ಶಾಂತಿ, ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸಿ: ಡಿಸಿ

| Published : Mar 05 2025, 12:36 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲಿ ಮಾ.14 ರಿಂದ 16ರವರೆಗೆ ನಡೆಯಲಿರುವ ಹೋಳಿ ಸಂಭ್ರಮವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಮಾ.14 ರಿಂದ 16ರವರೆಗೆ ನಡೆಯಲಿರುವ ಹೋಳಿ ಸಂಭ್ರಮವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹೋಳಿ ಹಬ್ಬದ ಕುರಿತು ಜರುಗಿದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬಗಳು ಇರುವುದು ಸಂಭ್ರಮ ಪಡುವುದಕ್ಕಾಗಿ. ದೇಶದಲ್ಲಿ 2ನೇ ಸ್ಥಾನ ಪಡೆದಿರುವ ಬಾಗಲಕೋಟೆ ಹೋಳಿಯನ್ನು ಶಿಸ್ತಿನಿಂದ ಅಚ್ಚುಕಟ್ಟಾಗಿ ಆಚರಿಸಬೇಕಿದೆ. ನಗರದ ಹೋಳಿ ಆಚರಣೆ ಸಂಘಟನೆಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿ ಶಾಂತಿ ಕಾಪಾಡುವ ಜೊತೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಜೊತೆ ಸಹಕರಿಸಬೇಕೆಂದರು.

ವದಂತಿಗಳಿಗೆ ಕಿವಿಗೊಡಬಾರದು. ಪರಸ್ಪರ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಇದೇ ಸಮಯದಲ್ಲಿ ಪಿಯು ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಂತೆ ನಿಗಾವಹಿಸಬೇಕು. ಆಚರಣೆಯಲ್ಲಿ ಸಮಸ್ಯೆ ಉಂಟಾದಲ್ಲಿ ನೇರವಾಗಿ ಪೊಲೀಸ್ ಇಲಾಖೆ ಸಂಪರ್ಕಿಸಬೇಕು. ಹೋಳಿ ಆಚರಣೆಗೆ ಬಿಡುಗಡೆಯಾದ ಅನುದಾನ ಮರಳಿ ತರಲು ಕ್ರಮ ವಹಿಸುವುದಾಗಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಹಬ್ಬಗಳೆಂದರೆ ಸಂಭ್ರಮ ಸಹಜ. ಸಂಭ್ರಮಾಚರಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಕೊಡಬಾರದು. ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಹಲಗೆ ಮೇಳ ಸ್ಪರ್ಧೆಗಳು ನಡೆಯುವ ಸ್ಥಳಗಳ ಮಾಹಿತಿ ನೀಡಿದಲ್ಲಿ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಹೋಳಿ ಸಮಿತಿ ಪ್ರತಿನಿಧಿ ಮಹಾಬಳೇಶ ಗುಡಗುಂಟಿ ಮಾತನಾಡಿ, ಮಾ.12 ರಿಂದ ಹೋಳಿ ಹಬ್ಬ ಪ್ರಾರಂಭಗೊಳ್ಳುತ್ತಿದ್ದು, ಮಾ.13ರಂದು ಕಾಮದಹನವಾಗಲಿದೆ. ಮಾ.14 ರಿಂದ 16ರವರೆಗೆ ಮೂರು ದಿನಗಳ ಕಾಲ ಬಣ್ಣದೋಕುಳಿ ನಡೆಯಲಿದೆ.14ರಂದು ಕಿಲ್ಲಾ, ನವನಗರ ಹಾಗೂ ವಿದ್ಯಾಗಿರಿ, 15ರಂದು ಹಳಪೇಟೆ, ಜೈನ ಪೇಟೆ ಹಾಗೂ ವೆಂಕಟಪೇಟೆ, 16ರಂದು ಹೊಸಪೇಟೆ ಓಣಿಯಲ್ಲಿ ಬಣ್ಣದೋಕುಳಿ ನಡೆಯಲಿದೆ ಎಂದರು.ಸೋಗಿನ ಬಂಡಿ ಮೆರವಣಿಗೆ ಕೂಡ ನಡೆಯಲಿದ್ದು, 13ರಂದು ಕಿಲ್ಲಾ, 14ರಂದು ಹಳಪೇಟೆ, 15ರಂದು ಹೊಸಪೇಟಿ, 16ರಂದು ಜೈನ ಪೇಟೆ, 17ರಂದು ವೆಂಕಟಪೇಟೆ ಹಾಗೂ ವಿದ್ಯಾಗಿರಿಯಲ್ಲಿ ಬಂಡಿ ಮೆರವಣಿಗೆ ನಡೆಯಲಿದೆ. ನಗರದ ಬಸವೇಶ್ವರ ವೃತ್ತದ ಬಳಿಯಿರುವ ಹೊಳೆ ಆಂಜನೇಯ ದೇವಸ್ಥಾನ ಆವರಣ ಹಾಗೂ ಕಿಲ್ಲಾ ಅಂಬಾಭವಾನಿ ದೇವಸ್ಥಾನ ಬಳಿ ರೇನ್‌ ಡ್ಯಾನ್ಸ್‌ ನಡೆಯಲಿದೆ. ಹೋಳಿ ಆಚರಣೆಗೆ ಜಿಲ್ಲೆಗೆ ನೀಡಲಾದ ₹10 ಲಕ್ಷ ಅನುದಾನ ಮರಳಿ ಪಡೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಮಾಂತೇಶ ಜಿದ್ದಿ, ಡಿವೈಎಸ್ಪಿ ಬಿರಾದಾರ, ನವನಗರ ಸಿಪಿಐ ಗುರುನಾಥ ಚವ್ಹಾಣ ಸೇರಿದಂತೆ ಹೋಳಿ ಆಚರಣೆ ಸಮಿತಿಯ ಪ್ರತಿನಿಧಿಗಳಾದ ಕಳಕಪ್ಪ ಬಾದವಾಡಗಿ, ಅಶೋಕ ಲಿಂಬಾವಳಿ, ಸಂಚು ವಾಡಕರ, ನಾಗರಾಜ ಹದ್ಲಿ, ಶ್ರಣವ ಖಾತೇದಾರ, ಬಸವರಾಜ ಧರ್ಮಂತಿ, ಶಿವುಕುಮಾರ ನಂದಿಕೋಳಮಠ, ವಿವೇಕಾನಂದ ಗರಸಂಗಿ ಎ.ಎ.ದಂಡಿಯಾ ಮತ್ತು ಟಂಕಸಾಲಿ ಉಪಸ್ಥಿತರಿದ್ದರು.