ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಯವರು ಶಾಂತಿ ಮತ್ತು ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಯವರು ಶಾಂತಿ ಮತ್ತು ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹೇಳಿದರು.ಅವರು ಗುರುವಾರ ನಗರ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವದ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಯಚೂರು ಜಿಲ್ಲೆಯಲ್ಲಿ ಇದುವರೆಗೂ 7 ಶಾಂತಿ ಸಭೆಗಳನ್ನು ಬೇರೆ ಬೇರೆ ತಾಲ್ಲೂಕುಗಳಲ್ಲಿ ಮಾಡಲಾಗಿದೆ. ಎಲ್ಲಾ ಕಡೆಯೂ ಗಣೇಶೋತ್ಸವದ ಆಚರಣೆಯ ನಿಬಂಧನೆಗಳನ್ನು ಇಲಾಖೆಯು ಗಣೇಶೋತ್ಸವ ಮಂಡಳಿಗೆ ನೀಡಿದೆ. ಅದರಡಿಯಲ್ಲಿ ಎಲ್ಲರೂ ಶಾಂತಿ ಭಂಗವಾಗದಂತೆ ಹಬ್ಬ ಆಚರಿಸಬೇಕು. ಮಧ್ಯರಾತ್ರಿಯವರೆಗೆ ಅಶ್ಲೀಲಕರ ಹಾಡುಗಳನ್ನು ಹಾಕಿ ನೃತ್ಯ ಮಾಡಬಾರದು. ಹಾಗೇನಾದರೂ ಮಾಡಿದರೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿ ಗಣೇಶೋತ್ಸವ ಆಚರಣಾ ಮಂಡಳಿಯವರು ರಾತ್ರಿ 10.30 ಕ್ಕೆ ತಮ್ಮ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಬೇಕು. ಡಿ.ಜೆ.ಗಳನ್ನು ಬಳಸಬಾರದು. ಸೈಲೆನ್ಸರ್ ತೆಗೆದು ವಾಹನಗಳನ್ನು ಚಲಾಯಿಸಬಾರದು. ಬರಗಾಲ ಇರುವುದರಿಂದ ಹೆಚ್ಚು ದುಂದು ವೆಚ್ಚ ಮಾಡಬಾರದು. ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಹಬ್ಬವನ್ನು ಆಚರಿಸಬೇಕು. ಇದಕ್ಕೆ ಎಲ್ಲಾ ಧರ್ಮೀಯರು ಸಹಕರಿಸಬೇಕು ಎಂದು ಮನವಿ ಮಾಡಿದರು.ಡಿ.ವೈ.ಎಸ್.ಪಿ.ಚಂದ್ರಶೇಖರ ನಾಯಕ ಮಾತನಾಡಿ, ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಡಿ.ಜೆ.ಬಳಸಿದವರ ಹಾಗೂ ಸೈಲೆನ್ಸರ್ ಕಿತ್ತಿ ವಾಹನ ಚಲಾಯಿಸಿ ದವರ ಮೇಲೆ ಈಗಾಗಲೇ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ. ಸಂವಿಧಾನದ ನಿಯಮಗಳಡಿಯಲ್ಲಿ ಹಬ್ಬಗಳ ಆಚರಣೆಯಾಗಬೇಕು. ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಮಾತನಾಡಿ ಪಿಒಪಿ ಗಣಪತಿ ಪ್ರತಿಷ್ಠಾಪನೆಯಿಂದ ಕುಡಿಯುವ ನೀರು ಮಲೀನಗೊಳ್ಳುತ್ತದೆ. ಆದ್ದರಿಂದ ಪರಿಸರ ಪ್ರೇಮಿ, ಮಣ್ಣಿನ ಗಣಪಗಳನ್ನು ಪ್ರತಿಷ್ಠಾಪಿಸಬೇಕು. ಸಣ್ಣಪುಟ್ಟ ಗಣಪನ ಮೂರ್ತಿಗಳನ್ನು ವಿದ್ಯಾರ್ಥಿಗಳು ಪ್ರತಿಷ್ಠಾಪಿಸಿದರೆ ಕಡಿಮೆ ಹಣ ತೆಗೆದುಕೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.ಬಾಬರ್ಪಾಷಾ ವಕೀಲ, ನಗರಸಭೆ ಮಾಜಿ ಸದಸ್ಯರಾದ ಕೆ.ಜಿಲಾನಿ ಪಾಷಾ, ಎಂ.ಡಿ.ನದೀಮ್ಮುಲ್ಲಾ, ಮುಖಂಡರಾದ ಹೆಚ್.ಎನ್.ಬಡಿಗೇರ, ಹಾರೂನ್ಪಾಷಾ ಜಹಗೀರದಾರ, ಚನ್ನಬಸಯ್ಯಸ್ವಾಮಿ ಹಿರೇಮಠ, ಮಂಜುನಾಥ ಗಾಣಿಗೇರಾ ಮಾತನಾಡಿದರು. ಈ ವೇಳೆ ಮುಖಂಡರಾದ ವಿಜಯ್ ಚೌದ್ರಿ, ಮನೋಹರ, ಆನಂದಸಾ ರಾಯಭಾಗಿ, ವೀರೇಶ ಯಡಿಯೂರಮಠ, ಹುಸೇನಬಾಷಾ, ಸಲ್ಮಾನ್ ಪಾಷಾ, ಗದ್ದೆಪ್ಪ ಸೇರಿದಂತೆ ವಿವಿಧ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಮಂಡಳಿಯವರು ಭಾಗವಹಿಸಿದ್ದರು.