಂದ ನಿರುಪಯುಕ್ತವಾಗಿದ್ದ ತರೀಕೆರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚರಣ್ ರಾಜ್ ಕಾಳಜಿಯಿಂದ ಜೀವಕಳೆಯೇ ಬಂದಿದೆ.
ವಿಶೇಷವೆಂದರೆ ಈ ಸ್ತ್ರೀಶಕ್ತಿ ಭವನವನ್ನು ನವೀಕರಣಗೊಂಳಿಸಿರುವುದು ಸ್ವಂತ ಹಣ ಹಾಗೂ ದಾನಿಗಳ ನೆರವಿನಿಂದ ಹಾಗಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಚೇರಿ ಸಿಬ್ಬಂದಿ ಸಹ ಈ ಕಾರ್ಯಕ್ಕೆ ಆರ್ಥಿಕ ನೆರವು ನೀಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.ಸುಮಾರು 13 ವರ್ಷಗಳ ಹಿಂದೆ ಪಟ್ಟಣದಲ್ಲಿ ನಿರ್ಮಾಣವಾದ ಈ ಕಟ್ಟಡ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ, ಹೇರಳವಾಗಿ ಗಿಡಗಳು ಬೆಳೆದು ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿತ್ತು. ಒಂದು ಕಟ್ಟಡ ವ್ಯರ್ಥವಾಗುತ್ತಿರುವುದನ್ನು ಗಮನಿಸಿದ ಸಿಡಿಪಿಒ ಚರಣ್ ರಾಜ್, ಕಚೇರಿ ಸಿಬ್ಬಂದಿ ಸಹಯೋಗದಲ್ಲಿ ಕಟ್ಟಡದ ಸ್ವಚ್ಛತೆ ಮತ್ತು ಸುತ್ತಮುತ್ತ ಬೆಳೆದಿದ್ದ ಗಿಡಗಳನ್ನೆಲ್ಲಾ ಪುರಸಭೆ ಸಹಾಯದಿಂದ ತೆರವುಗೊಳಿಸಿ ಇಡೀ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿ ಬಳಸಲು ಯೋಗ್ಯವಾಗಿಸಲಾಗಿದೆ.
ಕಟ್ಟಡಕ್ಕೆಅಗತ್ಯವಾದ ವಿದ್ಯುತ್, ಕುಡಿಯುವ ನೀರು ಸೌಲಭ್ಯ, ಫ್ಯಾನ್ಗಳನ್ನು ಅಳವಡಿಸಿ, ಶೌಚಾಲಯಕ್ಕೆ ಗಾಳಿ ಬೆಳಕು ವ್ಯವಸ್ಥೆ, ಮೇಲ್ಛಾವಣಿ ದುರಸ್ತಿ ಇತ್ಯಾದಿ ಮೂಲಸೌಲಭ್ಯ ಒದಗಿಸಿ ಕಟ್ಟಡವನ್ನು ಆಧುನೀಕರಿಸುವ ಮೂಲಕ ಇರುವ ವ್ಯವಸ್ಥೆಯಲ್ಲೇ ಉತ್ತಮವಾದುದನ್ನು ಸೃಷ್ಟಿಸಿ ಮಾದರಿಯಾಗಿದ್ದಾರೆ.2013ರಲ್ಲಿ ಪಟ್ಟಣದಿಂದ ತುಸು ದೂರವೇ ನಿರ್ಮಾಣಗೊಂಡಿದ್ದ ಈ ಕಟ್ಟಡದಲ್ಲಿ ನೀರು, ಶೌಚಾಲಯ ವ್ಯವಸ್ಥೆಗಳು ಅಪೂರ್ಣಗೊಂಡಿದ್ದ ಕಾರಣಕ್ಕೆ ಕಟ್ಟಡವನ್ನು ಇದುವರೆಗೂ ಪಡಿತರ ಅಕ್ಕಿ ಸಂಗ್ರಹಣೆಗೆ ಮಾತ್ರ ಬಳಸಲಾಗುತ್ತಿತ್ತು. ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಗೌರವಧನ, ತರಬೇತಿ ಇತ್ಯಾದಿ ಕಾರ್ಯಕ್ರಮ ದಿನಾಚರಣೆಗಳನ್ನು ಆಚರಿಸಲು ಸ್ಥಳಾವಕಾಶದ ತೊಂದರೆ ಗಮನಿಸಿದ ಸಿಡಿಪಿಒ ಎನ್.ಚರಣ್ ರಾಜ್ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಈ ಕಟ್ಟಡಕ್ಕೆ ಕಾಯಕಲ್ಪ ನೀಡಲು ನಿರ್ಧರಿಸಿ ಅದನ್ನು ಅನುಷ್ಠಾನಗೊಳಿಸಿರುವುದು ಶ್ಲಾಘನೀಯ ಎಂದು ತರೀಕೆರೆ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ರಮಾಮಣಿ ಹೇಳಿದ್ದಾರೆ.
ಸ್ತ್ರೀಶಕ್ತಿ ಭವನದ ಕಟ್ಟಡದ ಸಭಾಂಗಣ ವಿಶಾಲವಾಗಿರುವುದರಿಂದ ಸಭೆ ಸಮಾರಂಭಗಳನ್ನು ಈ ಭವನದಲ್ಲಿ ನಡೆಸಬಹುದಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಆಸ್ತಿ ಉಳಿಸಿಕೊಳ್ಳಲು ಇಲಾಖೆ ಸಿಬ್ಬಂದಿ ಹಾಗೂ ನಿರ್ಮಿತಿ ಕೇಂದ್ರದವರೂ ನೆರವಾಗಿರುವುದು ತಮಗೆ ಅತ್ಯಂತ ಹರ್ಷ ತಂದಿದೆ ಎಂದು ಚರಣ್ ರಾಜ್ ತಿಳಿಸಿದ್ದಾರೆ.ಸ್ತ್ರೀಶಕ್ತಿ ಸಂಘದ ಮಹಿಳೆಯರು ಸ್ವಾವಲಂಬಿಗಳಾಗಿ ತಾವು ಉತ್ಪಾದಿಸಿದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಒದಗಿಸುವ ಮಹತ್ವಾಂಕ್ಷೆಯಿಂದ ಈ ಕಟ್ಟಡ ನಿರ್ಮಿಸಲಾಗಿತ್ತು ಎಂದು ಹೇಳಿದರು.
ತಾಲೂಕು ಸ್ತ್ರೀಶಕ್ತಿ ಭವನ ಕಟ್ಟಡ ಸ್ತ್ರೀಶಕ್ತಿ ಸಂಘಗಳ ಚಟುವಟಿಕೆಗೆ ಸದ್ಬಳಕೆಯಾಗುವಂತೆ ಆಗಿದೆ. ಸಿಡಿಪಿಒ ಮತ್ತು ಸಿಬ್ಬಂದಿ ಸ್ವಂತ ಹಣ ಬಳಸಿ ಕಟ್ಟಡ ನವೀಕರಣಗೊಳಿಸಿರುವುದು ಸಂತೋಷ ತಂದಿದೆ.ರಮಾಮಣಿ, ಅಧ್ಯಕ್ಷೆ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ತರೀಕೆರೆ.
ಇಲಾಖೆ ಆಸ್ತಿಯನ್ನು ಸದ್ಬಳಕೆ ಮಾಡುವುದು ನನ್ನ ಕರ್ತವ್ಯ, ಮೂಲಭೂತ ಸೌಕರ್ಯ ಒದಗಿಸುವುದು ನನ್ನ ಮೊದಲ ಆದ್ಯತೆ. ಸ್ತ್ರೀಶಕ್ತಿ ಭವನದ ನವೀಕರಣಕ್ಕೆ ಸಹಕರಿಸಿದವರೆಲ್ಲರಿಗೂ ಧನ್ಯವಾದಗಳು.ಎನ್.ಚರಣ್ ರಾಜ್, ಸಿಡಿಪಿಒ, ಶಿಶು ಅಭಿವೃದ್ಧಿ ಇಲಾಖೆ, ತರೀಕೆರೆ.